Last Updated:
ಗೋವಾದ 21 ಕನ್ನಡ ಶಾಲೆಗಳ ಭವಿಷ್ಯ ಪ್ರಶ್ನಾರ್ಥಕವಾಗಿದೆಯೇ? ಸರ್ಕಾರದ ಹೊಸ ಕ್ರಮ ಶಿಕ್ಷಣ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಂಪೂರ್ಣ ವರದಿ ಓದಿ
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ಸಿನಿಮಾ ನೆನಪಿದೆಯಾ? ಕೇರಳದ ಗಡಿಯಲ್ಲಿರುವ ಏಕೈಕ ಕನ್ನಡ ಶಾಲೆಯನ್ನು (Kannada School) ಮುಚ್ಚಲು ಅಲ್ಲಿನ ಮಲಯಾಳಂ ಸರ್ಕಾರ ನಡೆಸುವ ಹುನ್ನಾರ, ಅತಂತ್ರರಾಗುವ ಮುಗ್ಧ ಕನ್ನಡಿಗ ಮಕ್ಕಳು (Children) ಹಾಗೂ ಮಾತೃಭಾಷೆಯ ಉಳಿವಿಗಾಗಿ ನಡೆಯುವ ಹೋರಾಟ (Struggle) ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲೂ ನೀರು ತರಿಸಿತ್ತು. ಕೇವಲ ಬೆಳ್ಳಿತೆರೆಯ ಮೇಲಷ್ಟೇ ಅಲ್ಲ, ಈಗ ಅದೇ ಕಥೆ ನೆರೆಯ ಗೋವಾದಲ್ಲಿ (Goa) ಅಕ್ಷರಶಃ ಮರುಕಳಿಸುತ್ತಿದೆ!
ಹೌದು, ಆರೇಳು ದಶಕಗಳಿಂದ ತನ್ನ ನೆಲದಲ್ಲಿ ವಾಸವಾಗಿರುವ ವಲಸಿಗ ಕನ್ನಡಿಗರನ್ನು ಏಕಾಏಕಿ ಒಕ್ಕಲೆಬ್ಬಿಸುವ ಮತ್ತು ಉದ್ಯೋಗ ನಿರಾಕರಿಸುವ ಮೂಲಕ ನಿರಂತರ ಕಿರುಕುಳ ನೀಡುತ್ತಿರುವ ಗೋವಾ ಸರ್ಕಾರ, ಇದೀಗ ತನ್ನ ರಾಜ್ಯದಲ್ಲಿರುವ 21 ಕನ್ನಡ ಮಾಧ್ಯಮ ಶಾಲೆಗಳಿಗೆ ಮರಣ ಶಾಸನ ಬರೆದಿದೆ.
ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರ ಕಟ್ಟುನಿಟ್ಟಿನ ಅನುಷ್ಠಾನದ ನೆಪವೊಡ್ಡಿ ಗೋವಾ ಸರ್ಕಾರ ‘ತ್ರಿಭಾಷಾ ಸೂತ್ರ’ವನ್ನು (ಕೊಂಕಣಿ/ಮರಾಠಿ, ಹಿಂದಿ, ಇಂಗ್ಲಿಷ್) ಜಾರಿ ಮಾಡಿದೆ. ಈ ಮೂಲಕ ತಾನೇ ಸ್ಥಾಪಿಸಿದ್ದ 19 ಸರ್ಕಾರಿ ಶಾಲೆಗಳು (15 ಪ್ರಾಥಮಿಕ, 4 ಹಿರಿಯ ಪ್ರಾಥಮಿಕ) ಹಾಗೂ 2 ಖಾಸಗಿ ಅನುದಾನಿತ ಹೈಸ್ಕೂಲ್ಗಳನ್ನು ಮುಚ್ಚಲು ರಹದಾರಿ ಸಿದ್ಧಪಡಿಸಿಕೊಂಡಿದೆ. ಈ ತ್ರಿಭಾಷಾ ಸೂತ್ರದಡಿ ಕೊಂಕಣಿ/ಮರಾಠಿ ಜೊತೆಗೆ ಇತರ ಭಾಷಾ ಮಾಧ್ಯಮ ಬೋಧಿಸಲು ಅವಕಾಶವಿದೆ ಎಂಬ ನಿಯಮ ರೂಪಿಸಿ, ಅತ್ಯಂತ ಜಾಣತನದಿಂದ ಕಾನೂನು ಕುಣಿಕೆಯಿಂದ ಗೋವಾ ಸರ್ಕಾರ ನುಣುಚಿಕೊಂಡಿದೆ.
ಕಾಸರಗೋಡು ಸಿನಿಮಾದಲ್ಲಿ ಕನ್ನಡ ಶಾಲೆಯ ಮೇಷ್ಟ್ರುಗಳಿಗೆ ಬಲವಂತವಾಗಿ ಮಲಯಾಳಂ ಕಲಿಸಲು ಆದೇಶಿಸುವ ದೃಶ್ಯವಿದೆ. ಗೋವಾದಲ್ಲಿ ಪರಿಸ್ಥಿತಿ ಅದಕ್ಕಿಂತಲೂ ಭೀಕರವಾಗಿದೆ:
- ಕನ್ನಡ ಶಿಕ್ಷಕರ ಜಾಗಕ್ಕೆ ಮರಾಠಿ ಟೀಚರ್ಸ್: ನಿವೃತ್ತಿ ಮತ್ತಿತರ ಕಾರಣಗಳಿಂದ ತೆರವಾಗಿರುವ 36 ಕನ್ನಡ ಬೋಧಕ ಹುದ್ದೆಗಳಿಗೆ ಗೋವಾ ಸರ್ಕಾರ ನೇರವಾಗಿ ಮರಾಠಿ ಶಿಕ್ಷಕರನ್ನು ನೇಮಿಸಿದೆ.
- ಕನ್ನಡ ಕಲಿಯುವಂತೆಯೇ ಇಲ್ಲ: ಪ್ರಸಕ್ತ ಸಾಲಿನಿಂದ (2026-27) ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳು ಕೊಂಕಣಿ ಅಥವಾ ಮರಾಠಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ. ಕನ್ನಡಕ್ಕೆ ಅಲ್ಲಿ ಅವಕಾಶವೇ ಇಲ್ಲ!
- ಮರಾಠಿ ಓದುವ ಅನಿವಾರ್ಯತೆ: ಈಗಾಗಲೇ 3 ರಿಂದ 7ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳಿಗೆ ಗಣಿತ, ಪರಿಸರ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಬಹುದು ಎಂದಿದ್ದರೂ, ಅಲ್ಲಿ ಕನ್ನಡ ಶಿಕ್ಷಕರೂ ಇಲ್ಲ, ಪಠ್ಯಪುಸ್ತಕಗಳೂ ಇಲ್ಲ. ಪರಿಣಾಮ, ಕನ್ನಡಿಗ ಮಕ್ಕಳು ಅನಿವಾರ್ಯವಾಗಿ ಮರಾಠಿಯಲ್ಲೇ ಓದಬೇಕಿದೆ.
- ಹೈಸ್ಕೂಲ್ ಮಟ್ಟದಲ್ಲೂ ಕುತ್ತು: ಕಾರವಾರದ ಶಿವಾಜಿ ಸೆಕೆಂಡರಿ ಸ್ಕೂಲ್ಗೆ ಅಫಿಲೇಟೆಡ್ ಆಗಿ ಕರ್ನಾಟಕ ಸಿಲೆಬಸ್ ಬೋಧಿಸುತ್ತಿದ್ದ ಹೈಸ್ಕೂಲುಗಳಿಗೂ ಈಗ ಕೊಕ್ಕೆ ಬಿದ್ದಿದೆ.
ಉದ್ಯೋಗ ಅರಸಿ ಗೋವಾಕ್ಕೆ ಹೋದ ಕನ್ನಡಿಗರ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವ ಸದುದ್ದೇಶದಿಂದ ಬಾಗಲಕೋಟೆಯ ಗುಳೇದಗುಡ್ಡದ ವೈ.ಆರ್. ಬೆಳಗಲಿ ಅವರು 90ರ ದಶಕದಲ್ಲೇ ವಾಸ್ಕೋದ ಮೂರು ಕಡೆ ‘ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆ’ಗಳನ್ನು ತೆರೆದಿದ್ದರು. ಅನುದಾನಿತವಾಗಿದ್ದ ಈ ಶಾಲೆಗಳಿಗೂ ಈಗ ಮರಾಠಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರ ಫರ್ಮಾನು ಹೊರಡಿಸಿದೆ. ಸರ್ಕಾರದ ಈ ಕನ್ನಡ ವಿರೋಧಿ ನಿಲುವಿನಿಂದಾಗಿ ಕನ್ನಡಿಗ ಮಕ್ಕಳು ಮರಾಠಿ ಮಾಧ್ಯಮಕ್ಕೆ ಸೇರುತ್ತಿಲ್ಲ. ಪರಿಣಾಮ, ಈಗಾಗಲೇ 4 ಕನ್ನಡ ಶಾಲೆಗಳಿಗೆ ಬೀಗ ಬಿದ್ದಿದೆ.
ಗೋವಾದಲ್ಲಿ ಪ್ರಸ್ತುತ ಕನ್ನಡಿಗರ ಸಂಖ್ಯೆ 4 ಲಕ್ಷ ದಾಟುತ್ತದೆ. ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಹಂಗಾಮುವಾರು ವಲಸಿಗರು. ಮರ್ಮಗೋವಾ, ವಾಸ್ಕೋ, ದಾಬೋಲಿಂ ಮತ್ತು ಪರಿವಲಿಂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಕನ್ನಡಿಗರ ಮತಗಳೇ ನಿರ್ಣಾಯಕ.
ಇದನ್ನೇ ಮುಂದಿಟ್ಟುಕೊಂಡು ‘ಕನ್ನಡ ಸಂಘ, ಜುವಾರಿನಗರ’ದ ನೇತೃತ್ವದಲ್ಲಿ ನಾಲ್ಕೂ ಶಾಸಕರೊಂದಿಗೆ ಕನ್ನಡಿಗರ ನಿಯೋಗ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿತ್ತು. ಆದರೆ, “10ನೇ ತರಗತಿ ಬಳಿಕ ಗೋವಾದಲ್ಲಿ ಕನ್ನಡ ಮಾಧ್ಯಮ ಕಾಲೇಜುಗಳಿಲ್ಲ. ಹಾಗಾಗಿ ಬಾಲ್ಯದಿಂದಲೇ ಕೊಂಕಣಿ, ಮರಾಠಿ ರೂಢಿಸಿಕೊಂಡರೆ ಅವರ ಭವಿಷ್ಯಕ್ಕೆ ಒಳ್ಳೆಯದು” ಎಂಬ ಹಾರಿಕೆ ಉತ್ತರವನ್ನು ಸಿಎಂ ನೀಡಿದ್ದಾರೆ ಎಂಬುದನ್ನು ಕನ್ನಡ ಪ್ರಭ ವರದಿ ಮಾಡಿದೆ.
ಭಾಷೆ ನಮ್ಮ ಸಂಸ್ಕೃತಿ
ಗೋವಾವನ್ನು ತಮ್ಮ ಬೆವರಿನಿಂದ ಕಟ್ಟಿ ಬೆಳೆಸಿದವರು ಕನ್ನಡಿಗರು. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಸಿಗದಿದ್ದರೆ ಆ ಮಕ್ಕಳ ಭವಿಷ್ಯದ ಮೇಲಾಗುವ ಪರಿಣಾಮ ಊಹಾತೀತ. ಕಾಸರಗೋಡು ಸಿನಿಮಾದಲ್ಲಿ ಅನಂತ್ ನಾಗ್ ಅವರ ಪಾತ್ರ ಹೇಳುವಂತೆ, “ಭಾಷೆ ಅಂದ್ರೆ ಕೇವಲ ಅಕ್ಷರಗಳಲ್ಲ, ಅದು ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆ.” ಗೋವಾ ಮುಖ್ಯಮಂತ್ರಿಗಳು ತಕ್ಷಣವೇ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಕನ್ನಡಿಗರ ಮಾತೃಭಾಷಾ ಹಕ್ಕನ್ನು ಮರಳಿಸಬೇಕಿದೆ. ಇಲ್ಲವಾದಲ್ಲಿ, ಕಾಸರಗೋಡಿನ ಶಾಲೆಯುಳಿವಿಗಾಗಿ ನಡೆದಂತಹದ್ದೇ ಒಂದು ಬೃಹತ್ ಹೋರಾಟ ಗೋವಾದಲ್ಲೂ ನಡೆಯುವುದು ಅನಿವಾರ್ಯವಾಗಲಿದೆ.
Bangalore [Bangalore],Bangalore,Karnataka
Goa Controversy: 21 ಕನ್ನಡ ಶಾಲೆಗಳಿಗೆ ಬೀಗ ಬೀಳುತ್ತದೆಯೇ? ʼಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’ ಕಥೆ ನೆನಪಿಸಿದ ಗೋವಾ ಸರ್ಕಾರ, ಕನ್ನಡ ಮಕ್ಕಳಿಗೆ ನೆರೆ ಮನೆಯೇ ವಿಲನ್?

