Advertisement
Advertisement

Teachers Problem: ಶುರುವಾಯ್ತು ಹೊಸ ತಲೆನೋವು, 22 ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ? ದ್ವಿಭಾಷಾ ಮಾಧ್ಯಮ ಸಕ್ಸಸ್‌ ಆಗುತ್ತಾ?

Whatsapp image 2026 06 20 at 12.51.48 2026 06 8247680a6c7b36046cd7fa0a163302cf 1200x675.jpeg


Last Updated:

ದಕ್ಷಿಣ ಕನ್ನಡದ ಕಡಬ, ಪುತ್ತೂರು ತಾಲೂಕುಗಳಲ್ಲಿ 388 ಶಿಕ್ಷಕರ ಹುದ್ದೆಗಳು ಖಾಲಿ, 22 ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ, ದ್ವಿಭಾಷಾ ಮಾಧ್ಯಮ ಜಾರಿಗೆ ಬಂದಿದ್ದು ಈ ಶಿಕ್ಷಕರ ಕೊರತೆಯ ನಡುವೆ ಹೊಸ ಶಿಕ್ಷಣ ನೀತಿಯ ಸಾಧಕ-ಭಾದಕ ಚರ್ಚೆಯಾಗುತ್ತಿದೆ.

ಶಿಕ್ಷಕ-ಸಿಬ್ಬಂದಿ ಕೊರತೆ
ಶಿಕ್ಷಕ-ಸಿಬ್ಬಂದಿ ಕೊರತೆ

ದಕ್ಷಿಣ ಕನ್ನಡ: ಸರ್ಕಾರಿ ಶಾಲೆಗಳನ್ನು (Government School) ಉಳಿಸಿ, ಮಕ್ಕಳನ್ನು ಸೇರಿಸಿ ಎಂದು ಅಭಿಯಾನ ನಡೆಸುತ್ತಿರುವ ಈ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಅವಿಭಜಿತ ಪುತ್ತೂರು ತಾಲೂಕಿನಿಂದ ಆಘಾತಕಾರಿ ವರದಿ (Report) ಹೊರಬಿದ್ದಿದೆ. ಕಡಬ ಮತ್ತು ಪುತ್ತೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಬರೋಬ್ಬರಿ 388 ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ. ಅದರಲ್ಲೂ ಅತ್ಯಂತ ಆತಂಕಕಾರಿ ಸಂಗತಿ ಎಂದರೆ 22 ಪ್ರಾಥಮಿಕ ಶಾಲೆಗಳಲ್ಲಿ ಒಬ್ಬನೇ ಒಬ್ಬ ಖಾಯಂ ಶಿಕ್ಷಕರಿಲ್ಲ ಎಂಬುದು!

ಅಂಕಿ-ಅಂಶಗಳ ವಿಷಯ ಇಲ್ಲಿದೆ ನೋಡಿ

ಅಂಕಿ-ಅಂಶಗಳ ಮೇಲೆ ಕಣ್ಣು ಹಾಯಿಸಿದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಅರ್ಥವಾಗುತ್ತದೆ. ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಒಟ್ಟು 178 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ 903 ಶಿಕ್ಷಕರ ಹುದ್ದೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಕೇವಲ 563 ಮಾತ್ರ, ಅಂದರೆ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಸಂಖ್ಯೆ ಒಂದೇ 340! ಪ್ರೌಢ ಶಾಲೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ತಾಲೂಕಿನ 23 ಪ್ರೌಢ ಶಾಲೆಗಳಲ್ಲಿ 221 ಶಿಕ್ಷಕರ ಹುದ್ದೆ ಮಂಜೂರಾಗಿದ್ದರೂ, ಕರ್ತವ್ಯ ನಿರ್ವಹಿಸುತ್ತಿರುವವರು 173 ಮಾತ್ರ, ಅಂದರೆ 48 ಹುದ್ದೆಗಳು ಖಾಲಿ.

ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ

ಇದಕ್ಕೂ ಮೀರಿ ಆಡಳಿತ ವ್ಯವಸ್ಥೆಯೇ ಹೇಗಿದೆ ಎಂದರೆ ಇಡೀ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕಳೆದ 8 ತಿಂಗಳಿನಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯೇ ಖಾಲಿ ಬಿದ್ದಿದ್ದು, ಪ್ರಭಾರ ವ್ಯವಸ್ಥೆಯಲ್ಲಿ ಕಾರ್ಯ ನಡೆಸಲಾಗುತ್ತಿದೆ. ಅದೇ ಕಚೇರಿಯಲ್ಲಿ 32 ಮಂಜೂರಾದ ಹುದ್ದೆಗಳಲ್ಲಿ 8 ಖಾಲಿ ಇವೆ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಪರಿಸ್ಥಿತಿ ಇನ್ನೂ ಶೋಚನೀಯ. 30 ಮಂಜೂರಾದ ಹುದ್ದೆಗಳಲ್ಲಿ ಕೇವಲ 13 ಮಂದಿ ಮಾತ್ರ ಇದ್ದು, 17 ಹುದ್ದೆಗಳು ಖಾಲಿ ಬಿದ್ದಿವೆ.

ದ್ವಿಭಾಷಾ ಮಾಧ್ಯಮದ ಹೊಸ ಚಿಂತನೆಯೇ ಮುಳ್ಳಾಯಿತೇ?

ಈ ಶಿಕ್ಷಕರ ಕೊರತೆ ಈಗ ಒಂದು ಹೊಸ ಸಂಕಟಕ್ಕೆ ಕಾರಣವಾಗುತ್ತಿದೆ. 2026-27ನೇ ಶೈಕ್ಷಣಿಕ ವರ್ಷದಿಂದ 1ರಿಂದ 5ನೇ ತರಗತಿಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿಗೆ ಬಂದಿದ್ದು, ಪ್ರತಿ ಪಠ್ಯವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪಾಠ ಮಾಡಬೇಕು. ಪರೀಕ್ಷೆ ಮಾತ್ರ ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯಲಿದೆ. ಹಿಂದಿನ ನಲಿ-ಕಲಿ ವ್ಯವಸ್ಥೆಗಿಂತ ಭಿನ್ನವಾಗಿ ಇಲ್ಲಿ ಪ್ರತಿ ತರಗತಿಗೆ ಪ್ರತ್ಯೇಕ ತರಬೇತಿ ಪಡೆದ ಶಿಕ್ಷಕರ ಅಗತ್ಯ ಇದೆ. ಆದರೆ ಈ ಪ್ರಮಾಣದ ಶಿಕ್ಷಕರ ಕೊರತೆಯ ನಡುವೆ ದ್ವಿಭಾಷಾ ಮಾಧ್ಯಮದ ಹೊಸ ಚಿಂತನೆ ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ರಾಜ್ಯಮಟ್ಟದ ಅಂಕಿ-ಅಂಶ ಹೀಗಿದೆ

ಇದನ್ನೂ ಓದಿ: Special Fruit: ಹಲಸಿನ ದೂರದ ತಮ್ಮ , ರಂಬೂಟಾನ್‌ನ ದೊಡ್ಡಣ್ಣ ಈ ಹಣ್ಣು; ಕರಾವಳಿಯಲ್ಲಿ ಟ್ರೆಂಡ್‌ ಆಗುತ್ತಿದೆ ಈ ಹೊಸ ಸಿಹಿಯ ಫಲ!

ಒಂದು ಕಡೆ ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮದ ಆಕರ್ಷಣೆ, ಬಸ್ ಸೇರಿದಂತೆ ಇತರ ಸೌಲಭ್ಯಗಳ ಆಮಿಷ ತೋರಿ ಸರ್ಕಾರಿ ಶಾಲೆಗಳ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಸೆಳೆಯುತ್ತಿದ್ದರೆ, ಮತ್ತೊಂದು ಕಡೆ ಶಿಕ್ಷಕರ ಕೊರತೆ ಪೋಷಕರ ವಿಶ್ವಾಸ ಕುಂದಿಸುತ್ತಿದೆ. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ 2026-27ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 40,000 ಮತ್ತು ಪ್ರೌಢ ಶಾಲೆಗಳಿಗೆ 11,000 ಸೇರಿ ಒಟ್ಟು 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ಹೊರಡಿಸಿದ್ದು, ಇದು ತಾತ್ಕಾಲಿಕ ಪರಿಹಾರ ಮಾತ್ರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,541 ಶಿಕ್ಷಕರ ತೀವ್ರ ಅಗತ್ಯವಿದೆ ಎಂದು DIET ಪ್ರಾಂಶುಪಾಲರು ಮೇ 2026ರಲ್ಲೇ ಸ್ಪಷ್ಟಪಡಿಸಿದ್ದಾರೆ. ಖಾಯಂ ಶಿಕ್ಷಕರ ನೇಮಕಾತಿ ತ್ವರಿತವಾಗಿ ಆಗದಿದ್ದರೆ ಸರ್ಕಾರಿ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಆತಂಕ ಮನೆ ಮಾಡಿದೆ.



Source link

Leave a Reply

Your email address will not be published. Required fields are marked *

TOP