Last Updated:
ಚಾಮರಾಜನಗರ ಉದ್ಯೋಗ ಮೇಳದಲ್ಲಿ 1290 ಅಭ್ಯರ್ಥಿಗಳಲ್ಲಿ 193 ಜನ ಸ್ಥಳದಲ್ಲೇ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಸುನಿಲ್ ಬೋಸ್ ನೇಮಕಾತಿ ಪತ್ರ ವಿತರಿಸಿದರು. 101 ಕಂಪನಿಗಳು ಭಾಗವಹಿಸಿದ್ದವು.
ಚಾಮರಾಜನಗರ: ರಾಜ್ಯದೆಲ್ಲೆಡೆ ಉದ್ಯೋಗಾರ್ಥಿಗಳ (Aspirants) ಸಂಘರ್ಷ ಜೋರಾಗಿದೆ. ವಯಸ್ಸು ಓಡುತ್ತಿದೆ, ನೇಮಕಾತಿ ಆಗುತ್ತಿಲ್ಲ ಎಂಬ ಸಮಸ್ಯೆಯಿಂದ ಯುವಜನ ರೋಸಿ ಹೋಗಿದ್ದಾರೆ. ಈ ರೀತಿಯ ಘೋರ ಕತ್ತಲಲ್ಲಿ ಮಿಂಚಿನ ಹುಳುವಿನಂತಹ ಒಂದು ಅವಕಾಶ (Opportunity) ಚಾಮರಾಜನಗರ ಜಿಲ್ಲೆಯ ಯುವಕ-ಯುವತಿಯರಿಗೆ ಸಿಕ್ಕಿದ್ದು ವಿಶೇಷವಾಗಿತ್ತು.
ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಂಜೀವಿನಿ–ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಇತರ ಇಲಾಖೆ, ನಿಗಮಗಳ ಆಶ್ರಯದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಸ್ಥಳದಲ್ಲಿಯೇ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಶುಭ ಹಾರೈಸಿದರು. ಉದ್ಯೋಗ ಮೇಳವು ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಯಶಸ್ವಿಯಾಗಿ ನಡೆಯಿತು. ಶುಕ್ರವಾರ ನಡೆದ ಈ ಮೇಳಕ್ಕೆ ಆನ್ಲೈನ್ ಮೂಲಕ 668 ಹಾಗೂ ಆಫ್ಲೈನ್ ಮೂಲಕ 602 ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,290 ಮಂದಿ ನೋಂದಾಯಿಸಿದ್ದರು. ಇವರಲ್ಲಿ 495 ಪುರುಷರು ಮತ್ತು 790 ಮಹಿಳೆಯರು ಸೇರಿದ್ದಾರೆ. ಮೇಳದಲ್ಲಿ 101 ಉದ್ಯೋಗದಾತ ಕಂಪನಿಗಳು ಭಾಗವಹಿಸಿದ್ದವು.
100 ಕ್ಕೂ ಹೆಚ್ಚು ಕಂಪನಿಗಳ ಭಾಗವಹಿಸುವಿಕೆ
ಸ್ಥಳದಲ್ಲಿಯೇ 85 ಪುರುಷರು ಮತ್ತು 108 ಮಹಿಳೆಯರು ಸೇರಿದಂತೆ ಒಟ್ಟು 193 ಅಭ್ಯರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಇನ್ನೂ 190 ಪುರುಷರು ಹಾಗೂ 290 ಮಹಿಳೆಯರು ಸೇರಿದಂತೆ ಒಟ್ಟು 480 ಅಭ್ಯರ್ಥಿಗಳು ದ್ವಿತೀಯ ಹಂತದ (ಶಾರ್ಟ್ಲಿಸ್ಟ್) ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಅವರು ಮಾತನಾಡಿ, ಕಳೆದ ವರ್ಷ ನಡೆದ ಉದ್ಯೋಗ ಮೇಳದಲ್ಲಿ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಲಭಿಸಿತ್ತು. ಈ ಬಾರಿ 100ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು, ಹೆಚ್ಚಿನ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
Mysore,Karnataka

