Last Updated:
ದಕ್ಷಿಣ ಕನ್ನಡದ ಕಡಬ, ಪುತ್ತೂರು ತಾಲೂಕುಗಳಲ್ಲಿ 388 ಶಿಕ್ಷಕರ ಹುದ್ದೆಗಳು ಖಾಲಿ, 22 ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ, ದ್ವಿಭಾಷಾ ಮಾಧ್ಯಮ ಜಾರಿಗೆ ಬಂದಿದ್ದು ಈ ಶಿಕ್ಷಕರ ಕೊರತೆಯ ನಡುವೆ ಹೊಸ ಶಿಕ್ಷಣ ನೀತಿಯ ಸಾಧಕ-ಭಾದಕ ಚರ್ಚೆಯಾಗುತ್ತಿದೆ.
ದಕ್ಷಿಣ ಕನ್ನಡ: ಸರ್ಕಾರಿ ಶಾಲೆಗಳನ್ನು (Government School) ಉಳಿಸಿ, ಮಕ್ಕಳನ್ನು ಸೇರಿಸಿ ಎಂದು ಅಭಿಯಾನ ನಡೆಸುತ್ತಿರುವ ಈ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಅವಿಭಜಿತ ಪುತ್ತೂರು ತಾಲೂಕಿನಿಂದ ಆಘಾತಕಾರಿ ವರದಿ (Report) ಹೊರಬಿದ್ದಿದೆ. ಕಡಬ ಮತ್ತು ಪುತ್ತೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಬರೋಬ್ಬರಿ 388 ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ. ಅದರಲ್ಲೂ ಅತ್ಯಂತ ಆತಂಕಕಾರಿ ಸಂಗತಿ ಎಂದರೆ 22 ಪ್ರಾಥಮಿಕ ಶಾಲೆಗಳಲ್ಲಿ ಒಬ್ಬನೇ ಒಬ್ಬ ಖಾಯಂ ಶಿಕ್ಷಕರಿಲ್ಲ ಎಂಬುದು!
ಅಂಕಿ-ಅಂಶಗಳ ಮೇಲೆ ಕಣ್ಣು ಹಾಯಿಸಿದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಅರ್ಥವಾಗುತ್ತದೆ. ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಒಟ್ಟು 178 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ 903 ಶಿಕ್ಷಕರ ಹುದ್ದೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಕೇವಲ 563 ಮಾತ್ರ, ಅಂದರೆ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಸಂಖ್ಯೆ ಒಂದೇ 340! ಪ್ರೌಢ ಶಾಲೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ತಾಲೂಕಿನ 23 ಪ್ರೌಢ ಶಾಲೆಗಳಲ್ಲಿ 221 ಶಿಕ್ಷಕರ ಹುದ್ದೆ ಮಂಜೂರಾಗಿದ್ದರೂ, ಕರ್ತವ್ಯ ನಿರ್ವಹಿಸುತ್ತಿರುವವರು 173 ಮಾತ್ರ, ಅಂದರೆ 48 ಹುದ್ದೆಗಳು ಖಾಲಿ.
ಇದಕ್ಕೂ ಮೀರಿ ಆಡಳಿತ ವ್ಯವಸ್ಥೆಯೇ ಹೇಗಿದೆ ಎಂದರೆ ಇಡೀ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕಳೆದ 8 ತಿಂಗಳಿನಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯೇ ಖಾಲಿ ಬಿದ್ದಿದ್ದು, ಪ್ರಭಾರ ವ್ಯವಸ್ಥೆಯಲ್ಲಿ ಕಾರ್ಯ ನಡೆಸಲಾಗುತ್ತಿದೆ. ಅದೇ ಕಚೇರಿಯಲ್ಲಿ 32 ಮಂಜೂರಾದ ಹುದ್ದೆಗಳಲ್ಲಿ 8 ಖಾಲಿ ಇವೆ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಪರಿಸ್ಥಿತಿ ಇನ್ನೂ ಶೋಚನೀಯ. 30 ಮಂಜೂರಾದ ಹುದ್ದೆಗಳಲ್ಲಿ ಕೇವಲ 13 ಮಂದಿ ಮಾತ್ರ ಇದ್ದು, 17 ಹುದ್ದೆಗಳು ಖಾಲಿ ಬಿದ್ದಿವೆ.
ರಾಜ್ಯಮಟ್ಟದ ಅಂಕಿ-ಅಂಶ ಹೀಗಿದೆ
ಒಂದು ಕಡೆ ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮದ ಆಕರ್ಷಣೆ, ಬಸ್ ಸೇರಿದಂತೆ ಇತರ ಸೌಲಭ್ಯಗಳ ಆಮಿಷ ತೋರಿ ಸರ್ಕಾರಿ ಶಾಲೆಗಳ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಸೆಳೆಯುತ್ತಿದ್ದರೆ, ಮತ್ತೊಂದು ಕಡೆ ಶಿಕ್ಷಕರ ಕೊರತೆ ಪೋಷಕರ ವಿಶ್ವಾಸ ಕುಂದಿಸುತ್ತಿದೆ. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ 2026-27ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 40,000 ಮತ್ತು ಪ್ರೌಢ ಶಾಲೆಗಳಿಗೆ 11,000 ಸೇರಿ ಒಟ್ಟು 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ಹೊರಡಿಸಿದ್ದು, ಇದು ತಾತ್ಕಾಲಿಕ ಪರಿಹಾರ ಮಾತ್ರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,541 ಶಿಕ್ಷಕರ ತೀವ್ರ ಅಗತ್ಯವಿದೆ ಎಂದು DIET ಪ್ರಾಂಶುಪಾಲರು ಮೇ 2026ರಲ್ಲೇ ಸ್ಪಷ್ಟಪಡಿಸಿದ್ದಾರೆ. ಖಾಯಂ ಶಿಕ್ಷಕರ ನೇಮಕಾತಿ ತ್ವರಿತವಾಗಿ ಆಗದಿದ್ದರೆ ಸರ್ಕಾರಿ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಆತಂಕ ಮನೆ ಮಾಡಿದೆ.
Dakshina Kannada,Karnataka

