Advertisement
Advertisement

Scholarship: SSLC ಪಾಸಾಗಿದ್ದೀರಾ? ನಿಮ್ಮ ಶಿಕ್ಷಣ ಮುಂದುವರೆಸಲು ಇಲ್ಲಿದೆ ಸಹಾಯಧನದ ವಿವರ, ಹೀಗೆ ಅರ್ಜಿ ಸಲ್ಲಿಸಿ

Whatsapp image 2026 06 26 at 14.46.29 2026 06 bd079390d915d29e06609b18bfd6ae1b 1200x675.jpeg


Last Updated:

ಮೈಸೂರು ಸಮಾಜ ಕಲ್ಯಾಣ ಇಲಾಖೆ 2026-27ರಲ್ಲಿ SC ವಿದ್ಯಾರ್ಥಿಗಳಿಗೆ ಪೂರ್ಣ ಫೀ ಮರುಪಾವತಿ, ನಿರ್ವಹಣಾ ಭತ್ಯೆ, ಪ್ರೋತ್ಸಾಹಧನ ನೀಡಲು ssp.postmatric.karnataka.gov.in ಮೂಲಕ 2027 ಜನವರಿ 31ರವರೆಗೆ ಅರ್ಜಿ ಆಹ್ವಾನಿಸಿದೆ

ವಿದ್ಯಾರ್ಥಿ ವೇತನ
ವಿದ್ಯಾರ್ಥಿ ವೇತನ

ಮೈಸೂರು: ಆರ್ಥಿಕ ಕಾರಣದಿಂದ ಉನ್ನತ ಶಿಕ್ಷಣ (Higher Education) ಕನಸಾಗಿ ಉಳಿಯಬಾರದು ಎಂಬ ಉದ್ದೇಶದಿಂದ ಮೈಸೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ 2026-27ನೇ ಶೈಕ್ಷಣಿಕ ಸಾಲಿಗೆ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅರ್ಜಿ ಆಹ್ವಾನಿಸಿದೆ. ಮೈಸೂರು ತಾಲ್ಲೂಕಿನ ಪೋಷಕರ ವಾರ್ಷಿಕ ಆದಾಯ ₹2.50 ಲಕ್ಷದೊಳಗಿರುವ ಹಾಗೂ 10ನೇ ತರಗತಿ (SSLC) ನಂತರ ವಿವಿಧ ಕೋರ್ಸ್‌ಗಳಲ್ಲಿ (Course) ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದು. PUC, ಡಿಪ್ಲೊಮಾ, ITI, ಪದವಿ, ಎಂಜಿನಿಯರಿಂಗ್, ನರ್ಸಿಂಗ್, ಬಿ.ಎಡ್., ಸ್ನಾತಕೋತ್ತರ ಪದವಿ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಎಷ್ಟು ಹಣ ಸಿಗಲಿದೆ?

ಎಷ್ಟು ಹಣ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ತಿಳಿದರೆ ನೀವು ಖಂಡಿತ ಅಚ್ಚರಿಪಡುತ್ತೀರಿ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿದ್ದು ಪೂರ್ಣ ಟ್ಯೂಷನ್ ಫೀ, ಅಡ್ಮಿಷನ್ ಫೀ ಮತ್ತು ಪರೀಕ್ಷಾ ಫೀ ಮರುಪಾವತಿ ಜೊತೆಗೆ ನಿರ್ವಹಣಾ ಭತ್ಯೆ ಕೂಡ ನೀಡಲಾಗುತ್ತದೆ. ಕೋರ್ಸ್ ಮತ್ತು ವಿದ್ಯಾರ್ಥಿ ಡೇ ಸ್ಕಾಲರ್ ಅಥವಾ ಹಾಸ್ಟಲ್‌ನಲ್ಲಿ ಇರುವುದರ ಆಧಾರದ ಮೇಲೆ ವಾರ್ಷಿಕ ನಿರ್ವಹಣಾ ಭತ್ಯೆ ನಿಗದಿಯಾಗುತ್ತದೆ.

50 ಸಾವಿರಕ್ಕಿಂತ ಹೆಚ್ಚು ಹಣ ಸಿಗುತ್ತೆ!

ಗುಂಪು I ರಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, MBA, M.Tech ಮುಂತಾದ ವೃತ್ತಿಪರ ಕೋರ್ಸ್‌ಗಳಿಗೆ ಡೇ ಸ್ಕಾಲರ್‌ಗೆ ₹7,000 ಮತ್ತು ಹಾಸ್ಟಲ್ ವಿದ್ಯಾರ್ಥಿಗೆ ₹13,500 ನಿರ್ವಹಣಾ ಭತ್ಯೆ ನೀಡಲಾಗುತ್ತದೆ. ಗುಂಪು II ರಲ್ಲಿ ಡಿಪ್ಲೊಮಾ, ಫಾರ್ಮಸಿ, ನರ್ಸಿಂಗ್, LLB ಕೋರ್ಸ್‌ಗಳಿಗೆ ಡೇ ಸ್ಕಾಲರ್‌ಗೆ ₹6,500 ಮತ್ತು ಹಾಸ್ಟಲ್‌ಗೆ ₹9,500 ಸಿಗುತ್ತದೆ. ಗುಂಪು III ರ B.A., B.Com., B.Sc. ಮುಂತಾದ ಸಾಮಾನ್ಯ ಪದವಿ ಕೋರ್ಸ್‌ಗಳಿಗೆ ಡೇ ಸ್ಕಾಲರ್‌ಗೆ ₹3,000 ಮತ್ತು ಹಾಸ್ಟಲ್‌ಗೆ ₹6,000 ನೀಡಲಾಗುತ್ತದೆ. ಗುಂಪು IV ರ PUC, ITI ಮುಂತಾದ ಪೋಸ್ಟ್ ಮ್ಯಾಟ್ರಿಕ್ ಕೋರ್ಸ್‌ಗಳಿಗೆ ಡೇ ಸ್ಕಾಲರ್‌ಗೆ ₹2,500 ಮತ್ತು ಹಾಸ್ಟಲ್‌ಗೆ ₹4,000 ಭತ್ಯೆ ಲಭ್ಯ. ವೃತ್ತಿಪರ ಕೋರ್ಸ್‌ಗಳಲ್ಲಿ ಒಟ್ಟು ಫೀ ಮರುಪಾವತಿ ಮತ್ತು ಭತ್ಯೆ ಸೇರಿ ₹10,000 ರಿಂದ ₹50,000 ಮತ್ತು ಅದಕ್ಕಿಂತ ಹೆಚ್ಚು ಪ್ರಯೋಜನ ಸಿಗಬಹುದು.

ಪ್ರೋತ್ಸಾಹ ಧನದ ವಿವರ ಇಲ್ಲಿದೆ

ಇದಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕೂಡ ಸಿಗುತ್ತದೆ. ಆದಾಯ ಮಿತಿ ಇಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದ SC ವಿದ್ಯಾರ್ಥಿಗಳಿಗೆ PUC/ಡಿಪ್ಲೊಮಾಗೆ ₹20,000, ಡಿಗ್ರಿಗೆ ₹25,000, ಸ್ನಾತಕೋತ್ತರ ಪದವಿಗೆ ₹30,000 ಮತ್ತು ವೃತ್ತಿಪರ ಕೋರ್ಸ್‌ಗೆ ₹35,000 ಪ್ರೋತ್ಸಾಹಧನ ನೀಡಲಾಗುತ್ತದೆ. ಕೆಲವು ಗುಂಪುಗಳಲ್ಲಿ ಪುಸ್ತಕ ಭತ್ಯೆ, ಥಿಸಿಸ್ ಟೈಪಿಂಗ್ ಮತ್ತು ಅಧ್ಯಯನ ಪ್ರವಾಸ ಸೌಲಭ್ಯ ಕೂಡ ಇದೆ.

ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ

ಅರ್ಜಿ ಸಲ್ಲಿಸಲು ssp.postmatric.karnataka.gov.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮಾಡಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 2027ರ ಜನವರಿ 31. ಅರ್ಜಿ ಭರ್ತಿ ಮಾಡುವ ಮೊದಲು ಆಧಾರ್ ಸೀಡಿಂಗ್, ಕಾಲೇಜು ವಿವರ, ಕೋರ್ಸ್ ಮಾಹಿತಿ ಮತ್ತು NSP OTR Validation ಪರಿಶೀಲನೆ ಪೂರ್ಣಗೊಳಿಸಬೇಕು. ದಾಖಲೆಗಳಲ್ಲಿ ಯಾವುದೇ ದೋಷ ಇದ್ದರೆ ಅರ್ಜಿ ತಿರಸ್ಕೃತವಾಗುವ ಅಪಾಯ ಇದೆ ಎಂದು ಇಲಾಖೆ ಎಚ್ಚರಿಸಿದೆ. ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆ, ಮೈಸೂರು ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿ, ಡಾ. ಬಾಬು ಜಗಜೀವನರಾಂ ಭವನ, ಆದಿಪಂಪ ರಸ್ತೆ, ಒಂಟಿಕೊಪ್ಪಲು ಪೂರ್ವ, ಪಡುವಾರಹಳ್ಳಿ, ಮೈಸೂರು-12 ಗೆ ಭೇಟಿ ನೀಡಬಹುದು ಅಥವಾ 0821-2520910 ಮತ್ತು 8880421982 ಸಂಖ್ಯೆಗಳಿಗೆ ಕರೆ ಮಾಡಬಹುದು. ಈ ಸುವರ್ಣ ಅವಕಾಶ ತಪ್ಪಿಸಿಕೊಳ್ಳಬೇಡಿ, ಇಂದೇ ಅರ್ಜಿ ಪ್ರಕ್ರಿಯೆ ಆರಂಭಿಸಿ!



Source link

Leave a Reply

Your email address will not be published. Required fields are marked *

TOP