ಕೇರಳದಿಂದ ತಾನೇ ಏಕೆ ತಾಜಾ ತರಕಾರಿಗಳು ದೊರೆಯುವಂತೆ ಮಾಡಬಾರದು ಎಂಬ ಉಪಾಯ ಅವರ ಮನದಲ್ಲಿ ಹೊಳೆಯುತ್ತಿದ್ದಂತೆ ಬಿಜೇಶ್, ತಮ್ಮ ಉದ್ಯೋಗ ತೊರೆದು, ತ್ರಿಶ್ಶೂರ್ನಲ್ಲಿರುವ ತಮ್ಮ ಹುಟ್ಟೂರಿಗೆ ಮರಳಿದರು ಹಾಗೂ ರಫ್ತಿಗೆ ಬೇಕಾದ ಪರವಾನಗಿಗಳನ್ನು ಪಡೆದುಕೊಂಡರು. ಇಲ್ಲಿಂದ ನಂತರ 35 ರೈತ ಕುಟುಂಬಗಳು ಬೆಳೆಯುತ್ತಿದ್ದ 160 ಕೆಜಿ ತರಕಾರಿಗಳ ರಫ್ತು ಉದ್ಯಮವನ್ನು ಆರಂಭಿಸಿದರು. ಅದರಂತೆ, ಈಗ ಬಿಜೇಶ್ ಅವರ ಉದ್ಯಮ ದುಬೈನಲ್ಲಿರುವ 1,000 ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಊರಿನಲ್ಲೇ ಬೆಳೆದ ತರಕಾರಿಗಳನ್ನು ಒದಗಿಸಿಕೊಡುತ್ತಿದ್ದಾರೆ. ವಾರ್ಷಿಕ ರೂ 2 ಕೋಟಿ ಆದಾಯವನ್ನು ಬಿಜೇಶ್ ಆರಾಮವಾಗಿ ದುಡಿಯುತ್ತಿದ್ದಾರೆ.
ತಾವು ದುಬೈನಲ್ಲಿದ್ದಾಗ ಬಾಳೆಕಾಯಿಗಾಗಿ ಅಲ್ಲಿದ್ದ ಎಲ್ಲಾ ಶಾಪ್ಗಳನ್ನು ಸುತ್ತಾಡಿದ್ದೇನೆ, ಸಾಕಷ್ಟು ಅಲೆದಾಟ ನಡೆಸಿದ್ದೇನೆ. ಇದುವೇ ನನ್ನ ಮನಸ್ಸಿನಲ್ಲಿ ಈ ಉದ್ಯಮ ಚಿಗುರಲು ಪ್ರೇರಣೆ ನೀಡಿತು. ಹಾಗೂ ಇಲ್ಲಿರುವ ಮಲಯಾಳಿ ನಿವಾಸಿಗಳಿಗೆ ಊರಲ್ಲೇ ಬೆಳೆದ ತರಕಾರಿಗಳನ್ನು ಪಡೆಯಲು ಎಷ್ಟು ಕಷ್ಟವಾಗುತ್ತಿದೆ ಎಂಬುದನ್ನು ಕಂಡುಕೊಂಡೆ, ಹಾಗಾಗಿ ನಾನೇ ಏಕೆ ಊರಿನಿಂದಲೇ ತರಕಾರಿ ರಫ್ತಿನ ಕೆಲಸವನ್ನು ಮಾಡಬಾರದು ಎಂದು ಯೋಚಿಸಿದೆ ಎಂದಿದ್ದಾರೆ. ಆಮೇಲೆ ತಡಮಾಡದೆ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಪರವಾನಗಿ ಪಡೆದುಕೊಂಡೆ ಹಾಗೂ ದುಬೈಗೆ ಬಾಳೆಕಾಯಿ ರಫ್ತಿನ ವ್ಯವಹಾರ ಆರಂಭಿಸಿದೆ.
ಇದರೊಂದಿಗೆ ಮೊದಮೊದಲು ಸಾಕಷ್ಟು ಕಷ್ಟಪಡಬೇಕಾಯಿತು ಎಂದು ಹೇಳುವ ಬಿಜೇಶ್, ಪಾವತಿ ಸಮಸ್ಯೆಗಳು ತಲೆದೋರಿತ್ತು ಎನ್ನುತ್ತಾರೆ. ಇನ್ನು ಇನ್ನಷ್ಟು ಸಾಧಿಸಬೇಕೆಂಬ ಆಸೆ ಇದೆಯೇ ಹೊರತು ಈ ಉದ್ಯಮವನ್ನು ಕೈಬಿಡುವ ಯೋಚನೆ ಇಲ್ಲ ಎಂದಿದ್ದಾರೆ. ಇನ್ನು ಬಿಜೇಶ್ ಸಹೋದರ ಪ್ರವೀಣ್ ದುಬೈನಲ್ಲೇ ವಾಸಿಸುತ್ತಿದ್ದು, ಹೀಗಾಗಿ ಇನ್ನೊಂದು ವಿಧಾನದಲ್ಲಿ ತಮ್ಮ ಉದ್ಯಮ ವಿಸ್ತರಿಸುವ ಯೋಚನೆ ಮಾಡಿದರು. ಅದರೊಂದಿಗೆ, ತಾಜಾ, ಸಾವಯವ ತರಕಾರಿಗಳನ್ನು ಅಲ್ಲಿನ ನಿವಾಸಿಗಳಿಗೆ ಒದಗಿಸುವ ಯೋಜನೆ ಹಮ್ಮಿಕೊಂಡರು. ಹೀಗಾಗಿ ತಮ್ಮ ಯೋಜನೆ ಕಾರ್ಯಗತಗೊಳಿಸಲು ಮುಂದಾದರು.
ಇನ್ನು ಪರಿಶುದ್ಧ ಸಾವಯವ ತರಕಾರಿಗಳನ್ನು ಪತ್ತೆಹಚ್ಚುವುದೇ ದೊಡ್ಡ ತಲೆನೋವು ಎಂಬುದು ಬಿಜೇಶ್ ಮಾತಾಗಿದೆ. ಉತ್ತಮ ಮೂಲಗಳನ್ನು ಹುಡುಕಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಅದಾಗ್ಯೂ 35 ಕುಟುಂಬಗಳಿಂದ 160 ಮಿಶ್ರ ತರಕಾರಿಗಳನ್ನು ಪಡೆಯುವಲ್ಲಿ ಕೊನೆಗೂ ಸಫಲರಾದೆವು. ನಂತರ ಅದನ್ನು ಕೇರಳದಿಂದ ನಾನು ಪ್ಯಾಕ್ ಮಾಡಿ ಕಳುಹಿಸಿದರೆ ಸಹೋದರ ಪ್ರವೀಣ್ ಅದನ್ನು ಪಡೆದು ದುಬೈನಲ್ಲಿರುವ ಮನೆಗಳಿಗೆ ತಲುಪಿಸುತ್ತಿದ್ದ ಎಂದಿದ್ದಾರೆ.
ಬಿಜೇಶ್ ಅವರ ಐಡಿಯಾ ಫಲಿಸಿತು, ದುಬೈ ನಿವಾಸಿಗಳು ಊರಿನಲ್ಲೇ ಬೆಳೆದ ಸಾವಯವ ತರಕಾರಿಗಳನ್ನು ಖರೀದಿಸಲು ಆಸಕ್ತಿ ತೋರಿದರು. ಹೀಗೆ ವಾರದಿಂದ ವಾರಕ್ಕೆ ವಿಸ್ತರಿಸುತ್ತಿದ್ದ ಅವರ ಗ್ರಾಹಕ ವರ್ಗ 1,000 ಕುಟುಂಬಗಳವರೆಗೆ ತಲುಪಿತು. ಅದರಂತೆ, ಅವರು ಎರಡು ವರ್ಷಗಳ ನಂತರ ಬಿಜೇಶ್ ತಾವೇ ಬೆಳೆದ ತರಕಾರಿಗಳನ್ನು ರಫ್ತು ಮಾಡುವ ಗುರಿ ಹೊಂದಿದರು. ತ್ರಿಶ್ಶೂರ್ ಮಾಲಾ ಎಂಬಲ್ಲಿ 1.5 ಎಕರೆ ಭೂಮಿಯನ್ನು ಲೀಸ್ಗೆ ತೆಗೆದುಕೊಂಡರು ಹಾಗೂ ತಮ್ಮ 8 ಎಕರೆ ಭೂಮಿಯಲ್ಲಿ ಸಾವಯವ ತರಕಾರಿಗಳನ್ನು ಸಹೋದರರು ಬೆಳೆಯುತ್ತಿದ್ದಾರೆ.
ತರಕಾರಿಗಳಿಗೆ ಆದಷ್ಟು ಕ್ರಿಮಿನಾಶಕ, ವಿಷಕಾರಿ ರಸಗೊಬ್ಬರಗಳನ್ನು ಬಳಸುವುದಿಲ್ಲ ಎಂದು ಹೇಳುವ ಬಿಜೇಶ್, ದನದ ಸೆಗಣಿ, ಮೂತ್ರ, ತ್ಯಾಜ್ಯಗಳನ್ನು ಗೊಬ್ಬರದಂತೆ ಬಳಸುತ್ತಿದ್ದೇವೆ ಎಂದಿದ್ದಾರೆ. ಜೊತೆಗೆ ಗ್ರೀನ್ ಪ್ಲಾನೆಟ್ ಹಾಗೂ ಇಂಡಿಯಾ ಗ್ರೋ ಮೊದಲಾದ ಸಂಸ್ಥೆಗಳಿಂದ ಪ್ರಮಾಣೀಕೃತ ಸಾವಯವ ಉತ್ಪನ್ನಗಳನ್ನು ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದು, ಕ್ರಿಮಿಕೀಟಗಳ ನಿಯಂತ್ರಣಕ್ಕೂ ತಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಪ್ರತಿ ವಾರ ಬಿಜೇಶ್ 2,500 ರಿಂದ 3,000 ಕೆಜಿಯವರೆಗೆ ಉತ್ಪನ್ನಗಳನ್ನು ಪಡೆದುಕೊಳ್ಳುತ್ತಿದ್ದು, ಬಾಳೆಹಣ್ಣಿನಂತಹ ಹಣ್ಣುಗಳ ಕೃಷಿಯನ್ನು ಮಾಡುತ್ತಿದ್ದಾರೆ. ಅದರಂತೆ, ಪ್ರತಿ ಮೂರು ವಾರಕ್ಕೊಮ್ಮೆ ದುಬೈಗೆ ಇವರು ತಾವು ಬೆಳೆದ ತರಕಾರಿಗಳನ್ನು ರವಾನೆ ಮಾಡುತ್ತಾರೆ. ದುಬೈ ಅಲ್ಲದೆ ಶಾರ್ಜಾ, ಕತಾರ್, ಕುವೈತ್ಗೂ ಸಾವಯವ ಉತ್ಪನ್ನಗಳನ್ನು ರವಾನಿಸುವ ಗುರಿಯನ್ನು ಬಿಜೇಶ್ ಹೊಂದಿದ್ದಾರೆ.
May 30, 2025 11:04 PM IST
