ಇದೊಂಥರಾ ಪ್ರತೀ ಬಾರಿಯೂ ಅಲಿಖಿತ ನಿಯಮದಂತೆ ಪುನರಾವರ್ತನೆಗೊಳ್ಳುವ ಜಿಲ್ಲಾವಾರು ಫಲಿತಾಂಶಗಳ ವಿವರ. ಪ್ರತೀ ವರ್ಷವೂ ಈ ಎರಡು ಜಿಲ್ಲೆಗಳೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುತ್ತವೆ. ಅಪರೂಪಕ್ಕೊಮ್ಮೆ ಏರಿಳಿತ ಕಂಡರೂ ಫಲಿತಾಂಶ ಬಂದಾಗ ಟಾಪ್ ಜಿಲ್ಲೆಗಳ ಸಾಲಿನಲ್ಲಿ ಕಾಣುವ ಜಿಲ್ಲೆಗಳ ಪೈಕಿ ಈ ಎರಡು ಜಿಲ್ಲೆಗಳು ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿ ಕೂತಿವೆ. ಹೀಗೇ ಪ್ರತೀವರ್ಷ ಈ ರೀತಿ ಟಾಪ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರ ಹಿಂದಿನ ಕಾರಣವೂ ಅಷ್ಟೇ ಕುತೂಹಲಕರವಾಗಿದೆ. ಪ್ರತೀ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತವೆ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಇದಕ್ಕೆ ಉತ್ತರವೂ ಇಲ್ಲಿದೆ.
2026ರ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶದಲ್ಲಿ 96.39% ಫಲಿತಾಂಶದೊಂದಿಗೆ ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆ 96.35 ಫಲಿತಾಂಶದೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿತ್ತು. ಇತ್ತ 2026ರ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೂಡ ದಕ್ಷಿಣ ಕನ್ನಡ ಜಿಲ್ಲೆ 98.4% ಫಲಿತಾಂಶದೊಂದಿಗೆ ಪ್ರಥಮ ಸ್ಥಾನ, ಉಡುಪಿ ಜಿಲ್ಲೆ 98.18% ರಿಸಲ್ಟ್ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಪ್ರತಿ ವರ್ಷವೂ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ರಾಜ್ಯಕ್ಕೆ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುವುದು ಒಂದು ಸ್ಥಿರವಾದ ವಾಸ್ತವಸತ್ಯವಾಗಿದೆ. ಈ ಸಾಧನೆಯು ಪೂರ್ವನಿರ್ಧರಿತವಲ್ಲ, ಇದೊಂದು ಐತಿಹಾಸಿಕ ಪ್ರತಿಫಲವೂ ಹೌದು.. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಂಶಗಳ ಸಮ್ಮಿಲನದ ಫಲವೂ ಹೌದು..
ಪ್ರತೀ ವರ್ಷವೂ ಈ ಎರಡು ಜಿಲ್ಲೆಗಳೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಯಾಕೆ ಮುಂಚೂಣಿಯಲ್ಲಿರುತ್ತವೆ ಅನ್ನೋದನ್ನು ನಾವು ಕೇವಲ ಹತ್ತಿಪ್ಪತ್ತು ವರ್ಷಗಳ ಹಿಂದೆ ಹೊರಳಿದರೆ ಸಾಕಾಗಲ್ಲ.. ಇತಿಹಾಸದಲ್ಲಿ ಈ ಜಿಲ್ಲೆಗಳ ಶೈಕ್ಷಣಿಕ ಪಯಣದ ಮೂಲವನ್ನು ಕಂಡು ಹಿಡಿಯಬೇಕಾಗುತ್ತದೆ. 1834ರಲ್ಲಿ ಬಾಸೆಲ್ ಮಿಶನರಿಗಳು ಮಂಗಳೂರಿಗೆ ಬಂದು ಶಿಕ್ಷಣದ ಬೀಜ ಬಿತ್ತಿದರು. ಅವರು ಸ್ಥಾಪಿಸಿದ ಶಾಲೆಗಳು, ಶಿಕ್ಷಕ ತರಬೇತಿ ಕೇಂದ್ರಗಳು ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳು ಕೇವಲ ಧಾರ್ಮಿಕ ಪ್ರಚಾರಕ್ಕೆ ಸೀಮಿತವಾಗಿರದೆ ಸಮಾಜದಲ್ಲಿ ಜಾತಿ-ವರ್ಗ ಭೇದಗಳನ್ನು ತೊಡೆದುಹಾಕುವ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಪರಿವರ್ತನಕಾರಿ ಕಾರ್ಯವೂ ಆಗಿತ್ತು.
ಆ ಕಾಲದಲ್ಲಿ ಬಾಸೆಲ್ ಮಿಷನ್ ಸ್ಥಾಪಿಸಿದ ಸ್ಕೂಲುಗಳು ಇಂಗ್ಲಿಷ್ ಶಿಕ್ಷಣದೊಂದಿಗೆ ಸ್ಥಳೀಯ ಭಾಷೆಗಳನ್ನು ಸಂಯೋಜಿಸಿ, ಉದ್ಯೋಗವಕಾಶಗಳನ್ನು ಸೃಷ್ಟಿಸಿದವು. ಇದರ ಫಲವಾಗಿ ಮಂಗಳೂರು ‘ಶಿಕ್ಷಣದ ಕೇಂದ್ರ’ವಾಗಿ ಬೆಳೆಯಿತು. 20ನೇ ಶತಮಾನದಲ್ಲಿ ಟಿ.ಎಂ.ಎ. ಪೈ ಅವರಂತಹ ದೂರದೃಷ್ಟಿಯುಳ್ಳ ನಾಯಕರು ಮಣಿಪಾಲದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಿದರು. ಇದು ಖಾಸಗಿ ಶಿಕ್ಷಣದ ಆದರ್ಶ ಮಾದರಿಯನ್ನು ನಿರ್ಮಿಸಿತು. ಈ ಐತಿಹಾಸಿಕ ಪರಂಪರೆಯು ಇಂದಿಗೂ ಈ ಜಿಲ್ಲೆಗಳಲ್ಲಿನ ಶಿಕ್ಷಣದ ಮೇಲಿನ ಗೌರವವನ್ನು ಬೆಳೆಸಿದೆ.
ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಸಹ ಈ ಸಾಧನೆಗೆ ಬಲವಾದ ಬುನಾದಿಯಾಗಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಕಷ್ಟು ಜನರು ಗಲ್ಫ್ ದೇಶಗಳು, ಅಮೆರಿಕಾ ಮತ್ತು ಇತರೆಡೆಗಳಲ್ಲಿ ಉದ್ಯೋಗ ಮಾಡುತ್ತಾರೆ. ಇದರಿಂದ ಬರುವ ಆದಾಯಗಳು ಆ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಬಲಪಡಿಸುತ್ತವೆ. ಉದಾಹರಣೆಗೆ ಮನೆಯಲ್ಲಿ ಬಡತನ ಇದ್ದಾಗ ಮಕ್ಕಳನ್ನು ಸಹ ಪೋಷಕರು ಕೆಲಸಕ್ಕೆ ಕಳುಹಿಸಿ ದಿನದ ಕೂಳು ಸಂಪಾದಿಸುವ ಅನಿವಾರ್ಯತೆಗೆ ಸಿಲುಕಬೇಕಾಗುತ್ತದೆ. ಆದರೆ ಮನೆಯಲ್ಲಿ ತಕ್ಕ ಮಟ್ಟಿನ ಸ್ಥಿರತೆ ಇದ್ದಾಗ ಯಾವ ಪೋಷಕರೂ ಕೂಡ ತಮ್ಮ ಮಕ್ಕಳು ನಮ್ಮಂತೆ ಶಿಕ್ಷಣದಿಂದ ವಂಚಿತರಾಗಬೇಕೆಂದು ಬಯಸುವುದಿಲ್ಲ. ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಶಿಕ್ಷಣ ಪಡೆದ ಒಬ್ಬ ಸದಸ್ಯರಾದರೂ ಇರುತ್ತಾರೆ. ಆ ಕಾರಣಕ್ಕೆ ಅವರಿಗೆ ಶಿಕ್ಷಣದ ಅರಿವಿದ್ದೋ ಏನೋ ತಮ್ಮ ಮನೆಯ ಮಕ್ಕಳನ್ನು ಕಷ್ಟವಾದರೂ ವಿದ್ಯಾಭ್ಯಾಸ ಕೊಡಿಸುತ್ತಾರೆ.
ಉತ್ತಮ ಗುಣಮಟ್ಟದ ಶಿಕ್ಷಣ
ಕರ್ನಾಟಕದ ಕರಾವಳಿ ಜಿಲ್ಲೆಗಳು ಕಡಲ ನಗರಿಯೂ ಹೌದು, ಶಿಕ್ಷಣ ನಗರಿಯೂ ಹೌದು.. ನೀವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸರ್ಕಾರಿ ಶಾಲೆಗೆ ಹೋದರೂ ಅಲ್ಲಿನ ಕಟ್ಟಡಗಳಿರಬಹುದು, ಶಾಲೆಗಳ ಗೋಡೆಗಳ ಮೇಲೆ ಬರೆದಿರುವ ಬರಹಗಳಿರಬಹುದು ಅಥವಾ ಶಿಕ್ಷಕರಿರಬಹುದು ಬಹುತೇಕರು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಫಲಿತಾಂಶದಲ್ಲಿ ತೀರಾ ಕೆಳಮಟ್ಟದಲ್ಲಿ ಇರುವ ಕೆಲ ಜಿಲ್ಲೆಗಳಲ್ಲಿ ಒಂದಷ್ಟು ಶಿಕ್ಷಕರು 10-11 ಗಂಟೆಗೆ ಬಂದು ಕಚೇರಿಯಲ್ಲಿ ಟೈಂ ಪಾಸ್ ಮಾಡುವ ಆರೋಪವೂ ಕೇಳಿ ಬರುತ್ತಿದೆ. ಮಕ್ಕಳಿಗೆ ಸರಿಯಾಗಿ ಪಾಠ ಮಾಡದೇ ಇರುವ ಘಟನೆಗಳೂ ಕೆಲ ಊರುಗಳಲ್ಲಿ ಕೇಳಿ ಬರುತ್ತಿದೆ. ಆದರೆ ಕರಾವಳಿ ಭಾಗದ ಶಾಲೆಗಳಲ್ಲಿ ಅಗತ್ಯ ವಸ್ತುಗಳ ಕೊರತೆಯಿದ್ದರೂ ಪಾಠದ ವಿಚಾರದಲ್ಲಿ ಬದ್ಧತೆಯಿಂದ ಕೆಲಸ ಮಾಡಿ ರಿಸಲ್ಟ್ ತೆಗೆಸುವ ಶಿಕ್ಷಕರ ಸಂಖ್ಯೆಯೇ ಹೆಚ್ಚಿದೆ ಅಂದರೂ ತಪ್ಪಾಗಲಿಕ್ಕಿಲ್ಲ.
ಕರಾವಳಿ ಭಾಗದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳ ಹಾವಳಿಯಿದ್ದರೂ ಶಿಕ್ಷಣದ ಗುಣಮಟ್ಟದ ವಿಚಾರದಲ್ಲಿ ಸರಕಾರಿ ಶಾಲೆಗಳು ರಾಜಿ ಮಾಡಿಕೊಂಡಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಉತ್ತಮ ಮೂಲಸೌಕರ್ಯಗಳೂ ಇದೆ. ತರಗತಿ ಕೊಠಡಿಗಳು, ಶೌಚಾಲಯಗಳು, ಕುಡಿಯುವ ನೀರು, ವಿದ್ಯುತ್ ಸೌಲಭ್ಯ. ಇತ್ತೀಚಿನ ವರ್ಷಗಳಲ್ಲಿ ಎಲ್ಕೆಜಿ ಯುಕೆಜಿ, ಆಂಗ್ಲಮಾಧ್ಯಮವನ್ನೂ ಸರಕಾರಿ ಶಾಲೆಗಳಲ್ಲಿ ಕಲಿಸುವ ಪರಿಪಾಠ ಹೆಚ್ಚುತ್ತಿದೆ.
ಇನ್ನು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸಾಮಾನ್ಯವಾಗಿ ಉತ್ತಮ ತರಬೇತಿ ಪಡೆದಿರುತ್ತಾರೆ. ಕರಾವಳಿಯಲ್ಲಿ ಶಿಕ್ಷಕರ ನಡುವಿನ ಸ್ಪರ್ಧೆ ಮತ್ತು ವೃತ್ತಿಪರ ಗೌರವ ಹೆಚ್ಚು. ಅವರು ಪೂರಕ ತರಗತಿಗಳು, ರಿವ್ಯೂ ಮೀಟಿಂಗ್ಗಳು, ಪ್ರೀ-ಟೆಸ್ಟ್ಗಳನ್ನು ಆಗಾಗ ನಡೆಸುತ್ತಾರೆ. ಫಲಿತಾಂಶಗಳಲ್ಲಿ ಸರ್ಕಾರಿ ಶಾಲೆಗಳು 100% ಪಾಸ್ ದರ ತೋರಿಸುವ ಉದಾಹರಣೆಗಳು ಸಿಕ್ಕಾಪಟ್ಟೆ ಇದೆ. ಉದಾಹರಣೆಗೆ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಪ್ರೌಢಶಾಲೆಗಳು ಅನೇಕ ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಿವೆ. ಪೋಷಕರು-ಶಿಕ್ಷಕರು ಸಭೆಗಳು ನಿಯಮಿತವಾಗಿ ನಡೆಯುತ್ತವೆ. ಇದು ಎಲ್ಲರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಶಿಕ್ಷಕರಿಗೆ ಆಯಾ ಉರಿನ ಸಂಘಟನೆಗಳ, ಊರ ಜನರ ಬೆಂಬಲವೂ ಇರುತ್ತದೆ, ಶಾಲೆಗೆ ಅಗತ್ಯ ಸೌಕರ್ಯಗಳ ಕೊರತೆ ಇದ್ದಾಗ ಅಲ್ಲಲ್ಲಿ ಊರವರೇ ಸೇರಿ ದೇಣಿಗೆಯಿಂದ ಶಾಲೆಗೆ ನೀಡಿರುವ ಉದಾಹರಣೆಯೂ ಇದೆ. ಖಾಸಗಿ ಶಾಲೆಗಳೊಂದಿಗಿನ ಸ್ಪರ್ಧೆಯು ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದರ ಜೊತೆಗೆ ಕರಾವಳಿ ಜಿಲ್ಲೆಗಳ ಶಿಕ್ಷಣ ಫಲಿತಾಂಶದ ವಿಚಾರದಲ್ಲಿ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಕೊಡುಗೆಯೂ ಸಾಕಷ್ಟಿದೆ. ಪಿಯುಸಿ ಕಾಲೇಜುಗಳಿಗೆ ಅಡ್ಮಿಷನ್ ಮಾಡುವ ಸಮಯದಲ್ಲಿ ವಿಶೇಷವಾಗಿ ಖಾಸಗಿ ಕಾಲೇಜುಗಳು ಉತ್ತಮ ರಿಸಲ್ಟ್ ಪಡೆಯುವ ಸಲುವಾಗಿ ಹೊರ ಜಿಲ್ಲೆಗಳಿಂದ ಟಾಪರ್ ಅಥವಾ ರ್ಯಾಂಕ್ ಪಡೆಯುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳನ್ನು ಮಾತ್ರ ತಮ್ಮ ಕಾಲೇಜಿಗೆ ಸೇರಿಸಿಕೊಳ್ಳುತ್ತವೆ. ಪೋಷಕರು ಕೂಡ ತಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ವಿದ್ಯಾಭ್ಯಾಸ ಸಿಗಬೇಕು ಅನ್ನುವ ಕಾರಣಕ್ಕೆ ಕರಾವಳಿ ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ಸೇರಿಸುತ್ತಾರೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದರ ಜೊತೆ ಹೊರ ಜಿಲ್ಲೆಗಳ ಟಾಪರ್ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳು ಗಾಳ ಹಾಕೋದೇನು ಹೊಸ ವಿಚಾರವಲ್ಲ.
2011ರ ಜನಗಣತಿಯ ಪ್ರಕಾರ ದಕ್ಷಿಣ ಕನ್ನಡದ ಸಾಕ್ಷರತೆ ದರ 88.57% (ರಾಜ್ಯದಲ್ಲಿ ಅಗ್ರಸ್ಥಾನ) ಮತ್ತು ಉಡುಪಿ 86.24% ಆಗಿತ್ತು. ಇತ್ತೀಚೆಗೆ ಉಡುಪಿ 95% ಮೀರಿದೆ. ಇದು ರಾಜ್ಯ ಸರಾಸರಿಗಿಂತ ಗಣನೀಯವಾಗಿ ಹೆಚ್ಚು. ತುಳು ಸಂಸ್ಕೃತಿಯಲ್ಲಿ ಶಿಕ್ಷಣವು ‘ಕುಟುಂಬದ ಗೌರವ’ದ ಪ್ರತೀಕ. ಬಡ ಕುಟುಂಬಗಳಲ್ಲೂ ಎಷ್ಟೇ ಕಷ್ಟವಾದರೂ ನಮ್ಮ ಮಕ್ಕಳಿಗೆ ನಮ್ಮ ಪರಿಸ್ಥಿತಿ ಬರೋದು ಬೇಡ ಅಂತಾ ಮಕ್ಕಳನ್ನು ಓದಿಸುತ್ತಾರೆ, ಹೀಗಾಗಿ ಈ ಬಹುಭಾಷಾ ಪರಿಸರ (ತುಳು, ಬ್ಯಾರಿ, ಕನ್ನಡ, ಕೊಂಕಣಿ) ಸಹಜವಾಗಿ ಸಾಕ್ಷರತೆಯನ್ನು ಬೆಳೆಸುತ್ತದೆ.
ಇನ್ನು, ಈ ಜಿಲ್ಲೆಗಳಲ್ಲಿ ಖಾಸಗಿ ಶಾಲಾ-ಕಾಲೇಜುಗಳ ಸಂಖ್ಯೆ ಹೆಚ್ಚು. ಅವುಗಳ ನಡುವಿನ ಸ್ಪರ್ಧೆ ಶಿಕ್ಷಣದ ಗುಣಮಟ್ಟವನ್ನು ಸಹ ಉನ್ನತೀಕರಿಸುತ್ತದೆ. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ಗಳಂತಹ ಸಂಸ್ಥೆಗಳು ಸ್ಥಳೀಯವಾಗಿ ಬೆಳೆದುದರಿಂದ ವಿದ್ಯಾವಂತರಾಗಬೇಕು ಎಂಬ ಮನೋಭಾವ ಬಲವಾಗಿದೆ. ಶಿಕ್ಷಕರು ತರಬೇತಿ ಪಡೆದು, ಪೂರಕ ತರಗತಿಗಳು, ಪ್ರೀ-ಟೆಸ್ಟ್ಗಳು, ರಿವ್ಯೂ ಮೀಟಿಂಗ್ಗಳ ಮೂಲಕ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಾರೆ.
ಇದನ್ನು ಇತರ ಜಿಲ್ಲೆಗಳೊಂದಿಗೆ ಹೋಲಿಸಿದರೆ ವ್ಯತ್ಯಾಸ ಸ್ಪಷ್ಟ. ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರುಗಳಲ್ಲಿ ಬಡತನ, ಕೃಷಿ ಆಧಾರಿತ ಆರ್ಥಿಕತೆ, ಕಡಿಮೆ ಸಾಕ್ಷರತೆ ಮತ್ತು ಮೂಲಸೌಕರ್ಯ ಕೊರತೆಯಿಂದ ಫಲಿತಾಂಶ ಕಡಿಮೆ ಬರುತ್ತದೆ. ದಕ್ಷಿಣ ಕರಾವಳಿಯಲ್ಲಿ ಆರೋಗ್ಯ, ಪೋಷಣೆ ಮತ್ತು ಅರಿವು ಹೆಚ್ಚಿರುವುದು ವಿದ್ಯಾರ್ಥಿಗಳ ಮಾನಸಿಕ-ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಈ ಯಶಸ್ಸು ಸವಾಲುಗಳು ಇಲ್ಲದೆ ಬಂದಿದ್ದು ಎಂಬ ಅರ್ಥವಲ್ಲ.
ಈ ಸಾಧನೆಯಿಂದ ಕಲಿಯೋದು ಅನೇಕವಿದೆ, ವಿಶೇಷವಾಗಿ ರಾಜ್ಯ ಸರ್ಕಾರವು ಉತ್ತರ ಕರ್ನಾಟಕದಲ್ಲಿ ಕರಾವಳಿ ಮಾದರಿಯ ಶಿಕ್ಷಣ ಯೋಜನೆಗಳನ್ನು ಚಾಲನೆಗೆ ತರಬೇಕು. ಖಾಸಗಿ-ಸರ್ಕಾರಿ ಸಹಕಾರ, ಶಿಕ್ಷಕ ತರಬೇತಿ ಮತ್ತು ಪೋಷಕರ ಜಾಗೃತಿ ಅಭಿಯಾನಗಳ ಮೂಲಕ ರಾಜ್ಯವ್ಯಾಪಿ ಸಮಾನತೆಯನ್ನು ತರುವ ಕೆಲಸಕ್ಕೆ ಕೈ ಹಾಕಬೇಕು.
