Last Updated:
ಬಡತನ, ಕಷ್ಟಗಳ ನಡುವೆಯೂ ಛಲ ಬಿಡದೆ ಓದಿದ ಇವರ ಸಾಧನೆ ನಿಜಕ್ಕೂ ಯುವಜನತೆಗೆ ಸ್ಫೂರ್ತಿಯಾಗಿದೆ. ಇವರ ಯಶಸ್ಸಿನ ಹಾದಿ ಹೇಗಿತ್ತು? ಇವರು ಐಎಫ್ಎಸ್ ಅಧಿಕಾರಿಯಾಗಲು ಕಾರಣವೇನು? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಜೀವನವೆಂದರೆ ಒಂದು ಹೋರಾಟ, ಆ ಹೋರಾಟದಲ್ಲಿ ಏರಿಳಿತಗಳು ತೀರಾ ಸಾಮಾನ್ಯ, ಆದರೆ ಕಷ್ಟಪಟ್ಟು ಓದಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಚೆನ್ನೈ (Chennai) ಮೂಲದ ಸಾಮಾನ್ಯ ಕುಟುಂಬದ ಹುಡುಗಿಯೊಬ್ಬರು ಯುಪಿಎಸ್ಸಿ ಪರೀಕ್ಷೆಯಲ್ಲಿ (UPSC Exam) ಉತ್ತಮ ರ್ಯಾಂಕ್ ಗಳಿಸಿ, ಭಾರತೀಯ ವಿದೇಶಾಂಗ ಸೇವೆಗೆ (IFS) ಆಯ್ಕೆಯಾಗಿದ್ದಾರೆ. ಇದು ದೇಶವೇ ಸಂತೋಷ ಪಡುವ ಒಬ್ಬ ಧೀಮಂತ ಮಹಿಳೆಯ ಸಾಧನೆ ಎಂದರೂ ತಪ್ಪಾಗಲಾರದು. ಇವರ ಹೆಸರು ಜೀ ಜೀ ಎ.ಎಸ್. ತಂದೆ ಎಲೆಕ್ಟ್ರಿಷಿಯನ್ (Electrician) ಆಗಿ ಕೆಲಸ ಮಾಡುತ್ತಿದ್ದಾರೆ, ತಾಯಿ ಗೃಹಿಣಿ. ಇಂತಹ ಸಾಧಾರಣ ಹಿನ್ನೆಲೆಯಿಂದ ಬಂದರೂ, ತಮ್ಮ ಮೂರನೇ ಪ್ರಯತ್ನದಲ್ಲಿ ದೇಶಕ್ಕೆ 25ನೇ ರ್ಯಾಂಕ್ (AIR 25) ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಬಡತನ, ಕಷ್ಟಗಳ ನಡುವೆಯೂ ಛಲ ಬಿಡದೆ ಓದಿದ ಇವರ ಸಾಧನೆ ನಿಜಕ್ಕೂ ಯುವಜನತೆಗೆ ಸ್ಫೂರ್ತಿಯಾಗಿದೆ. ಇವರ ಯಶಸ್ಸಿನ ಹಾದಿ ಹೇಗಿತ್ತು? ಇವರು ಐಎಫ್ಎಸ್ ಅಧಿಕಾರಿಯಾಗಲು ಕಾರಣವೇನು? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಬರಹಗಾರ್ತಿಯಾಗುವ ಕನಸಿತ್ತು: ಜೀ ಜೀ ಅವರು ಚೆನ್ನೈನಲ್ಲಿ ಶಾಲಾ ಮತ್ತು ಕಾಲೇಜು ಶಿಕ್ಷಣ ಮುಗಿಸಿದರು. ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ಆರಂಭದಲ್ಲಿ ಇವರಿಗೆ ಬರಹಗಾರ್ತಿಯಾಗಬೇಕು ಎಂಬ ಆಸೆ ಇತ್ತು. ಆದರೆ ಕಾಲೇಜಿನ ಪ್ರೊಫೆಸರ್ ಒಬ್ಬರು ಇವರಿಗೆ ಸಿವಿಲ್ ಸರ್ವಿಸಸ್ ಬಗ್ಗೆ ತಿಳಿಸಿ, ಆ ಕಡೆ ಗಮನಹರಿಸುವಂತೆ ಪ್ರೋತ್ಸಾಹಿಸಿದರು.
ಸ್ಫೂರ್ತಿಯಾದ ಐಎಎಸ್ ಅಧಿಕಾರಿ: ಇವರು ಐಎಎಸ್ ಅಧಿಕಾರಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಚೆನ್ನೈ ಕಾರ್ಪೊರೇಷನ್ ಕಮಿಷನರ್ ಆಗಿದ್ದ ಗಗನ್ದೀಪ್ ಸಿಂಗ್ ಬೇಡಿ ಅವರ ಕೆಲಸಗಳು. ನಗರವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿಡಲು ಅವರು ಕೈಗೊಂಡ ಕ್ರಮಗಳು ಜೀ ಜೀ ಅವರಿಗೆ ತುಂಬಾ ಇಷ್ಟವಾಯಿತು. “ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಇಷ್ಟೆಲ್ಲಾ ಬದಲಾವಣೆ ತರಬಹುದಾ!” ಎಂದು ಅವರಿಗೆ ಆಶ್ಚರ್ಯವಾಯಿತು. ಇದೇ ಸ್ಫೂರ್ತಿಯಿಂದ ಅವರು ಯುಪಿಎಸ್ಸಿ ಪರೀಕ್ಷೆಗೆ ಗಂಭೀರವಾಗಿ ತಯಾರಿ ನಡೆಸಲು ಆರಂಭಿಸಿದರು.
ಮೂರು ಪ್ರಯತ್ನಗಳ ಹೋರಾಟ: ಯುಪಿಎಸ್ಸಿ ಪರೀಕ್ಷೆ ಎಂದರೆ ಸುಲಭದ ಮಾತಲ್ಲ. ಆದರೆ ಜೀ ಜೀ ಅವರು ಮೊದಲ ಪ್ರಯತ್ನದಲ್ಲೇ 107ನೇ ರ್ಯಾಂಕ್ ಪಡೆದು ತಮಿಳುನಾಡಿಗೆ ಟಾಪರ್ ಆಗಿದ್ದರು. ಆಗ ಅವರಿಗೆ ಐಪಿಎಸ್ (IPS) ಹುದ್ದೆ ಸಿಕ್ಕಿತು. ಆದರೆ ಅವರಿಗೆ ಇನ್ನೂ ಉತ್ತಮ ರ್ಯಾಂಕ್ ಬೇಕಿತ್ತು. ಹಾಗಾಗಿ ಮತ್ತೆ ಪರೀಕ್ಷೆ ಬರೆದರು. ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ಆದರೂ ಎದೆಗುಂದದೆ ಮೂರನೇ ಬಾರಿ ಪರೀಕ್ಷೆ ಬರೆದರು. ಈ ಬಾರಿ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತು. 25ನೇ ರ್ಯಾಂಕ್ ಪಡೆಯುವ ಮೂಲಕ ದೇಶದ ಟಾಪ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದರು.
ಉತ್ತಮ ರ್ಯಾಂಕ್ ಬಂದಿದ್ದರಿಂದ ಇವರು ಐಎಎಸ್ ಕೂಡ ಆರಿಸಿಕೊಳ್ಳಬಹುದಿತ್ತು. ಆದರೆ ಇವರಿಗೆ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ರಾಯಭಾರತ್ವದ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ವಿದೇಶಗಳಲ್ಲಿರುವ ಭಾರತೀಯರಿಗೆ ಸೇವೆ ಸಲ್ಲಿಸಬೇಕು ಎಂಬ ಉದ್ದೇಶದಿಂದ ಭಾರತೀಯ ವಿದೇಶಾಂಗ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳು ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದು ಇವರ ಮತ್ತೊಂದು ವಿಶೇಷ.
November 28, 2025 5:02 PM IST

