ಮನೆ ಕೆಲಸದಿಂದ, ಪೊಲೀಸ್ ಅಧಿಕಾರಿಯಾಗುವವರೆಗೂ ಹಲವು ಸವಾಲು, ಕಷ್ಟ, ಅವಮಾನ ಎದುರಿಸಿ ಅಂತಿಮವಾಗಿ ತಮ್ಮ ಗುರಿ ತಲುಪಿ, ಇತರೆ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ ಅಂಜು ಯಾದವ್.
ಅಂಜು ಯಾದವ್, ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರಂತೂ ಇವರ ಸಾಧನೆಯನ್ನು ಕಾಮೆಂಟ್ ವಿಭಾಗದಲ್ಲಿ ಕೊಂಡಾಡಿದ್ದರೆ, ನೀವೇ ನಿಜವಾದ ರೋಲ್ ಮಾಡೆಲ್ ಅಂತಾ ಬಣ್ಣಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಎರಡು ಫೋಟೋದಲ್ಲಿ, ಅಂಜು ಯಾದವ್ ಒಂದು ಫೋಟೋದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿದ್ದರೆ, ಮತ್ತೊಂದು ಫೋಟೋದಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಒಂದಿಷ್ಟು ತಮ್ಮ ಮನದಾಳದ ಮಾತುಗಳನ್ನು ಕ್ಯಾಪ್ಷನ್ನಲ್ಲಿ ಹಂಚಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತಮ್ಮ ಕನಸುಗಳನ್ನು ನನಸಾಗಿಸಲು ಸ್ವಾತಂತ್ರ್ಯ ಮತ್ತು ಪರಿಸರದ ಕೊರತೆಯಿದೆ. ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಇಲ್ಲಿ ಅವರಿಗೆ ಅಡ್ಡಿಯಾಗುತ್ತವೆ.
ಆದರೆ ನಿಮಗೆ ಗುರಿ, ಕನಸುಗಳಿದ್ದರೆ, ಅವುಗಳನ್ನು ತಲುಪಲು, ನನಸು ಮಾಡಿಕೊಳ್ಳಲು ದೃಢನಿಶ್ಚಯ ಹೊಂದಿರಬೇಕಷ್ಟೇ ಎನ್ನುವುದು ಅಂಜು ಅವರ ಮಾತಾಗಿದೆ.
ಹಳ್ಳಿಗಳು ಮತ್ತು ಸೌಲಭ್ಯ ವಂಚಿತ ಮನೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಎದುರಿಸುವ ಹೋರಾಟಗಳನ್ನು ಯಾದವ್ ಎತ್ತಿ ತೋರಿಸಿದರು. ಮಹಿಳೆಯರು ಧೈರ್ಯ ಮಾಡಿದರೆ, ಅವರು ಅಪಮಾನ, ನಿಂದನೆ, ಹಿಂಸೆ ಎಲ್ಲವನ್ನೂ ಮೆಟ್ಟಿ ನಿಲ್ಲಬಹುದು ಎಂದಿದ್ದಾರೆ.
ಗೃಹಿಣಿಯಾದ ನಾನು ಇಲ್ಲಿಯವರೆಗೂ ಬಂದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ, ಪ್ರತಿ ಹಂತದಲ್ಲೂ ಸವಾಲು, ನಿಂದನೆ ಅನುಭವಿಸಿದ್ದೇನೆ. ಆದರೆ ಎಲ್ಲಾ ಕಷ್ಟಗಳ ಪ್ರತಿಫಲವಾಗಿ ನನಗೆ ಕೊನೆಗೆ ಸಿಕ್ಕಿದ್ದು, ಸ್ವಾತಂತ್ರ್ಯ, ಘನತೆ ಮತ್ತು ಸ್ವಾಭಿಮಾನ ಅಂತಾ ಅಂಜು ಯಾದವ್ ಹೇಳಿದ್ದಾರೆ.
“ಈ ಸ್ವಾತಂತ್ರ್ಯ ರಾತ್ರೋರಾತ್ರಿ ಬಂದಿಲ್ಲ. ಗುರಿ ತಲುಪುವವರೆಗೂ ನಾನು ಕಂಡಿದ್ದು ಬರೀ ನೋವು. ಇವೆಲ್ಲವೂ ಕಳೆದುಹೋದ ಮೇಲೆ ಪ್ರೀತಿ, ಗೌರವ ಮತ್ತು ಘನತೆ ನನ್ನ ದಾರಿಗೆ ಬಂತು.
ಮನೆ ಕೆಲಸ ಮಾಡಿಕೊಂಡು ಇದ್ದ ನಾನು ಪೊಲೀಸ್ ಅಧಿಕಾರಿಯಾಗಲು ಕಾರಣವಾಗಿದ್ದೇ ನನ್ನ ದೃಢಸಂಕಲ್ಪ” ಎಂದು ಹೇಳಿದರು.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂಜು ಯಾದವ್ ಲಕ್ಷಾಂತರ ಮಹಿಳೆಯರಿಗೆ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪ ಎಂದು ನೆಟ್ಟಿಗರು ಹೊಗಳಿದ್ದಾರೆ.
ನಿಮ್ಮ ಪ್ರಯಾಣವು ಮುಂಬರುವ ಪೀಳಿಗೆಗೆ ಧೈರ್ಯ ತುಂಬುತ್ತದೆ, ನೀವೇ ನಮ್ಮ ಸ್ಪೂರ್ತಿ, ರೋಲ್ ಮಾಡೆಲ್ ಅಂತಾ ಕೆರೆದಿದ್ದಾರೆ.
ಹರಿಯಾಣದ ನರ್ನಾಲ್ ಜಿಲ್ಲೆಯ ಧೌಲೇಡಾ ಎಂಬ ಸಣ್ಣ ಹಳ್ಳಿಯಲ್ಲಿ 1988ರಲ್ಲಿ ಜನಿಸಿದ ಅಂಜು ಯಾದವ್ ರೈತ ಕುಟುಂಬದಿಂದ ಬಂದವರು. ಕುಟುಂಬ ಇವರಿಗೆ ಶಿಕ್ಷಣ ಕೊಡಿಸಲು ಆದ್ಯತೆ ನೀಡಿತ್ತು.
ಹಳ್ಳಿಯ ಸರ್ಕಾರಿ ಶಾಲೆಯಲ್ಲಿ 12 ನೇ ತರಗತಿಯವರೆಗೆ ಓದಿದ ನಂತರ, ಅವರು ದೂರ ಶಿಕ್ಷಣದ ಮೂಲಕ ಪದವಿ ಪಡೆದರು. ನಂತರ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಆಮೇಲೆ 21ನೇ ವಯಸ್ಸಿಗೆ ಮದುವೆಯಾದರು, 24ನೇ ವಯಸ್ಸಿಗೆ ತಾಯಿಯಾದರು. ಇಲ್ಲಿ ಅವರ ಕನಸುಗಳಿಗೆಲ್ಲಾ ಫುಲ್ಸ್ಟಾಪ್ ಬಿತ್ತು. ಆಮೇಲೆ ಗಂಡ, ಮನೆ, ಮಗು ಅಂತಾ ಅಲ್ಲೇ ಅಂಜು ಕಾಲ ಕಳೆದು ಬಿಟ್ಟರು.
ಹೀಗೆ ಜೀವನ ಸಾಗುತ್ತಿದ್ದ ವೇಳೆ, 2021ರಲ್ಲಿ, ಅವರ ಪತಿ ನಿತ್ಯಾನಂದ್ ಅನಾರೋಗ್ಯದಿಂದ ನಿಧನರಾದರು. ಈ ಘಟನೆ ಅಂಜು ಮತ್ತು ಮಗನನ್ನು ದಿಕ್ಕು ತೋಚದಂತೆ ಮಾಡಿತು. ಮಗನ ಸಂಪೂರ್ಣ ಹೊಣೆ ಅಂಜು ಹೆಗಲಿಗೆ ಬಿತ್ತು.
ಇದೇ ವೇಳೆ ರಾಜಸ್ಥಾನ ಆಡಳಿತ ಸೇವೆ (RAS) ಪರೀಕ್ಷೆಗೆ ಅರ್ಜಿ ಸಲ್ಲಿಸಿದರು. ಹಗಲು, ರಾತ್ರಿ ಎನ್ನದೇ ಓದಿ ವಿಧವೆ ಕೋಟಾದಡಿಯಲ್ಲಿ 1725 ನೇ ರ್ಯಾಂಕ್ ಪಡೆದರು.
ದೀರ್ಘ ಹೋರಾಟ ಮತ್ತು ಕಠಿಣ ಪರಿಶ್ರಮದ ನಂತರ, ಅವರು ಅಂತಿಮವಾಗಿ ಸೆಪ್ಟೆಂಬರ್ 2025ರಲ್ಲಿ ತೇರ್ಗಡೆ ಹೊಂದಿ, ರಾಜಸ್ಥಾನ ಪೊಲೀಸ್ ಸೇವೆಯಲ್ಲಿ ಡಿಎಸ್ಪಿ ಆದರು.
October 21, 2025 4:31 PM IST
