Last Updated:
Success Story: ನಗರದ ಜಂಜಾಟ, ಟ್ರಾಫಿಕ್ ಕಿರಿಕಿರಿ ಮತ್ತು ಬೆಳಗ್ಗೆಯಿಂದ ಸಂಜೆಯವರೆಗೆ ಆಫೀಸ್ ಕೆಲಸದ ಒತ್ತಡದಿಂದ ಬೇಸತ್ತು, ಪ್ರಶಾಂತವಾದ ಜಾಗಕ್ಕೆ ಹೋಗಿ ನೆಲೆಸಬೇಕು ಎಂದು ಎಷ್ಟೋ ಜನ ಕನಸು ಕಾಣುತ್ತಾರೆ. ಆದರೆ ಆ ಧೈರ್ಯ ಮಾಡುವುದು ಕೆಲವರು ಮಾತ್ರ. ಆ ಕುರಿತ ವರದಿ ಇಲ್ಲಿದೆ:
Success Story: ನಗರದ ಜಂಜಾಟ, ಟ್ರಾಫಿಕ್ ಕಿರಿಕಿರಿ ಮತ್ತು ಬೆಳಗ್ಗೆಯಿಂದ ಸಂಜೆಯವರೆಗೆ ಆಫೀಸ್ ಕೆಲಸದ ಒತ್ತಡದಿಂದ ಬೇಸತ್ತು, ಪ್ರಶಾಂತವಾದ ಜಾಗಕ್ಕೆ ಹೋಗಿ ನೆಲೆಸಬೇಕು ಎಂದು ಎಷ್ಟೋ ಜನ ಕನಸು ಕಾಣುತ್ತಾರೆ. ಆದರೆ ಆ ಧೈರ್ಯ ಮಾಡುವುದು ಕೆಲವರು ಮಾತ್ರ.
ದೆಹಲಿಯ (Delhi) ಯುವ ದಂಪತಿಗಳಾದ ಮುಕುಲ್ ಮತ್ತು ಟ್ಯೂಬಾ ಅಂತಹದ್ದೇ ಸಾಹಸಕ್ಕೆ ಕೈಹಾಕಿದ್ದಾರೆ. ಲಕ್ಷ ಲಕ್ಷ ಸಂಬಳ ಬರುತ್ತಿದ್ದ ಕಾರ್ಪೊರೇಟ್ ಕೆಲಸವನ್ನು (Corporate Work) ಬಿಟ್ಟು, ಹಿಮಾಚಲ ಪ್ರದೇಶದ (Himachal Pradesh) ಸುಂದರ ಬೆಟ್ಟಗಳ ನಡುವೆ ಪುಟ್ಟದೊಂದು ಕೆಫೆ (A small cafe amidst Beautiful Hills) ತೆರೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹಣಕ್ಕಿಂತ ಮನಸ್ಸಿನ ನೆಮ್ಮದಿಯೇ ಮುಖ್ಯ ಎಂದು ತೋರಿಸಿಕೊಟ್ಟಿರುವ ಇವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಇವರು ಹೇಗೆ ತಮ್ಮ ಕನಸಿನ ಕೆಫೆ ‘ಬ್ಲೀಬ್ಲೂ’ ಅನ್ನು ಕಟ್ಟಿದರು ಎಂಬುದರ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ಮಾಹಿತಿ.
ಮುಕುಲ್ ಮತ್ತು ಟ್ಯೂಬಾ 2021 ರಲ್ಲಿ ದೆಹಲಿಯಲ್ಲಿ ಭೇಟಿಯಾದರು. ಇಬ್ಬರೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೆಲಸದಲ್ಲಿ ಖುಷಿ ಇರಲಿಲ್ಲ. ಅದೇ ವರ್ಷ ಅಕ್ಟೋಬರ್ನಲ್ಲಿ ಹಿಮಾಚಲ ಪ್ರದೇಶದ ಜಿಭಿ ಎಂಬ ಪ್ರವಾಸಿ ತಾಣಕ್ಕೆ ಹೋದಾಗ ಅವರ ಬದುಕು ಬದಲಾಯಿತು. ಅಲ್ಲಿನ ಹಾಸ್ಟೆಲ್ ಒಂದರಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದನ್ನು ಕಂಡ ಮುಕುಲ್ ತಕ್ಷಣವೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಟ್ಯೂಬಾ ಕೂಡ ವರ್ಕ್ ಫ್ರಮ್ ಹೋಮ್ ಮಾಡುತ್ತಲೇ ಇವರ ಜೊತೆ ಸೇರಿಕೊಂಡರು.
ಕೆಫೆ ತೆರೆಯುವುದು ಸುಲಭದ ಮಾತಲ್ಲ. ಅದಕ್ಕಾಗಿ ಅನುಭವ ಬೇಕು. ಹೀಗಾಗಿ ಈ ಜೋಡಿ ಮುಂದಿನ ಮೂರು ವರ್ಷಗಳ ಕಾಲ ಅಲ್ಲಿನ ಬೇರೆ ಬೇರೆ ಹಾಸ್ಟೆಲ್ಗಳಲ್ಲಿ ಕೆಲಸ ಮಾಡಿದರು. ರೂಮ್ ಕ್ಲೀನ್ ಮಾಡುವುದರಿಂದ ಹಿಡಿದು, ಅತಿಥಿಗಳನ್ನು ಟ್ರೆಕ್ಕಿಂಗ್ ಕರೆದುಕೊಂಡು ಹೋಗುವವರೆಗೆ ಎಲ್ಲಾ ಕೆಲಸವನ್ನೂ ಕಲಿತರು. ಈ ಸಮಯದಲ್ಲಿ ಅವರಿಗೆ ಸಿಗುತ್ತಿದ್ದ ಸಂಬಳ ಕೇವಲ 5 ರಿಂದ 15 ಸಾವಿರ ರೂಪಾಯಿ. ದೆಹಲಿಯಲ್ಲಿ ಲಕ್ಷ ದುಡಿಯುತ್ತಿದ್ದ ಇವರಿಗೆ ಇದು ತೀರಾ ಕಡಿಮೆ. ಆದರೂ ತಮ್ಮ ಕನಸಿಗಾಗಿ ಕಷ್ಟಪಟ್ಟರು.
ಮೂರು ವರ್ಷಗಳ ಅನುಭವದ ನಂತರ, ಜಿಭಿಯಲ್ಲಿ ಒಂದು ಸುಂದರವಾದ ಜಾಗವನ್ನು 15 ವರ್ಷಗಳ ಗುತ್ತಿಗೆಗೆ ಪಡೆದರು. ಏಪ್ರಿಲ್ 2024 ರಲ್ಲಿ ತಮ್ಮ ಕನಸಿನ ‘ಕೆಫೆ ಬ್ಲೀಬ್ಲೂ’ ಅನ್ನು ಆರಂಭಿಸಿದರು. ಆರಂಭದಲ್ಲಿಯೇ ಇವರ ಕೆಫೆಯ ರೀಲ್ಸ್ ವೈರಲ್ ಆಗಿದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಕೇವಲ ಮೂರು ತಿಂಗಳಲ್ಲಿ ಲಾಭ ಗಳಿಸಲು ಶುರುಮಾಡಿದರು. ಈಗ ಇವರು ಕೆಫೆಯ ಜೊತೆಗೆ ಹಾಸ್ಟೆಲ್ ಕೂಡ ಆರಂಭಿಸುವ ತಯಾರಿಯಲ್ಲಿದ್ದಾರೆ.
ಮುಕುಲ್ ಹೇಳುವ ಪ್ರಕಾರ, “ದೆಹಲಿಯಲ್ಲಿ ನಮಗೆ ಸಿಗುತ್ತಿದ್ದ ಸಂಬಳಕ್ಕಿಂತ ಈಗ ಕಡಿಮೆ ಸಿಗುತ್ತಿರಬಹುದು. ಆದರೆ ಸ್ವಂತ ಉದ್ಯಮ ನಡೆಸುವ ಖುಷಿ ಮತ್ತು ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು,” ಎನ್ನುತ್ತಾರೆ. ಟ್ಯೂಬಾ ಕೂಡ ಇದನ್ನು ಒಪ್ಪುತ್ತಾ “ಇದು ಕೇವಲ ಬಿಸಿನೆಸ್ ಅಲ್ಲ, ಇದು ನಮ್ಮ ಮನೆ ಮತ್ತು ಕೆಲಸದ ಜಾಗ ಎರಡೂ ಹೌದು,” ಎಂದು ಅವರು ಸಂತೋಷದಿಂದ ಹೇಳುತ್ತಾರೆ. ಮುಕುಲ್ ಮತ್ತು ಟ್ಯೂಬಾ ಅವರ ಕಥೆ ನಮಗೆ ಒಂದು ಪಾಠ ಕಲಿಸುತ್ತದೆ. ಧೈರ್ಯ ಮಾಡಿ ಕನಸಿನ ಬೆನ್ನೇರಿದರೆ ಯಶಸ್ಸು ಮತ್ತು ನೆಮ್ಮದಿ ಎರಡೂ ಸಿಗುತ್ತದೆ.
November 26, 2025 11:23 PM IST

