Last Updated:
ಪ್ರುಧ್ವಿ ತೇಜ್ ಇಮ್ಮಡಿ, ಐಐಟಿ-ಜೆಇಇ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು, ₹70 ಲಕ್ಷದ ಸ್ಯಾಮ್ಸಂಗ್ ಉದ್ಯೋಗ ತ್ಯಜಿಸಿ, 2017 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 24 ನೇ ಸ್ಥಾನ ಪಡೆದು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ (IIT) ಸೀಟು ಗಿಟ್ಟಿಸಬೇಕು, ಇಲ್ಲವೇ ಐಎಎಸ್ (IAS) ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು… ಇವು ಲಕ್ಷಾಂತರ ಯುವಜನರ ಕನಸು. ಆದರೆ, ಈ ಎರಡೂ ಕನಸುಗಳನ್ನು ನನಸು ಮಾಡಿಕೊಳ್ಳುವವರು ಎಷ್ಟು ಜನ? ಒಂದು ವೇಳೆ ಎರಡೂ ಅವಕಾಶಗಳು ಸಿಕ್ಕರೆ, ಕೈತುಂಬಾ ಸಂಬಳ ಬರುವ ವಿದೇಶಿ ಕೆಲಸವನ್ನು ಬಿಟ್ಟು ಜನಸೇವೆಗೆ ಬರುವವರು ಯಾರು? ಇಂತಹ ಕೋಟಿಯಲ್ಲಿ ಒಬ್ಬರ ಕಥೆ ಇದು. ದೇಶದ ಎರಡು ಅತ್ಯಂತ ಕಠಿಣ ಪರೀಕ್ಷೆಗಳನ್ನು ಗೆದ್ದು, ಯಶಸ್ಸಿನ ಉತ್ತುಂಗದಲ್ಲಿದ್ದರೂ ದೇಶಸೇವೆಯೇ ದೊಡ್ಡದು ಎಂದು ತೋರಿಸಿಕೊಟ್ಟ ಆ ದೈತ್ಯ ಪ್ರತಿಭೆಯೇ ಪ್ರುಧ್ವಿ ತೇಜ್ ಇಮ್ಮಡಿ.
ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕಾಗಿ ಜೆಇಇ (JEE) ಪರೀಕ್ಷೆ ಬರೆಯುತ್ತಾರೆ. 2011 ರಲ್ಲಿ, ಆಂಧ್ರಪ್ರದೇಶದ ದ್ವಾರಕ ತಿರುಮಲದ ಹುಡುಗ ಪ್ರುಧ್ವಿ ತೇಜ್, ಈ ಪರೀಕ್ಷೆಯಲ್ಲಿ ಇಡೀ ದೇಶಕ್ಕೇ ಪ್ರಥಮ ರ್ಯಾಂಕ್ (AIR 1) ಪಡೆದು ಇತಿಹಾಸ ಸೃಷ್ಟಿಸಿದರು. ಇದು ಅವರ ಅದ್ಭುತ ಪ್ರತಿಭೆಗೆ ಹಿಡಿದ ಮೊದಲ ಕನ್ನಡಿ. ಅಂದುಕೊಂಡಂತೆಯೇ, ಅವರು ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಗೆ ಸೇರಿಕೊಂಡರು.
ಐಐಟಿಯಲ್ಲಿದ್ದಾಗಲೇ ಅವರ ಪ್ರತಿಭೆಗೆ ದೊಡ್ಡ ದೊಡ್ಡ ಕಂಪನಿಗಳು ಮಣೆ ಹಾಕಿದವು. 2014 ರಲ್ಲಿ ಕ್ಯಾಂಪಸ್ ಪ್ಲೇಸ್ಮೆಂಟ್ ಶುರುವಾಗುವ ಮೊದಲೇ, ದಕ್ಷಿಣ ಕೊರಿಯಾದ ದೈತ್ಯ ಕಂಪನಿ ‘ಸ್ಯಾಮ್ಸಂಗ್’ ಪ್ರುಧ್ವಿ ಅವರಿಗೆ ವಾರ್ಷಿಕ ₹70 ಲಕ್ಷ ಸಂಬಳದ ಉದ್ಯೋಗದ ಆಫರ್ ನೀಡಿತ್ತು. ವಿದೇಶದಲ್ಲಿ ಐಷಾರಾಮಿ ಜೀವನ, ಕೈತುಂಬಾ ಸಂಬಳ… ಬೇರೆಯವರಾಗಿದ್ದರೆ ಎರಡನೇ ಯೋಚನೆ ಮಾಡುತ್ತಿರಲಿಲ್ಲ. ಆದರೆ ಪ್ರುಧ್ವಿ ಅವರ ಮನಸ್ಸು ಬೇರೆಯದೇ ಸಾಧನೆಗೆ ತುಡಿಯುತ್ತಿತ್ತು.
ಸ್ವಲ್ಪ ಕಾಲ ಉದ್ಯೋಗ ಮಾಡಿದ ನಂತರ, ಆ ಬೃಹತ್ ಮೊತ್ತದ ಸಂಬಳ, ವಿದೇಶಿ ಜೀವನವನ್ನು ಬದಿಗೊತ್ತಿ, 2016 ರಲ್ಲಿ ಭಾರತಕ್ಕೆ ಮರಳಲು ನಿರ್ಧರಿಸಿದರು.
ಭಾರತಕ್ಕೆ ಮರಳಿದ ಅವರ ಮುಂದಿನ ಗುರಿ ಸ್ಪಷ್ಟವಾಗಿತ್ತು – ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಎಎಸ್ ಕನಸನ್ನು ನನಸು ಮಾಡಲು, ಅವರು ತಮ್ಮನ್ನು ಸಂಪೂರ್ಣವಾಗಿ ಓದಿನಲ್ಲಿ ತೊಡಗಿಸಿಕೊಂಡರು. ದಿನಕ್ಕೆ 14 ಗಂಟೆಗಳಿಗಿಂತ ಹೆಚ್ಚು ಕಾಲ ಅಧ್ಯಯನ ಮಾಡುತ್ತಿದ್ದರು. ಅವರ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಕ್ಕಿತು. 2017 ರ ಯುಪಿಎಸ್ಸಿ ಪರೀಕ್ಷೆಯಲ್ಲಿ, ಅವರು ಅಖಿಲ ಭಾರತ ರ್ಯಾಂಕಿಂಗ್ನಲ್ಲಿ 24 ನೇ ಸ್ಥಾನ (AIR 24) ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ದೇಶದ ಎರಡು ಕಠಿಣ ಪರೀಕ್ಷೆಗಳನ್ನು ಪಾಸ್ ಮಾಡಿದ ಹೆಗ್ಗಳಿಕೆ ಹೊಂದಿರುವ ಪ್ರುಧ್ವಿ ತೇಜ್ ಇಮ್ಮಡಿ, ಇಂದು ಆಂಧ್ರಪ್ರದೇಶದಲ್ಲಿ ಓರ್ವ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ, ಅವರು ಆಂಧ್ರಪ್ರದೇಶ ಪೂರ್ವ ವಿದ್ಯುತ್ ವಿತರಣಾ ಕಂಪನಿಯ (APEPDCL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಜ್ಞಾನ ಮತ್ತು ಕೌಶಲ್ಯದಿಂದ ವಿದ್ಯುತ್ ನಿಗಮಕ್ಕೆ ಲಾಭ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಣ, ಯಶಸ್ಸು, ವೈಭವಕ್ಕಿಂತ ದೇಶಸೇವೆಯೇ ದೊಡ್ಡದು ಎಂದು ತೋರಿಸಿಕೊಟ್ಟ ಪ್ರುಧ್ವಿ ತೇಜ್ ಇಮ್ಮಡಿ ಅವರ ಜೀವನಗಾಥೆ, ಇಂದಿನ ಯುವ ಪೀಳಿಗೆಗೆ ನಿಜಕ್ಕೂ ದೊಡ್ಡ ಸ್ಫೂರ್ತಿಯ ಉದಾಹರಣೆ.
June 25, 2025 8:25 PM IST

