Advertisement
Advertisement

NCERTಯ 6ನೇ ತರಗತಿಯ ಕನ್ನಡ ಪುಸ್ತಕಕ್ಕೆ ವಿರೋಧ! ಮಾಂಸಾಹಾರ ಬಹಿಷ್ಕಾರಕ್ಕೆ ಶಿಕ್ಷಣ ತಜ್ಞರು ಆಕ್ರೋಶ! ಏನಿದು ವಿವಾದ?

Shashank 02 2026 06 24t232201.748 2026 06 aa908d079aeac1b108a2dfb4cc0d478d 1200x675.jpg


Last Updated:

ಕನ್ನಡ ಪುಸ್ತಕದ ವಿರುದ್ಧ ರಾಜ್ಯದ ಶಿಕ್ಷಣ ತಜ್ಞರು (Educational Experts) ಆಕ್ರೋಶ ಹೊರಹಾಕಿದ್ದಾರೆ. ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿದ್ದೇಕೆ ಎಂದು ಪ್ರಶ್ನಿಸಿ, ಪಠ್ಯದಲ್ಲಿ ಮಾಂಸಾಹಾರ ಬಹಿಷ್ಕಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

6ನೇ ತರಗತಿ ಕನ್ನಡ ಪುಸ್ತಕ
6ನೇ ತರಗತಿ ಕನ್ನಡ ಪುಸ್ತಕ

ಬೆಂಗಳೂರು: ಎನ್‌ಸಿಇಆರ್‌ಟಿಯ (NCERT) 6ನೇ ತರಗತಿಯ ಕನ್ನಡ ಪುಸ್ತಕ (Kannada Book) ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಶೈಕ್ಷಣಿಕ ವರ್ಷದಿಂದ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಸಂಯೋಜಿತ ಶಾಲೆಗಳಲ್ಲಿ 6ನೇ ತರಗತಿ ಮತ್ತು ಅದಕ್ಕಿಂತ ಮೇಲಿನ ತರಗತಿಗಳಿಗೆ ಪರಿಚಯಿಸಿದ ಕನ್ನಡ ಪುಸ್ತಕದ ವಿರುದ್ಧ ರಾಜ್ಯದ ಶಿಕ್ಷಣ ತಜ್ಞರು (Educational Experts) ಆಕ್ರೋಶ ಹೊರಹಾಕಿದ್ದಾರೆ. ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿದ್ದೇಕೆ ಎಂದು ಪ್ರಶ್ನಿಸಿ, ಪಠ್ಯದಲ್ಲಿ ಮಾಂಸಾಹಾರ ಬಹಿಷ್ಕಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ತಜ್ಞರ ಆರೋಪಗಳೇನು?

ಈ ಪಠ್ಯಪುಸ್ತಕವು ಪುರಾಣ, ಧಾರ್ಮಿಕ ಕಥೆಗಳು, ಸಸ್ಯಾಹಾರ ಮತ್ತು ದೇವಕೇಂದ್ರಿತ ನಿರೂಪಣೆಗಳನ್ನು ಬಲವಂತವಾಗಿ ಹೇರುತ್ತಿದೆ. ಪುಸ್ತಕದ ಹೆಸರಿನ ಬಗ್ಗೆ ಮಾತ್ರವಲ್ಲದೆ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಹಾಗೂ ಪ್ರಾದೇಶಿಕ ಜೀವನ ಪದ್ಧತಿಯನ್ನು ಈ ಪಠ್ಯಪುಸ್ತಕದಲ್ಲಿ ಸಂಪೂರ್ಣವಾಗಿ ಕೈಬಿಡಲಾಗಿದೆ. R3 ಎಂಬುದು 6ನೇ ತರಗತಿಯಿಂದ ಕಡ್ಡಾಯಗೊಳಿಸಲಾದ ಮೂರನೇ ಭಾಷಾ ವಿಷಯವಾಗಿದೆ. ರಾಜಕೀಯ ಮತ್ತು ಸಾಂಸ್ಕೃತಿಕ ಹೇರಿಕೆಯ ಅಸ್ತ್ರ ಎಂದು ಮೂಲಭೂತ ಶಿಕ್ಷಣದ ಹಕ್ಕಿಗಾಗಿನ ಸಾರ್ವಜನಿಕ ಒಕ್ಕೂಟ (PAFRE) ಕಿಡಿ ಕಾರಿದೆ.
ಜಾನಪದ, ಸಾಹಿತ್ಯ ಮತ್ತು ಬದುಕು ಇಲ್ಲಿ ಕಾಣೆಯಾಗಿದೆ

ಎನ್‌ಸಿಇಆರ್‌ಟಿ ಕನ್ನಡ (R3) ಪಠ್ಯಪುಸ್ತಕಗಳ ಮೂಲಕ ಸಾಂಸ್ಕೃತಿಕ ಹೇರಿಕೆ ಮಾಡಲಾಗುತ್ತಿದೆ. NCERT 6ನೇ ತರಗತಿಯ ‘R3’ ಕನ್ನಡ ಪಠ್ಯಪುಸ್ತಕವು ದಿಗ್ಭ್ರಮೆ ಮೂಡಿಸುವಂತಿದೆ ಎಂದು ಅಸಮಾಧಾನ ಹೊರಹಾಕಿರುವ PAFRE ಸಂಘಟನೆ, ಮಕ್ಕಳಿಗೆ ರಾಜಕೀಯ ಮತ್ತು ಸಾಂಸ್ಕೃತಿಕ ಹೇರಿಕೆಯ ಅಸ್ತ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಬಿಂಬಿಸುವ ಯಾವುದೇ ಪಾಠಗಳು ಇಲ್ಲ, ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಬದುಕು ಇಲ್ಲಿ ಕಾಣೆಯಾಗಿದೆ. 6ನೇ ತರಗತಿಯ ಮಗುವಿನ ಕುತೂಹಲ ಮತ್ತು ವಯಸ್ಸಿಗೆ ತಕ್ಕಂತಹ ಯಾವುದೇ ಚಟುವಟಿಕೆಗಳು, ಪಠ್ಯಗಳು, ಚಿತ್ರಗಳು ಅಥವಾ ಕಥೆಗಳು ಇದರಲ್ಲಿಲ್ಲ ಎಂದು‌ ಕಿಡಿಕಾರಿದೆ.

ಮಾಂಸಾಹಾರ ಬಹಿಷ್ಕಾರಕ್ಕೆ ಆಕ್ರೋಶ

ಪಠ್ಯಪುಸ್ತಕದಲ್ಲಿರುವ ‘ಆರೋಗ್ಯವೇ ಭಾಗ್ಯ’ ಎಂಬ ಪಾಠದಲ್ಲಿ ಆಹಾರದ ಬಗ್ಗೆ ಮಾತನಾಡುವಾಗ, ಪರೋಕ್ಷವಾಗಿ ಸಾತ್ವಿಕ ಆಹಾರದ ಪರಿಕಲ್ಪನೆಯನ್ನು ಮಕ್ಕಳ ತಲೆಗೆ ತುಂಬಲಾಗುತ್ತಿದೆ. ಮೊಟ್ಟೆ, ಮೀನು, ಚಿಕನ್, ಮಟನ್, ಉತ್ತರ ಕರ್ನಾಟಕದ ಶೇಂಗಾ ಎಣ್ಣೆಯೊಂದಿಗಿನ ಜೋಳದ ರೊಟ್ಟಿ ಇವೆಲ್ಲಾ ಎಲ್ಲಿಗೆ ಹೋದವು? ಇದು ಮಾಂಸಾಹಾರಿ ಆಹಾರವನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುವ ತಂತ್ರವಾಗಿದೆ. ಕೇವಲ ಸಸ್ಯಾಹಾರ ಮಾತ್ರ ‘ಸಮತೋಲಿತ’ ಎಂದು ಬರೆಯುವುದು ಮಕ್ಕಳ ಆಹಾರದ ತಟ್ಟೆಯನ್ನು ರಾಜಕೀಯಗೊಳಿಸುವುದಾಗಿದೆ ಎಂದು ಶಿಕ್ಷಣ ತಜ್ಞರು ಅಸಮಾಧಾನ ಹೊರಹಾಕಿದ್ದಾರೆ.

(ವರದಿ: ಶರಣು ಹಂಪಿ, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

TOP