Last Updated:
ಮಂಡ್ಯ ಮದ್ದೂರು ಕೆಸ್ತೂರು ಸರ್ಕಾರಿ ಪಿಯು ಕಾಲೇಜು ಮುಚ್ಚುವ ಹಂತದಲ್ಲಿ, 600 ಹಳೆ ವಿದ್ಯಾರ್ಥಿಗಳು 2.5 ಲಕ್ಷ ವೆಚ್ಚದಲ್ಲಿ ಕಟ್ಟಡ ದುರಸ್ತಿ ಮಾಡಿ ಸೌಲಭ್ಯ ಹೆಚ್ಚಿಸಿ ದಾಖಲಾತಿ ಉಳಿಸಿದರು
ಮಂಡ್ಯ: ಅಮ್ಮನ ಮಡಿಲಷ್ಟೇ ಪವಿತ್ರವಾದದ್ದು ಅಕ್ಷರ ಕಲಿಸಿದ ಶಾಲೆ (School). ಆದರೆ ಇಂದು ಖಾಸಗಿ ಶಾಲೆಗಳ ಅಬ್ಬರದಲ್ಲಿ ಅದೆಷ್ಟೋ ಸರ್ಕಾರಿ (Govt) ಶಾಲೆಗಳು ಬಾಗಿಲು ಹಾಕುವ ಸ್ಥಿತಿಗೆ ತಲುಪಿವೆ. ಮಂಡ್ಯ ಜಿಲ್ಲೆಯ ಮದ್ದೂರು (Maddur) ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರಿಸ್ಥಿತಿಯೂ ಹಾಗೆಯೇ ಇತ್ತು. ನೂರಾರು ವಿದ್ಯಾರ್ಥಿಗಳಿಂದ (Students) ಗಿಜಿಗುಟ್ಟುತ್ತಿದ್ದ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಕೇವಲ 37ಕ್ಕೆ ಕುಸಿದಿತ್ತು. ಇನ್ನು ಕೆಲವೇ ದಿನಗಳಲ್ಲಿ ಶಾಲೆಗೆ ಬೀಗ ಬೀಳುತ್ತೆ ಎನ್ನುವಾಗಲೇ ಎಂಟ್ರಿ ಕೊಟ್ಟವರು ಆ ಶಾಲೆಯ ಹಳೆಯ ವಿದ್ಯಾರ್ಥಿಗಳು.
600 ಮಂದಿ ‘ಗುರುದಕ್ಷಿಣೆ’ ನೀಡಿದಾಗ ಕಂಡ ಪವಾಡ
ತಮ್ಮ ಬಾಲ್ಯವನ್ನು ರೂಪಿಸಿದ ಶಾಲೆ ಅವಸಾನದ ಅಂಚಿನಲ್ಲಿರುವುದನ್ನು ಸಹಿಸದ ಹಳೆ ವಿದ್ಯಾರ್ಥಿಗಳು ಒಂದಾದರು. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 600 ಮಂದಿ ಸೇರಿ ಒಂದು ಬಲಿಷ್ಠ ಸಂಘವನ್ನು ಕಟ್ಟಿದರು. ಕೈಲಾದಷ್ಟು ಹಣ ಒಟ್ಟುಗೂಡಿಸಿ ಬರೋಬ್ಬರಿ 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಯನ್ನೇ ಬದಲಾಯಿಸಿಬಿಟ್ಟಿದ್ದಾರೆ. ಪಾಳುಬಿದ್ದಂತಿದ್ದ ಕಟ್ಟಡಕ್ಕೆ ಈಗ ಹೊಸ ಬಣ್ಣದ ಮೆರುಗು, ಸುಸಜ್ಜಿತ ವೈರಿಂಗ್, ಕುಡಿಯುವ ನೀರು ಮತ್ತು ಹೈಟೆಕ್ ಕಂಪ್ಯೂಟರ್ ಕೊಠಡಿಗಳು ಸಜ್ಜಾಗಿವೆ.
ಕೇವಲ ದುರಸ್ತಿಯಲ್ಲ
ಹಳೆ ವಿದ್ಯಾರ್ಥಿಗಳ ಈ ಸಾಹಸ ಕೇವಲ ಕಟ್ಟಡಕ್ಕೆ ಸುಣ್ಣ-ಬಣ್ಣ ಹಚ್ಚುವುದಕ್ಕೆ ಸೀಮಿತವಾಗಿಲ್ಲ. ಈ ಬಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ಪ್ರತಿಯೊಬ್ಬ ಹಳೆ ವಿದ್ಯಾರ್ಥಿಯೂ ಪಣ ತೊಟ್ಟಿದ್ದಾರೆ. ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಸರ್ಕಾರಿ ಶಾಲೆಯ ಮಹತ್ವ ತಿಳಿಸಿ, ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.
Location :
Mandya,Mandya,Karnataka
