Last Updated:
Major Swati Kumar: ಕನ್ನಡತಿಗೆ ಒಲಿದ ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ; ಬೆಂಗಳೂರಿನ ಮೇಜರ್ ಸ್ವಾತಿ ಶಾಂತ ಕುಮಾರ್ಗೆ UNMISS ಪ್ರಶಸ್ತಿ. ಇಲ್ಲಿದೆ ಭಾರತೀಯ ಯೋಧೆ ಸ್ವಾತಿ ಶಾಂತ ಕುಮಾರ್ ಅವರ ಮಹತ್ತರ ಸಾಧನೆ:
Major Swati Kumar: ಭಾರತೀಯ ಸೇನೆ (Indian Army) ಎಂದರೆ ಶಿಸ್ತು, ತ್ಯಾಗ ಮತ್ತು ದೇಶಭಕ್ತಿಯ ಸಂಕೇತ. ಹಾಗಾಗಿಯೇ, ಸೇನೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಯೋಧನ (Soldier) ಕಥೆಯೂ ಪ್ರೇರಣಾದಾಯಕವೇ ಆಗಿರುತ್ತದೆ. ಆದರೆ ಕೆಲವೊಂದು ಕಥೆಗಳು ಸಾಮಾನ್ಯ ಗಡಿಗಳನ್ನು ದಾಟಿ, ಇಡೀ ಜಗತ್ತಿಗೆ ಸ್ಫೂರ್ತಿಯಾಗುತ್ತವೆ. ಅಂತಹದ್ದೇ ಒಂದು ಕಥೆ ಬೆಂಗಳೂರಿನ ಹುಡುಗಿ ಮೇಜರ್ (Major) ಸ್ವಾತಿ ಶಾಂತ ಕುಮಾರ್ (Swati Shanta Kumar) ಅವರದ್ದು. ಹೌದು, ಬಾಲ್ಯದಿಂದಲೇ ಸೇನಾ ಸಮವಸ್ತ್ರ ಧರಿಸುವ ಕನಸು ಕಂಡ ಈ ಯುವತಿ, ಇಂದು ಭಾರತೀಯ ಸೇನೆಯ ಹೆಮ್ಮೆಯಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಮೇಜರ್ ಸ್ವಾತಿ ಶಾಂತ ಕುಮಾರ್ ಅವರು ಮೂಲತಃ ನಮ್ಮ ಬೆಂಗಳೂರಿನವರು. ಅವರ ಪೋಷಕರ ಪ್ರಕಾರ, ಸ್ವಾತಿ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಸೇನಾ ಸಮವಸ್ತ್ರದ ಬಗ್ಗೆ ಅಪಾರ ಗೌರವವಿತ್ತು. ಇನ್ನು ಮನೆಯ ಮೂವರು ಸಹೋದರಿಯರ ಪೈಕಿ ಹಿರಿಯವರಾದ ಸ್ವಾತಿ, ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದ ಪರಿಣಾಮ, ಶಾಲಾ ದಿನಗಳಿಂದಲೇ ಶಿಸ್ತು ಮತ್ತು ದೇಶಸೇವೆಯ ಬಗ್ಗೆ ಒಲವು ಬೆಳೆಸಿಕೊಂಡಿದ್ದರು. ಹಾಗಾಗಿಯೇ, ತಮ್ಮ ವಿದ್ಯಾಭ್ಯಾಸದ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಹೆಚ್ಚಿಸಿಕೊಂಡ ಅವರು, ನಿರಂತರ ಪರಿಶ್ರಮದಿಂದ ಭಾರತೀಯ ಸೇನೆಗೆ ಸೇರ್ಪಡೆಯಾದರು. ಆದರೆ ಅವರ ಸಾಧನೆ ಅಲ್ಲಿಗೆ ನಿಲ್ಲಲಿಲ್ಲ, ಇಂದು ವಿಶ್ವದ ಅತ್ಯುನ್ನತ ವೇದಿಕೆಯವರೆಗೂ ತಲುಪಿದೆ.
ಹೌದು, ಪ್ರಸ್ತುತ ಮೇಜರ್ ಸ್ವಾತಿ ದಕ್ಷಿಣ ಸುಡಾನ್ನಲ್ಲಿ ವಿಶ್ವಸಂಸ್ಥೆಯ ಮಿಷನ್ UNMISS ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವ ಜವಾಬ್ದಾರಿ ಅವರ ಮೇಲಿದೆ. ಇಲ್ಲಿ ಅವರು ಲಿಂಗ ಸಮಾನತೆ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ವಿಶಿಷ್ಟ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದರು. ಈ ಕಾರಣದಿಂದಾಗಿ, ಅವರಿಗೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು, 2025 ರ ಸೆಕ್ರೆಟರಿ ಜನರಲ್ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
ಮೇಜರ್ ಸ್ವಾತಿ ಅವರಿಗೆ ಈ ಪ್ರಶಸ್ತಿ ಬರಲು ಕಾರಣ ಅವರು ರೂಪಿಸಿದ ಸಮಾನ ಪಾಲುದಾರರು, ಶಾಶ್ವತ ಶಾಂತಿ (Equal Partners, Lasting Peace) ಎಂಬ ವಿನೂತನ ಯೋಜನೆ. ಸಂಘರ್ಷ ಪೀಡಿತ ದಕ್ಷಿಣ ಸುಡಾನ್ನಂತಹ ಪ್ರದೇಶದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಅದರಂತೆ, ಸ್ವಾತಿ ಅವರು ಭಾರತೀಯ ಎಂಗೇಜ್ಮೆಂಟ್ ತಂಡವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದರು. ಅದರಂತೆ, ಅವರ ತಂಡವು ಕೇವಲ ಗಸ್ತು ತಿರುಗುವುದಕ್ಕೆ ಸೀಮಿತವಾಗಿರಲಿಲ್ಲ. ಬದಲಿಗೆ ನದಿ ತೀರದ ಗಸ್ತು, ವೈಮಾನಿಕ ಗಸ್ತು ಮತ್ತು ದೂರದ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರ ವಿಶ್ವಾಸ ಗಳಿಸುವ ಕೆಲಸವನ್ನು ಮಾಡಿತು. ಈ ಮೂಲಕ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತೆ ಮತ್ತು ಬೆಂಬಲದ ವಾತಾವರಣ ನಿರ್ಮಾಣವಾಗಿದ್ದು, ಅವರು ಸಮುದಾಯ ಚಟುವಟಿಕೆಗಳಲ್ಲಿ ಧೈರ್ಯವಾಗಿ ಭಾಗವಹಿಸಲು ಸಾಧ್ಯವಾಗಿದೆ.
ಮೇಜರ್ ಸ್ವಾತಿ ಶಾಂತ ಕುಮಾರ್ ಅವರ ಈ ಪಯಣ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ತಂದೆಯ ಪ್ರೋತ್ಸಾಹ ಮತ್ತು ಸ್ವಯಂ ಬಲದೊಂದಿಗೆ ಮುನ್ನಡೆದರೆ, ಒಬ್ಬ ಸಾಮಾನ್ಯ ಹುಡುಗಿ ಜಾಗತಿಕ ಮಟ್ಟದಲ್ಲಿ ಹೇಗೆ ಬದಲಾವಣೆ ತರಬಲ್ಲಳು ಎಂಬುದಕ್ಕೆ ಇವರೇ ಸಾಕ್ಷಿ. ಲಿಂಗ ತಾರತಮ್ಯವನ್ನು ಹೋಗಲಾಡಿಸಿ, ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ ಅವರ ಕಾರ್ಯವೈಖರಿ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಬೆಂಗಳೂರಿನ ಬೀದಿಗಳಿಂದ ವಿಶ್ವಸಂಸ್ಥೆಯ ಪ್ರಶಸ್ತಿಯವರೆಗಿನ ಅವರ ನಡೆ, ಕನಸು ಕಾಣುವ ಪ್ರತಿಯೊಬ್ಬ ಯುವತಿಗೂ ದಾರಿ ದೀಪವಾಗಿದೆ.
Bangalore,Karnataka

