ಈ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ನಡೆಸಲಾಗುತ್ತಿದೆ. ಹೀಗಾಗಿ, ಎಲ್ಲಾ ಮಾಹಿತಿಯೂ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ವಿವರಗಳೂ KEA ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ. ಅಭ್ಯರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ, ಅಧಿಕೃತ ವೆಬ್ಸೈಟ್ನಲ್ಲಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಂತರವೇ ಅರ್ಜಿ ಭರ್ತಿ ಮಾಡುವುದು ಉತ್ತಮ.
ರಾಜ್ಯದಲ್ಲಿ ಒಟ್ಟು 3,991 ಹುದ್ದೆಗಳ ಪೈಕಿ 596 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಈ ಮೀಸಲಾತಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹಾಗೂ ಅಲ್ಲಿ ವಾಸಿಸುವ ಯುವಕರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮಾಡಲಾಗಿದೆ. ಉಳಿದ 3,395 ಹುದ್ದೆಗಳು ಉಳಿಕೆ ಮೂಲ ವೃಂದಕ್ಕೆ ಸೇರಿದ್ದು, ರಾಜ್ಯದ ಇತರೆ ಭಾಗಗಳ ಅಭ್ಯರ್ಥಿಗಳಿಗೆ ಲಭ್ಯವಾಗುತ್ತವೆ. ಹೀಗಾಗಿ ಈಗಾಗಲೇ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನೀವು ಕೂಡ ಹೀಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿಯನ್ನು ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವಂತೆ KEA ಸೂಚಿಸಿದೆ. ವಿಶೇಷವಾಗಿ ಮೀಸಲಾತಿ ಪ್ರಯೋಜನ ಪಡೆಯುವ ಅಭ್ಯರ್ಥಿಗಳು ತಮ್ಮ ಪ್ರಮಾಣ ಪತ್ರಗಳನ್ನು ಸರಿಯಾಗಿ ಹೊಂದಿರಬೇಕು. ಪರಿಶಿಷ್ಟ ಜಾತಿ ಅಭ್ಯರ್ಥಿಗಳು SC-A, SC-B, SC-C ಒಳಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರಗಳನ್ನು ಹೊಂದಿದ್ದು, ಅದರ RD ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. RD ಸಂಖ್ಯೆ ಇಲ್ಲದಿದ್ದರೆ ಅಥವಾ ತಪ್ಪಾಗಿ ನಮೂದಿಸಿದರೆ, ಒಳಮೀಸಲಾತಿ ಸೌಲಭ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ.
ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ ಸೇರಿದಂತೆ ಇತರ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಬಯಸುವವರು ತಮ್ಮ ತಮ್ಮ ಕೋಟಾಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಕೂಡಾ ಸಿದ್ಧವಾಗಿಟ್ಟುಕೊಳ್ಳಬೇಕು. ಉದಾಹರಣೆಗೆ, ಗ್ರಾಮೀಣ ಕೋಟಾ ಪಡೆಯಲು ಗ್ರಾಮೀಣ ಪ್ರದೇಶದಲ್ಲಿ ಓದಿದ ಬಗ್ಗೆ ಪ್ರಮಾಣ ಪತ್ರ ಅಗತ್ಯವಾಗಬಹುದು. ಕನ್ನಡ ಮಾಧ್ಯಮ ಕೋಟಾ ಪಡೆಯಲು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆ ಬೇಕಾಗುತ್ತದೆ. ಇವುಗಳ ವಿವರಗಳನ್ನು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಿರುವುದರಿಂದ ಅದನ್ನು ಚೆನ್ನಾಗಿ ಓದಿಕೊಳ್ಳುವುದು ಮುಖ್ಯ.
ಆನ್ಲೈನ್ ಅರ್ಜಿ ಸಲ್ಲಿಸುವ ವೇಳೆ, ಅಭ್ಯರ್ಥಿಗಳು ತಮ್ಮ ಭಾವಚಿತ್ರವನ್ನು (ಫೋಟೋ) ಅಪ್ಲೋಡ್ ಮಾಡಬೇಕಾಗುತ್ತದೆ. ಈ ಫೋಟೋ ಫೈಲ್ನ ಗಾತ್ರ 50KB ಒಳಗಿರಬೇಕು ಎಂದು KEA ಸೂಚಿಸಿದೆ. ಆದ್ದರಿಂದ, ಫೋಟೋ ಅನ್ನು ಸ್ಕ್ಯಾನ್ ಮಾಡುವಾಗ ಅಥವಾ ಮೊಬೈಲ್ ಮೂಲಕ ತೆಗೆದು ಅಪ್ಲೋಡ್ ಮಾಡುವಾಗ ಅದರ ಗಾತ್ರವನ್ನು ಸರಿಯಾಗಿ ಹೊಂದಿಸಿ, ನಿಗದಿತ ಮಿತಿಯೊಳಗೆ ಇಡುವುದು ಅಗತ್ಯ. ಇಲ್ಲದಿದ್ದರೆ ಫೋಟೋ ಅಪ್ಲೋಡ್ ಆಗದೇ ಅರ್ಜಿ ಸಲ್ಲಿಕೆಯಲ್ಲಿ ತೊಂದರೆ ಉಂಟಾಗಬಹುದು.
ಅರ್ಜಿಯನ್ನು ಸಲ್ಲಿಸಬೇಕಾದ ಕೊನೆಯ ದಿನಾಂಕ ಜುಲೈ 3 ಎಂದು ನಿಗದಿಪಡಿಸಲಾಗಿದೆ. ಈ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ ಕೊನೆಯ ಕ್ಷಣದವರೆಗೆ ಕಾಯದೆ, ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಅಂತಿಮ ದಿನಗಳಲ್ಲಿ ಸರ್ವರ್ ಸಮಸ್ಯೆ, ಇಂಟರ್ನೆಟ್ ತೊಂದರೆ ಇತ್ಯಾದಿ ಕಾರಣಗಳಿಂದ ಅರ್ಜಿ ಸಲ್ಲಿಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯನ್ನು ತಪ್ಪಿಸಲು ಇದು ಸಹಾಯಕವಾಗುತ್ತದೆ.
ನೇಮಕಾತಿ ಅಧಿಸೂಚನೆ, ಅರ್ಹತೆ, ವಯೋಮಿತಿ, ಪರೀಕ್ಷಾ ಮಾದರಿ, ಶುಲ್ಕ ಪಾವತಿ ವಿಧಾನ, ಪರೀಕ್ಷಾ ದಿನಾಂಕ ಇತ್ಯಾದಿ ಎಲ್ಲಾ ವಿವರಗಳು KEA ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವುದರಿಂದ, ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಎಲ್ಲರೂ ಅದನ್ನು ಎಚ್ಚರಿಕೆಯಿಂದ ಓದಿ, ಸೂಚನೆಗಳನ್ನು ಪಾಲಿಸಿ, ನಿಗದಿತ ಸಮಯದೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿ ರಾಜ್ಯದ ಸಾವಿರಾರು ಯುವಕರಿಗೆ ಸರ್ಕಾರಿ ಸೇವೆಯಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಮಹತ್ವದ ಅವಕಾಶವಾಗಿದೆ.
(ವರದಿ: ಪ್ರಗತಿ ಶೆಟ್ಟಿ, ನ್ಯೂಸ್18 ಕನ್ನಡ, ಬೆಂಗಳೂರು)
