ಚಾರ್ಟೆಡ್ ಅಕೌಂಟೆಂಟ್ನಿಂದ ಐಪಿಎಸ್ ಅಧಿಕಾರಿಯಾಗಿರುವವರು ಶಿವಚಂದ್ರನ್. ಇವರ ಯುಪಿಎಸ್ಸಿ ಪರೀಕ್ಷೆಯ ಗೆಲುವಿನ ಜರ್ನಿ ಹೇಗಿತ್ತು ಎಂದು ನೋಡೋಣ.
2024ರ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 23ನೇ ಅಖಿಲ ಭಾರತ ಶ್ರೇಣಿಯನ್ನು ಗಳಿಸುವ ಮೂಲಕ ಇಂದು ದಕ್ಷ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಉನ್ನತ ಆಡಳಿತ ಹುದ್ದೆಗೆ ಸುಲಭವಾಗಿ ಅರ್ಹತೆ ಪಡೆದಿದ್ದರೂ, ಭಾರತೀಯ ಪೊಲೀಸ್ ಸೇವೆಯಲ್ಲಿ ಕೆಲಸ ಮಾಡುವುದು ಇವರ ಆಸೆಯಾಗಿದ್ದ ಕಾರಣ, ಐಎಎಸ್ ಬದಲಿಗೆ ಇವರು ಐಪಿಎಸ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು.
ಐಪಿಎಸ್ ಅಧಿಕಾರಿಯಾಗುವುದು ಇವರ ಬಾಲ್ಯದ ಕನಸಾಗಿತ್ತು. 26/11 ಮುಂಬೈ ಭಯೋತ್ಪಾದಕ ದಾಳಿಗಳಂತಹ ಸಂದರ್ಭದಲ್ಲಿ ಕಮಾಂಡೋಗಳ ಧೈರ್ಯ, ಅವರು ಮಾಡಿದ ಸಾಹಸ ಇವರ ಮೇಲೆ ಪ್ರಭಾವ ಬೀರಿತ್ತು. 2008ರ ಮುಂಬೈ ದಾಳಿಯ ಸಮಯ ಐಪಿಎಸ್ ಕನಸಿಗೆ ಮತ್ತಷ್ಟು ಸ್ಫೂರ್ತಿ ನೀಡಿತು ಎಂದು ಶಿವಚಂದ್ರನ್ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಘಟನೆಗಳು ಸಮವಸ್ತ್ರದಲ್ಲಿ ಸೇವೆ ಸಲ್ಲಿಸುವ ಜೀವಮಾನದ ಬಯಕೆಯನ್ನು ಅವರಲ್ಲಿ ಹುಟ್ಟುಹಾಕಿತು, ಬಾಲ್ಯದ ಆಸೆಯನ್ನು ಹೆಚ್ಚು ಮಾಡಿತು. ವರ್ಷಗಳ ನಂತರ, ಈ ಕಿಡಿ ಮಹತ್ವಾಕಾಂಕ್ಷೆ, ಶಿಸ್ತು ಮತ್ತು ಕಠಿಣ ಪರಿಶ್ರಮವಾಗಿ ಬದಲಾಯಿತು.
ಧರ್ಮಪುರಿಯ ಮೂಲದ ಶಿವಚಂದ್ರನ್ ಡಿಎವಿ ಗೋಪಾಲಪುರಂನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ ಚಾರ್ಟರ್ಡ್ ಅಕೌಂಟೆಂಟ್ ಆದರು. ನಂತರ ಸಂಪೂರ್ಣವಾಗಿ ನಾಗರಿಕ ಸೇವೆಗಳತ್ತ ಗಮನ ಹರಿಸಿದರು. 2018ರಲ್ಲಿ ತಮ್ಮ ಯುಪಿಎಸ್ಸಿ ತಯಾರಿಯನ್ನು ಪ್ರಾರಂಭಿಸಿದ ಅವರು, ಐದನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರು.
ನಾಲ್ಕು ಬಾರಿ ಪರೀಕ್ಷೆಯಲ್ಲಿ ವಿಫಲವಾದ್ರೂ ಸಹ ತಮ್ಮ ನಿರ್ಧಾರ, ಇಟ್ಟ ಹೆಜ್ಜೆಯಿಂದ ಹಿಂದೆ ಸರಿದಿರಲಿಲ್ಲ. ಗೆದ್ದೇ ಗೆಲ್ಲುತ್ತೇನೆ ಒಂದು ದಿನ ಎಂಬ ದಿಟ್ಟ ನಿರ್ಧಾರದೊಂದಿಗೆ ಸತತ ಪ್ರಯತ್ನಗಳ ಮೂಲಕ ತಮ್ಮ ಕನಸಿನ ಪರೀಕ್ಷೆಯನ್ನು ಭೇದಿಸಿದರು.
ಸೇವೆ ಮತ್ತು ವೃತ್ತಿಪರತೆಯಲ್ಲಿ ಬೇರೂರಿರುವ ಕುಟುಂಬದಲ್ಲಿ ಬೆಳೆದ ಶಿವಚಂದ್ರನ್ ತಂದೆ ಚಾರ್ಟರ್ಡ್ ಅಕೌಂಟೆಂಟ್, ಹಾಗೇ ತಾಯಿ ಕೂಡ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೋರ್ವ ಸಹೋದರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಧನೆಗೆ ಬೇಕಾದ ಎಲ್ಲಾ ಪ್ರೋತ್ಸಾಹ ಮತ್ತು ಶಿಸ್ತು ಇವರಿಗೆ ಮನೆಯಲ್ಲಿ ದೊರಕಿತ್ತು ಅಂದ್ರೆ ತಪ್ಪಾಗಲ್ಲ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಂತಿಮ ಹಂಚಿಕೆಯು ಐಪಿಎಸ್ಗೆ ಪ್ರವೇಶವನ್ನು ದೃಢೀಕರಿಸುವುದರೊಂದಿಗೆ, ಶಿವಚಂದ್ರನ್ ಅವರ ಕಥೆ ಈಗ ತಮಿಳುನಾಡಿನಾದ್ಯಂತ ಆಕಾಂಕ್ಷಿಗಳಿಗೆ ಸ್ಫೂರ್ತಿ ನೀಡಿದೆ. ಯಶಸ್ಸು ಕೇವಲ ಶ್ರೇಣಿಯ ಬಗ್ಗೆ ಅಲ್ಲ, ಬದಲಾಗಿ ಉದ್ದೇಶಪೂರ್ವಕ ಮಾರ್ಗವನ್ನು ಆರಿಸಿಕೊಳ್ಳುವುದು ಮತ್ತು ಅದನ್ನು ದೃಢನಿಶ್ಚಯದಿಂದ ಅನುಸರಿಸುವುದು ಎಂದು ಇದು ತೋರಿಸುತ್ತದೆ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಅಖಿಲ ಭಾರತ ಸೇವೆಗಳ ಹುದ್ದೆಗಳಿಗೆ ನಡೆಸಿದ 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತಮಿಳುನಾಡಿನ 57 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ದೇಶಾದ್ಯಂತ ಒಟ್ಟು 1,009 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
December 02, 2025 4:09 PM IST
