Last Updated:
ಮಂಡ್ಯ ಮದ್ದೂರು ಗುಡಿಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಹಂತದಲ್ಲಿ, ಅಲೆಮಾರಿ ಸಮುದಾಯದ ಹರಿದ್ರ ಒಂದೇ ವಿದ್ಯಾರ್ಥಿನಿಯಾಗಿ ಸೇರಿ ಶಾಲೆಗೆ ಹೊಸ ಜೀವ ತುಂಬಿದಳು.
ಮಂಡ್ಯ: ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು (Govt School) ಮಕ್ಕಳಿಲ್ಲದೆ ಬೀಗ ಹಾಕುವ ಹಂತ ತಲುಪುತ್ತಿವೆ. ಆದರೆ, ಮಂಡ್ಯ (Mandya) ಜಿಲ್ಲೆಯ ಒಂದು ಪುಟ್ಟ ಮಗು (Child) ಇಡೀ ಶಾಲೆಯ ಇತಿಹಾಸವನ್ನೇ (History) ಬದಲಿಸಿದೆ. ಹೌದು, ಬೀಗ ಜಡಿಯಲು ಸಿದ್ಧವಾಗಿದ್ದ ಶಾಲೆಯ ಪಾಲಿಗೆ ಈ ಮಗು ಸಾಕ್ಷಾತ್ ದೇವರಂತೆ ಬಂದಿದೆ. ಈ ಅಲೆಮಾರಿ ಮಗುವಿನ ಕಥೆ ಕೇಳಿದರೆ ನೀವು ಖಂಡಿತ ಭಾವುಕರಾಗುತ್ತೀರಿ.
ಬೀಗ ಹಾಕುವ ಹಂತಕ್ಕೆ ತಲುಪಿದ್ದ ಶಾಲೆ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಶೋಚನೀಯವಾಗಿತ್ತು. ಖಾಸಗಿ ಶಾಲೆಗಳ ವ್ಯಾಮೋಹದಿಂದ ಗ್ರಾಮದ ಯಾರೊಬ್ಬರೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರಲಿಲ್ಲ. ಮಕ್ಕಳ ದಾಖಲಾತಿ ಶೂನ್ಯವಾಗಿದ್ದರಿಂದ, ಶಿಕ್ಷಣ ಇಲಾಖೆ ಶಾಲೆಗೆ ಕಾಯಂ ಬೀಗ ಹಾಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಗ್ರಾಮದ ಒಂದು ಇತಿಹಾಸವೇ ಕಣ್ಮರೆಯಾಗುವ ಆತಂಕ ಎದುರಾಗಿತ್ತು.
ಶಾಲೆಯ ಪಾಲಿಗೆ ಸಂಜೀವಿನಿಯಾದ ಪುಟ್ಟ ಹರಿದ್ರ
ಇದೇ ವೇಳೆ ಅಲೆಮಾರಿ ಜನಾಂಗದ ಹರಿದ್ರ ಎಂಬ ಮಗು ಈ ಶಾಲೆಗೆ ಒಂದನೇ ತರಗತಿಗೆ ದಾಖಲಾಯಿತು. ಕೇವಲ ಒಬ್ಬಳೇ ಮಗುವಿದ್ದರೂ ತಾಂತ್ರಿಕವಾಗಿ ಶಾಲೆಯನ್ನು ಮುಚ್ಚುವಂತಿಲ್ಲ ಎಂಬ ನಿಯಮದಂತೆ ಹರಿದ್ರಳಿಂದಾಗಿ ಶಾಲೆಯ ಬಾಗಿಲು ತೆರೆಯಲ್ಪಟ್ಟಿತು. ಈ ಪುಟ್ಟ ಪಾದದ ಸ್ಪರ್ಶದಿಂದ ಶಾಲೆಗೆ ಹೊಸ ಮರುಜನ್ಮ ಸಿಕ್ಕಿತು. ಹರಿದ್ರಳ ದಾಖಲಾತಿಯೇ ಗ್ರಾಮದ ಜನರಿಗೆ ಕಣ್ತೆರೆಸಿದಂತಾಗಿದ್ದು, ಈಗ ಈ ಶಾಲೆಗೆ ಮತ್ತೆರಡು ಮಕ್ಕಳು ಸೇರಿ ಒಟ್ಟು ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಮಂಡ್ಯದ ಪಾದಯಾತ್ರೆಯಲ್ಲಿ ಬೆಳಕಿಗೆ ಬಂದ ಸತ್ಯ
ರಾಜ್ಯದಲ್ಲಿ ಏಕರೂಪ ಶಿಕ್ಷಣಕ್ಕಾಗಿ ನಡೆಯುತ್ತಿರುವ ಬೃಹತ್ ಪಾದಯಾತ್ರೆ ಗುಡಿಗೆರೆ ಗ್ರಾಮಕ್ಕೆ ಬಂದಾಗ ಈ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಹರಿದ್ರ ಎಂಬ ಪುಟ್ಟ ಬಾಲಕಿ ಮಾಡಿದ ಈ ಮಹತ್ಕಾರ್ಯಕ್ಕೆ ಹೋರಾಟಗಾರರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮ್ಮ ಸರ್ಕಾರಿ ಶಾಲೆ ಉಳಿಸಿದ ಈ ಮಗುವೇ ನಮ್ಮ ಗ್ರಾಮದ ಹೆಮ್ಮೆ” ಎಂದು ಊರವರು ಕೊಂಡಾಡುತ್ತಿದ್ದಾರೆ.
Location :
Mandya,Mandya,Karnataka
First Published :
Apr 23, 2026 11:29 AM IST
