Last Updated:
ಮಕ್ಕಳನ್ನು ಶಾಲೆಗೆ ಸೇರಿಸುವ ಸಮಯ ಬಂತು. ಆದರೆ ಪೋಷಕರಲ್ಲಿ ಟೆನ್ಷನ್ ಹೆಚ್ಚಾಗಿದೆ. 1ನೇ ತರಗತಿಗೆ ಮಕ್ಕಳನ್ನು ಸೇರಿಸಲು 6 ವರ್ಷ ಕಡ್ಡಾಯ ಅನ್ನೋ ನಿಯಮ ಪೋಷಕರನ್ನ ಕಂಗೆಡಿಸಿದೆ. ಪೋಷಕರು ಶಿಕ್ಷಣ ಸಚಿವರು, ಡಿಸಿಎಂ, ಸಿಎಂ ಕಚೇರಿಯ ಕದ ತಟ್ಟಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಶಾಲೆ ಅಡ್ಮಿಷನ್ ಕಿರಿಕಿರಿ (School Admission) ಮತ್ತೆ ಶುರುವಾಗಿದೆ. ಮಕ್ಕಳನ್ನು (Children) 1ನೇ ತರಗತಿಗೆ ಸೇರಿಸಲು ಜೂನ್ 1ರೊಳಗೆ 6 ವರ್ಷ ಆಗಿರಬೇಕು ಎಂಬ ನಿಯಮದಿಂದ (Karnataka State Education Policy) ಎರಡೂವರೆ ಲಕ್ಷ ಮಕ್ಕಳಿಗೆ ತೊಂದರೆಯಾಗ್ತಿದೆ. ಇದರಿಂದ ಪೋಷಕರು (Parents) ಕಂಗಾಲಾಗಿದ್ದಾರೆ. ಜೂನ್ 1ರ ನಂತರ ಮಕ್ಕಳು ಒಂದು ದಿನ ತಡವಾಗಿ ಜನಿಸಿದರೂ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಪೋಷಕರು ಕಳೆದ ವರ್ಷದಂತೆ ಈ ವರ್ಷವೂ ವಯೋಮಿತಿ ಸಡಿಲಿಸಿ ಅಂತಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಕರ್, ಸಚಿವ ಮಧು ಬಂಗಾರಪ್ಪ (Minister Madhu Bangarappa), ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಹೋಗಿ ಮನವಿ ಮಾಡಿದ್ದಾರೆ. ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಭೇಟಿಗೂ ಪ್ರಯತ್ನಿಸುತ್ತಿದ್ದಾರೆ.
ನ್ಯೂಸ್18 ನೊಂದಿಗೆ ಮಾತನಾಡಿದ ಪೋಷಕರಾದ ತ್ರಿವೇಣಿ ಅವರು, ನಮ್ಮ ರಾಜ್ಯದಲ್ಲಿ ಜೂನ್ ಇಂದ ಆಗಸ್ಟ್ 31ರ ಒಳಗೆ ಜನಿಸಿದವರು ಸುಮಾರು 2 ಲಕ್ಷ ದಿಂದ 2 ಲಕ್ಷ 30 ಸಾವಿರ ಮಕ್ಕಳಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಾವು ಕೇವಲ 90 ದಿನಗಳ ಸಡಿಲಿಕೆಕೊಟ್ಟರೆ ಸಾಕು. ನಮ್ಮ ಮಕ್ಕಳು ಎಲ್ಲರಂತೆ ಮುಂದಿನ ತರಗತಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.
ಶಿಕ್ಷಣ ಸಚಿವರು ಕಳೆದ ವರ್ಷ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಈ ವರ್ಷ ಸಡಿಲಿಕೆ ಕೊಡುತ್ತಿದ್ದೇವೆ. ಮುಂದಿನ ವರ್ಷದಿಂದ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಏನು ಹೇಳುತ್ತದೆ ಅದರಂತೆ ಮಾಡ್ತೀವಿ ಎಂದಿದ್ದರು. ಆದರೆ ಮುಂದಿನ ಎಸ್ಇಪಿ ಅನುಷ್ಠಾನ ಮಾಡಿದ್ರು ಅಂತ ಅಂದುಕೊಂಡರೇ, ಈ ಬ್ಯಾಚ್ ಮಕ್ಕಳು ಮಾತ್ರ ಹಿಂದೆ ಉಳಿಯುತ್ತಾರೆ. ಕಳೆದ ವರ್ಷ ಮಕ್ಕಳು, ಮುಂದಿನ ವರ್ಷ ಮಕ್ಕಳು ತೇರ್ಗಡೆಯಾಗಿ ಮುಂದಿನ ಹಂತಕ್ಕೆ ಹೋದರೆ, ಈ ವರ್ಷದ ಮಕ್ಕಳಿಗೆ ಮಾತ್ರ ಶಿಕ್ಷೆ ಕೊಟ್ಟಂತೆ ಆಗುತ್ತದೆ ಎಂದು ಪೋಷಕರಾದ ನಾಗರಾಜ್ ಪಾಟೀಲ್ ವಿವರಿಸಿದ್ದಾರೆ.
ಸಿಎಂ ಡಿಸಿಎಂಗೆ ಮಕ್ಕಳ ಮನವಿ
ಈಗ ಎಲ್ಲಾ ಮಕ್ಕಳು ಯುಕೆಜಿಯಿಂದ ಒಂದನೇ ತರಗತಿಗೆ ಹೋಗ್ತಾರೆ. ಆದರೆ ಈ ವರ್ಷದ ಮಕ್ಕಳು ಮಾತ್ರ ಒಂದು ವರ್ಷ ಹಿಂದಕ್ಕೆ ಉಳಿಯುತ್ತದೆ. ರೈಟ್ ಟು ಎಜುಕೇಷನ್ ನಿಯಮದ ಅನ್ವಯ ಯಾವುದೇ ಮಕ್ಕಳನ್ನು 8ನೇ ತರಗತಿ ವರೆಗೂ ಫೇಲ್ ಮಾಡುವಂತೆ ಇಲ್ಲ. ಆದರೆ ಈ ವರ್ಷ ಯುಕೆಜಿಯಲ್ಲಿ ಎಲ್ಲಾ ಮಕ್ಕಳನ್ನು ಫೇಲ್ ಮಾಡ್ತಿದ್ದಾರೆ. ಏಕೆಂದರೆ ಇವರು ಎನ್ಇಪಿ ಬಂದ ಕೂಡಲೇ ನಿರ್ಧಾರ ತೆಗೆದುಕೊಂಡು ಎಸ್ಇಪಿ ಮಾಡಬೇಕಿತ್ತು. ಆದರೆ ಇವರು ಕಾನೂನು ರೂಪಿಸೋದನ್ನು ತಡ ಮಾಡಿದ್ದಾರೆ. ಇವ್ರು ಆಗಲೇ ಎನ್ಇಪಿ ಬೇಡ ಎಸ್ಇಪಿ ಜಾರಿ ಮಾಡ್ತೀವಿ ಅಂತ ಹೇಳಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ. ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ತಡ ಮಾಡಿದ ಕಾರಣ ನಮ್ಮ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗ್ತಿದೆ ಎಂದು ಪೋಷಕರಾದ ರಾಜೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ಶಿಕ್ಷಣ ಸಚಿವರು ಫೋನ್ ಮಾಡಿ ಎಸ್ಇಪಿ ಜಾರಿ ಮಾಡಲು ಆಗುತ್ತಾ ಎಂದರೇ ಮುಂದಿನ ವರ್ಷ ಅಂತ ಹೇಳ್ತಿದ್ದಾರೆ. ಇದರಿಂದ ಈ ವರ್ಷದ ಬ್ಯಾಚ್ ನಲ್ಲಿರುವ ಮಕ್ಕಳಿ ಅನ್ಯಾಯ ಆಗ್ತಿದೆ. ಈ ವರ್ಷವೇ ಎಸ್ಇಪಿ ಜಾರಿ ಮಾಡಿದರೆ ಒಳ್ಳೆದಾಗುತ್ತದೆ ಎಂದು ಪೋಷಕರು ಒತ್ತಾಯ ಮಾಡಿದ್ದಾರೆ.
ರಾಜ್ಯದಲ್ಲಿ ರಾಜ್ಯ ಶಿಕ್ಷಣ ಪಠ್ಯಕ್ರಮ ಅಂದ್ರೆ SEP ಪ್ರಕಾರ ಮೂರು ತಿಂಗಳು ವಯೋಮಿತಿ ಸಡಲಿಕೆಯಿದೆ. ಆದರೆ ರಾಜ್ಯದಲ್ಲಿ SEP ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗ್ತಿದೆ. ಇನ್ನು, ಕಳೆದ ವರ್ಷದಂತೆ ಈ ವರ್ಷವೂ ಜೂನ್ 1ಕ್ಕೆ 5 ವರ್ಷ 5 ತಿಂಗಳ ಮಕ್ಕಳಿಗೂ ದಾಖಲಾತಿ ನೀಡ್ಬೇಕೆಂದು ಪೋಷಕರು ಮನವಿ ಮಾಡ್ತಿದ್ದಾರೆ.
Bangalore [Bangalore],Bangalore,Karnataka
Mar 03, 2026 10:25 AM IST

