Last Updated:
ಕೇಂದ್ರ ಸರ್ಕಾರ, ಗೃಹ ಸಚಿವಾಲಯ ಮತ್ತು ಬಿಎಸ್ಎಫ್ ಮಾಜಿ ಅಗ್ನಿವೀರರಿಗೆ 50% ಮೀಸಲಾತಿ ಘೋಷಣೆ ಮೂಲಕ ಭದ್ರತಾ ಪಡೆಗಳಲ್ಲಿ ಉದ್ಯೋಗಕ್ಕೆ ಹೊಸ ಅವಕಾಶ ನೀಡಿದೆ. ಇಲ್ಲಿದೆ ಇದರ ಕಂಪ್ಲೀಟ್ ಸ್ಟೋರಿ.
ದೆಹಲಿ: ಮಾಜಿ ಅಗ್ನಿವೀರರಿಗೆ (Agniveers) ಕೇಂದ್ರ ಸರ್ಕಾರದಿಂದ (Central Government) ದೊಡ್ಡ ಉತ್ತೇಜನ ಸಿಕ್ಕಿದೆ. ಗೃಹ ಸಚಿವಾಲಯ (MHA) ಬಿಎಸ್ಎಫ್ ಕಾನ್ಸ್ಟೇಬಲ್ (Constable) ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ, ಅಗ್ನಿವೀರರಿಗೆ ಶೇ. 50 ರಷ್ಟು ಮೀಸಲಾತಿ ನೀಡುವುದಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಭಾರತದ ಗೆಜೆಟ್ನಲ್ಲಿ ಪ್ರಕಟವಾಗಿದ್ದು, ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸಿ ಹೊರಬರುವ ಯುವಕರಿಗೆ ಭದ್ರತಾ ಪಡೆಗಳಲ್ಲಿ ಸ್ಥಿರ ವೃತ್ತಿಜೀವನ ಕಟ್ಟಿಕೊಳ್ಳಲು ಹೊಸ ದಾರಿ ತೆರೆದಿದೆ. ಈ ನಿಟ್ಟಿನಲ್ಲಿ ಅಗ್ನಿವೀರರಿಗೆ ಸುವರ್ಣವಕಾಶ ಕಲ್ಪಿಸಿದೆ.
ಹೊಸ ನಿಯಮಗಳ ಪ್ರಕಾರ, ಬಿಎಸ್ಎಫ್ನಲ್ಲಿ ಪ್ರತಿ ನೇಮಕಾತಿ ವರ್ಷದಲ್ಲಿ ನೇರ ನೇಮಕಾತಿಯ ಕಾನ್ಸ್ಟೇಬಲ್ ಹುದ್ದೆಗಳ ಪೈಕಿ 50% ಹುದ್ದೆಗಳು ಮಾಜಿ ಅಗ್ನಿವೀರರಿಗೆ ಮೀಸಲು ಇರಲಿವೆ. ಇದಲ್ಲದೆ, 10% ಹುದ್ದೆಗಳು ಮಾಜಿ ಸೈನಿಕರಿಗೆ ಮತ್ತು 3% ಹುದ್ದೆಗಳು ಯುದ್ಧಾನಂತರದ ಕಾನ್ಸ್ಟೇಬಲ್ (ಟ್ರೇಡ್ಸ್ಮೆನ್)ಗಳಿಗೆ ಮೀಸಲಿಡಲಾಗಿದೆ. ಈ ವ್ಯವಸ್ಥೆಯು ಸೇನಾ ಸೇವೆಯಿಂದ ನಾಗರಿಕ ಭದ್ರತಾ ಪಡೆಗಳಿಗೆ ಸಾಗುವ ಪ್ರಕ್ರಿಯೆ ಮತ್ತಷ್ಟು ಸುಗಮಗೊಳಿಸುತ್ತದೆ.
ವಯೋಮಿತಿಯಲ್ಲೂ ಮಹತ್ವದ ಸಡಿಲಿಕೆ ನೀಡಲಾಗಿದೆ. ಕಾನ್ಸ್ಟೇಬಲ್ (ಜಿಡಿ) ಹುದ್ದೆಗೆ ಸಾಮಾನ್ಯವಾಗಿ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 23 ವರ್ಷಗಳಾಗಿರುತ್ತದೆ. ಆದರೆ, ಮಾಜಿ ಅಗ್ನಿವೀರರಿಗೆ ವಿಶೇಷ ಸಡಿಲಿಕೆ ಅನ್ವಯವಾಗಲಿದೆ. ಮೊದಲ ಬ್ಯಾಚ್ನ ಮಾಜಿ ಅಗ್ನಿವೀರರಿಗೆ ಗರಿಷ್ಠ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತಿದ್ದು, ನಂತರದ ಬ್ಯಾಚ್ಗಳ ಅಗ್ನಿವೀರರಿಗೆ ಗರಿಷ್ಠ 3 ವರ್ಷಗಳ ಸಡಿಲಿಕೆ ಲಭ್ಯವಾಗಲಿದೆ. ವಯಸ್ಸಿನ ಲೆಕ್ಕಾಚಾರವನ್ನು ಸಂಬಂಧಿತ ಎಸ್ಎಸ್ಸಿ ಅಥವಾ ನೋಡಲ್ ಫೋರ್ಸ್ ಹೊರಡಿಸುವ ಅಧಿಸೂಚನೆಯ ಆಧಾರದಲ್ಲಿ ಮಾಡಲಾಗುತ್ತದೆ.
ಈ ತಿದ್ದುಪಡಿ ನಿಯಮಗಳು ಅಗ್ನಿವೀರರ ಭವಿಷ್ಯ ಕುರಿತು ಇದ್ದ ಅನುಮಾನಗಳಿಗೆ ಬಹುಮಟ್ಟಿಗೆ ಉತ್ತರ ನೀಡಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ವರ್ಷಗಳ ಸೇವೆಯ ನಂತರ ಉದ್ಯೋಗ ಭದ್ರತೆ ಬಗ್ಗೆ ಕಾಳಜಿ ವ್ಯಕ್ತವಾಗುತ್ತಿದ್ದ ಸಂದರ್ಭದಲ್ಲಿ, ಬಿಎಸ್ಎಫ್ನಲ್ಲಿ ಇಷ್ಟು ದೊಡ್ಡ ಮಟ್ಟದ ಮೀಸಲಾತಿ ಘೋಷಣೆ ಆಗಿರುವುದು ಅಗ್ನಿವೀರರಿಗೆ ಭರವಸೆಯ ಸಂದೇಶವಾಗಿದೆ.
ಬಿಎಸ್ಎಫ್ ಮಾತ್ರವಲ್ಲದೆ, ಕೇಂದ್ರ ಸರ್ಕಾರ ಈಗಾಗಲೇ ಸಿಎಪಿಎಫ್ ಪಡೆಗಳು (ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಐಟಿಬಿಪಿ) ಸೇರಿ ವಿವಿಧ ಭದ್ರತಾ ಪಡೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡುವುದಾಗಿ ಘೋಷಿಸಿದೆ. ಜೊತೆಗೆ, ರಾಜ್ಯ ಪೊಲೀಸ್ ಇಲಾಖೆಗಳಲ್ಲಿಯೂ ಅಗ್ನಿವೀರರಿಗೆ ಪ್ರಾಧಾನ್ಯತೆ ನೀಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಇದಲ್ಲದೆ, ಖಾಸಗಿ ವಲಯದಲ್ಲಿಯೂ ಉದ್ಯೋಗ ಅವಕಾಶಗಳನ್ನು ಸುಲಭಗೊಳಿಸಲು ಕೌಶಲ್ಯ ಪ್ರಮಾಣಪತ್ರಗಳು ಹಾಗೂ ಕೈಗಾರಿಕಾ ಸಂಸ್ಥೆಗಳೊಂದಿಗೆ ಸಹಕಾರ ವ್ಯವಸ್ಥೆ ರೂಪಿಸಲಾಗಿದೆ.
ಈ ಹೊಸ ಅಧಿಸೂಚನೆಯು ಅಗ್ನಿವೀರ ಯೋಜನೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಜೊತೆಗೆ, ಯುವಕರಿಗೆ “ಸೇವೆಯಿಂದ ಉದ್ಯೋಗಕ್ಕೆ” ಎಂಬ ಸ್ಪಷ್ಟ ಮಾರ್ಗವನ್ನು ಒದಗಿಸುತ್ತದೆ. ದೇಶಸೇವೆ ಮಾಡಿದ ಯುವಕರು ಮತ್ತೆ ರಾಷ್ಟ್ರ ಭದ್ರತೆಯ ಭಾಗವಾಗುವ ಅವಕಾಶ ಪಡೆಯುತ್ತಿರುವುದು, ಭದ್ರತಾ ಪಡೆಗಳಿಗೂ ಅನುಭವಸಂಪನ್ನ ಸಿಬ್ಬಂದಿ ದೊರಕುವಂತೆ ಮಾಡಲಿದೆ. ಬಿಎಸ್ಎಫ್ನಲ್ಲಿ ಶೇ. 50 ರಷ್ಟು ಮೀಸಲಾತಿ ಘೋಷಣೆ ಅಗ್ನಿವೀರರ ಬದುಕಿನಲ್ಲಿ ದೊಡ್ಡ ತಿರುವಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಇತರ ಇಲಾಖೆಗಳಲ್ಲೂ ಇದೇ ಮಾದರಿ ಅನುಸರಿಸಲ್ಪಡುವ ಸಾಧ್ಯತೆ ಇದೆ.
Bangalore [Bangalore],Bangalore,Karnataka
Dec 21, 2025 11:03 AM IST

