Last Updated:
NEET Success Story: ಹಸಿವು ಮತ್ತು ಬಡತನದ ಸವಾಲುಗಳ ನಡುವೆಯೇ ಬೆವರು ಸುರಿಸುತ್ತಾ ನೀಟ್ ಪರೀಕ್ಷೆ ಜಯಿಸಿದ ಈ ಯುವಕನ ಸಾಧನೆ ಅಸಾಮಾನ್ಯ. ಬೆನ್ನ ಮೇಲಿದ್ದ ಇಟ್ಟಿಗೆಯ ಭಾರ ಇಳಿಸಿ, ಕುತ್ತಿಗೆಗೆ ಸ್ಟೆತೊಸ್ಕೋಪ್ ಏರಿಸಿಕೊಂಡ ಈ ಕ್ಷಣ ಕೋಟಿ ಕನಸುಗಳಿಗೆ ಸ್ಪೂರ್ತಿ. ಕಡುಬಡತನದ ಮಣ್ಣಿನಲ್ಲಿ ಅರಳಿದ ಈ ಛಲದ ಹೂವು, “ಕಠಿಣ ಪರಿಶ್ರಮವಿದ್ದರೆ ವಿಧಿಯನ್ನೇ ಬದಲಿಸಬಹುದು” ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.
ಪಶ್ಚಿಮ ಬಂಗಾಳದ ಬಡ ಕುಟುಂಬದಿಂದ ಬಂದ ಯುವಕನೊಬ್ಬ ತನ್ನ ಪರಿಶ್ರಮ ಮತ್ತು ದೃಢನಿಶ್ಚಯದ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾನೆ. ದಿನಗೂಲಿ ಕಾರ್ಮಿಕನ ಮಗನಾದ ಸರ್ಫರಾಜ್ ಅವರ ಈ ಯಶೋಗಾಥೆ ಇಂದು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿದೆ.
ಸರ್ಫರಾಜ್ ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದ. ಕುಟುಂಬದ ಆದಾಯ ತುಂಬಾ ಕಡಿಮೆ. ದಿನಕ್ಕೆ ಸುಮಾರು ₹300 ಗಳಿಸುವ ಕೆಲಸದಲ್ಲಿದ್ದ ಕುಟುಂಬದಲ್ಲಿ ಶಿಕ್ಷಣವೇ ದೊಡ್ಡ ಸವಾಲಾಗಿತ್ತು. ಆದರೆ ಈ ಸಂಕಷ್ಟಗಳ ನಡುವೆಯೂ ಸರ್ಫರಾಜ್ ದೊಡ್ಡ ಕನಸು ಕಂಡಿದ್ದ. ವೈದ್ಯರಾಗಬೇಕು ಎಂಬುದು. ಅದನ್ನು ಸಾಧಿಸಲು ಅವನು ಬಾಲ್ಯದಿಂದಲೇ ಶ್ರಮ ಆರಂಭಿಸಿದ್ದ. ಇಂದು ಆ ಕನಸಿಗೆ ರೆಕ್ಕೆ ಮೂಡಿದೆ.
ಸರ್ಫರಾಜ್ ಜೀವನ ತುಂಬಾ ಕಷ್ಟಕರವಾಗಿತ್ತು. ಎರಡು ವರ್ಷಗಳ ಕಾಲ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಇಟ್ಟಿಗೆಗಳನ್ನು ಹೊರುವ ಕೆಲಸ ಮಾಡುತ್ತಿದ್ದ. ದಿನಕ್ಕೆ 300-400 ಇಟ್ಟಿಗೆಗಳನ್ನು ಎತ್ತುವುದು ಅವನ ಕೆಲಸವಾಗಿತ್ತು. ಈ ಕಠಿಣ ಕೆಲಸದಿಂದ ದೇಹ ಶ್ರಮಿಸಿದ್ದರೂ, ಅವನು ತನ್ನ ಗುರಿಯನ್ನು ಮರೆಯಲಿಲ್ಲ. ಕೆಲಸ ಮುಗಿದ ನಂತರ ಮನೆಗೆ ಬಂದು ಓದನ್ನು ಮುಂದುವರಿಸುತ್ತಿದ್ದ. ಮುಂದೆ ಇದೇ ಅವನ ಕೈ ಹಿಡಿಯಿತು ಎನ್ನುವುದಕ್ಕೆ ಅವನ ಸಾಧನೆಯೇ ಸಾಕ್ಷಿಯಾಗಿದೆ.
ಅವನ ಮನೆ ಪರಿಸ್ಥಿತಿ ಇನ್ನೂ ಸಂಕಷ್ಟಕರವಾಗಿತ್ತು. ಸರಿಯಾದ ಮನೆ ಸೌಲಭ್ಯವೂ ಇಲ್ಲದ ಸ್ಥಿತಿ. ಮನೆಯ ಮೇಲ್ಚಾವಣಿಯೇ ಇಲ್ಲದ ಸಂದರ್ಭಗಳಲ್ಲಿ ತಾಯಿಯೇ ರಾತ್ರಿ ಅವನ ಜೊತೆ ಕುಳಿತು ಓದಿಸಲು ಸಹಾಯ ಮಾಡುತ್ತಿದ್ದಳು. ಈ ರೀತಿಯ ತ್ಯಾಗ ಮತ್ತು ಬೆಂಬಲ ಸರ್ಫರಾಜ್ಗೆ ದೊಡ್ಡ ಶಕ್ತಿ ನೀಡಿತು.
ಸರ್ಫರಾಜ್ ಮೊದಲಿಗೆ NDA ಸೇರಬೇಕು ಎಂಬ ಕನಸು ಹೊಂದಿದ್ದ. 2022ರಲ್ಲಿ ಮೊದಲ ಹಂತ ಪರೀಕ್ಷೆಯನ್ನು ಕೂಡ ಪಾಸ್ ಮಾಡಿದ್ದ. ಆದರೆ ಸಂದರ್ಶನದ ಮುನ್ನ ಸಂಭವಿಸಿದ ಅಪಘಾತದಿಂದ ಆ ಅವಕಾಶ ಕೈ ತಪ್ಪಿತು. ಇದರಿಂದ ನಿರಾಶೆಯಾಗದೆ, ಅವನು ತನ್ನ ಗುರಿಯನ್ನು ಬದಲಿಸಿ NEET ಪರೀಕ್ಷೆಗೆ ತಯಾರಿ ಆರಂಭಿಸಿದ.
ಹಣದ ಕೊರತೆಯಿಂದ ದೊಡ್ಡ ಕೋಚಿಂಗ್ ಸೆಂಟರ್ಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಮೊಬೈಲ್ ಫೋನ್ ಮೂಲಕ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಓದುತ್ತಿದ್ದ. ಕೆಲವೊಮ್ಮೆ ಶಿಕ್ಷಕರಿಂದ ಫೋನ್ ಸಾಲವಾಗಿ ಪಡೆದು ಓದಿದ ಸಂದರ್ಭಗಳೂ ಇವೆ. ಯಾವುದೇ ಸೌಲಭ್ಯಗಳಿಲ್ಲದೇ ಸ್ವಯಂ ಅಧ್ಯಯನದ ಮೂಲಕ ಅವನು ತನ್ನ ತಯಾರಿಯನ್ನು ಮುಂದುವರಿಸಿದ್ದ.
ಮೊದಲ ಬಾರಿ NEET ಪಾಸ್ ಆದರೂ, ಹಣದ ಕೊರತೆಯಿಂದ ಡೆಂಟಲ್ ಕಾಲೇಜು ಪ್ರವೇಶವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೂ ಸರ್ಫರಾಜ್ ಹಿಂತಿರುಗಲಿಲ್ಲ. ಮತ್ತೆ ಹೆಚ್ಚು ಶ್ರಮಪಟ್ಟು ತಯಾರಿ ನಡೆಸಿದ. ಕೊನೆಗೆ 2024ರ NEET ಪರೀಕ್ಷೆಯಲ್ಲಿ 720ರಲ್ಲಿ 677 ಅಂಕಗಳನ್ನು ಪಡೆದು ಭರ್ಜರಿ ಸಾಧನೆ ಮಾಡಿದರು.
ಈ ಸಾಧನೆಯ ಫಲವಾಗಿ, ಅವನು ನಿಲ್ ರತನ್ ಸಿರಕಾರ್ ಮೆಡಿಕಲ್ ಕಾಲೇಜಿನಲ್ಲಿ MBBS ಕೋರ್ಸ್ಗೆ ಪ್ರವೇಶ ಪಡೆದನು. ಇದು ದೇಶದ ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ. ಬಡ ಕುಟುಂಬದ ಮಗನಿಗೆ ಇದು ದೊಡ್ಡ ಸಾಧನೆ ಎನ್ನಬಹುದು. ಅವನ ಈ ಯಶಸ್ಸು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಅವನ ಪರಿಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಸಹಾಯವೂ ದೊರಕಿತು. ಇದರಿಂದ ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಬೆಂಬಲ ಸಿಕ್ಕಿತು.
ಸರ್ಫರಾಜ್ ಕಥೆ ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ. ಜೀವನದಲ್ಲಿ ಎಷ್ಟು ಸಂಕಷ್ಟಗಳಿದ್ದರೂ, ಗುರಿ ಸ್ಪಷ್ಟವಾಗಿದ್ದರೆ ಸಾಧನೆ ಸಾಧ್ಯ. ಸೌಲಭ್ಯಗಳಿಲ್ಲದಿದ್ದರೂ ಪರಿಶ್ರಮ ಮತ್ತು ನಿಷ್ಠೆಯಿಂದ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಒಟ್ಟಿನಲ್ಲಿ, ದಿನಗೂಲಿ ಕಾರ್ಮಿಕನ ಮಗನಾದ ಸರ್ಫರಾಜ್ ಇಂದು ವೈದ್ಯಕೀಯ ವಿದ್ಯಾರ್ಥಿಯಾಗಿರುವುದು ಅವನ ಪರಿಶ್ರಮದ ಫಲ. ಅವನ ಕಥೆ ಅನೇಕ ಯುವಕರಿಗೆ ಸ್ಪೂರ್ತಿಯಾಗಿದೆ.

