Last Updated:
ಬಿಹಾರದ ಆದಿತ್ಯ ಝಾ ಯುಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ಕನೇ ಪ್ರಯತ್ನದಲ್ಲಿ 58ನೇ ರ್ಯಾಂಕ್ ಪಡೆದು ಯಶಸ್ವಿಯಾದರು. ಅವರ ಸಾಧನೆ ಸಣ್ಣ ಹಳ್ಳಿಯ ಆಕಾಂಕ್ಷಿಗಳಿಗೆ ಸ್ಪೂರ್ತಿದಾಯಕವಾಗಿದೆ.
ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ (Exam) ಒಂದಾಗಿರುವ ಯುಪಿಎಸ್ಸಿಗೆ (UPSC) ಸಿದ್ಧತೆ ಅತ್ಯಗತ್ಯವಾಗಿದೆ. ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸು (Pass) ಮಾಡುವುದು ತುಂಬಾ ಅಪರೂಪ, ಸಾಕಷ್ಟು ಅಭ್ಯರ್ಥಿಗಳು (Candidates) ಹಲವಾರು ಬಾರಿ ಪ್ರಯತ್ನ ಪಟ್ಟು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಅದೆಷ್ಟೋ ಅಭ್ಯರ್ಥಿಗಳು ತಮ್ಮ ಈ ವೈಫಲ್ಯವನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾರ್ಪಡಿಸಿಕೊಂಡು ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಸಫಲರಾದರೆ ಇನ್ನು ಸಾಕಷ್ಟು ಜನ ಹೊಸ ಪಾಠ ಕಲಿತು ಹೊಸದಾಗಿ ಪ್ರಯತ್ನಿಸುತ್ತಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಮೂರು ಬಾರಿ ಪ್ರಯತ್ನಿಸಿ ನಾಲ್ಕನೇ ಬಾರಿ ಗೆಲುವನ್ನಾಚರಿಸಿದ ಆದಿತ್ಯ ಝಾ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.
ಬಿಹಾರದ ಆದಿತ್ಯ ಝಾ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂಬ ಅದಮ್ಯ ಆಸೆಯನ್ನಿಟ್ಟುಕೊಂಡು ಸಾಕಷ್ಟು ಬಾರಿ ಪ್ರಯತ್ನಪಟ್ಟ ಅಭ್ಯರ್ಥಿಯಾಗಿದ್ದಾರೆ. ಮೂರು ಬಾರಿ ಪ್ರಯತ್ನಿಸಿದರೂ ವಿಜಯಲಕ್ಷ್ಮೀ ಅವರಿಗೆ ಒಲಿಯಲಿಲ್ಲ ಆದರೆ ತಮ್ಮ ಪ್ರಯತ್ನ ಬಿಡದ ಝಾ ನಾಲ್ಕನೇ ಬಾರಿ ಪರೀಕ್ಷೆ ಬರೆದರು ಹಾಗೂ ಉತ್ತೀರ್ಣರಾಗಿ ಜಯಭೇರಿ ಬಾರಿಸಿದರು. ಝಾ ತಮ್ಮೂರಿನ ಯುವಕರಿಗೆ ಮಾದರಿಯಾಗಿದ್ದು, ಸತತವಾಗಿ ಪ್ರಯತ್ನಪಟ್ಟರೆ ಗೆಲುವು ನಮ್ಮದಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.
ಆದಿತ್ಯ ಝಾ, ಬಿಹಾರದ ಕಿಶನ್ಗಂಜ್ ಜಿಲ್ಲೆಯ ಖಾನಬಾದಿ ಎಂಬ ಸಣ್ಣ ಹಳ್ಳಿಯವರು. ಅವರು 2024 ರ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 58 ನೇ ರ್ಯಾಂಕ್ ಗಳಿಸಿದರು. ಆದಿತ್ಯ ಝಾ ಅವರ ಯಶಸ್ಸಿನ ಕಥೆಯು ಸಣ್ಣ ಮತ್ತು ದೂರದ ಹಳ್ಳಿಗಳಿಗೆ ಸೇರಿದ ಆಕಾಂಕ್ಷಿಗಳಿಗೆ ಬಹಳ ಸ್ಪೂರ್ತಿದಾಯಕವಾಗಿದೆ ಹಾಗೂ ಸೋಲಿನಿಂದ ಕಂಗೆಟ್ಟವರಿಗೆ ಹೇಗೆ ಪ್ರಯತ್ನಪಡಬೇಕೆಂಬ ಮಾರ್ಗದರ್ಶನ ನೀಡುತ್ತದೆ.
ಅವರು ಬಿಹಾರದ ಪುರ್ನಿಯಾದ ಉರ್ಸುಲಿನ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು, ನಂತರ ಅವರು ಪೂರ್ಣಿಯಾದ ಡಿಎವಿ ಶಾಲೆಯಲ್ಲಿ ಮೆಟ್ರಿಕ್ ವರೆಗೆ ಮತ್ತು ಬಿಹಾರದ ವಿಜೇಂದ್ರ ಪಬ್ಲಿಕ್ ಶಾಲೆಯಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದರು. ಅವರು ಎರಡು ಬಾರಿ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಐಎಂಎಸ್ ಧನ್ಬಾದ್ನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಪದವಿ ಪಡೆದರು.
ಆದಿತ್ಯ ಝಾ ವಿದ್ಯಾವಂತ ಕುಟುಂಬದಿಂದ ಬಂದವರು. ಅವರ ತಂದೆ ಪ್ರೊ. ವಿಷ್ಣುಕಾಂತ್ ಝಾ ಸುಶೀಲಾ ಹರಿ ಮಹಾವಿದ್ಯಾಲಯ ತುಳಸಿಯಾದಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಅವರ ತಾಯಿ ಮಧು ಝಾ ಐಸಿಡಿಎಸ್ ವಿಭಾಗದಲ್ಲಿ ಮೇಲ್ವಿಚಾರಕರಾಗಿದ್ದಾರೆ.
ಝಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡುವ ಮುನ್ನ ಸ್ಯಾಮ್ಸಂಗ್ ಕಂಪನಿಯಲ್ಲಿ ಹಿರಿಯ ಎಂಜಿನಿಯರ್ ಆಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದರು. ಸಂಸ್ಥೆಯಲ್ಲಿ ಉತ್ತಮ ಸಂಬಳವಿದ್ದರೂ ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕೆಂಬ ನಿಟ್ಟಿನಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಉತ್ತಮ ಸಂಬಳದ ಕೆಲಸ ತೊರೆದು ಪರೀಕ್ಷೆಗೆ ಸಿದ್ಧತೆ ನಡೆಸಿದರು. ಝಾ ಅವರಿಗೆ ಒಮ್ಮೆಗೆ ಜಯ ದೊರೆಯಲಿಲ್ಲ, ಯುಪಿಎಸ್ಸಿಯಲ್ಲಿ ಮೂರು ಬಾರಿ ವಿಫಲರಾದರು
ಅವರ ನಾಲ್ಕನೇ ಪ್ರಯತ್ನದಲ್ಲಿ, ಅವರು 58 ನೇ ರ್ಯಾಂಕ್ ಗಳಿಸಿದರು ಮತ್ತು ಈಗ ಭಾರತೀಯ ಅರಣ್ಯ ಸೇವೆ (ಐಎಫ್ಒಎಸ್) ಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದಿತ್ಯ ಅವರ ಗೆಲುವನ್ನು ಇಡಿಯ ಅವರ ಹುಟ್ಟೂರು ಸಂಭ್ರಮದಿಂದ ಆಚರಿಸಿತು. ಝಾ ಅವರಿಗೆ ಹೂಮಾಲೆ ಹಾಕಿ ಭವ್ಯ ಸ್ವಾಗತ ಕೋರಲಾಯಿತು. ತಮ್ಮೂರಿನ ಹುಡುಗನ ಸಾಧನೆಯನ್ನು ಅವರ ಊರಿನವರು ಕೊಂಡಾಡಿದರು. ಜನರು ಸಿಹಿತಿಂಡಿಗಳನ್ನು ಹಂಚಿ, ಡೋಲು ವಾದ್ಯಗಳಿಂದ ಆದಿತ್ಯ ಅವರನ್ನು ಬರಮಾಡಿಕೊಂಡರು. ಪಟಾಕಿ ಸಿಡಿಸಿ ಅವರ ಗೆಲುವನ್ನು ಖುಷಿಯಿಂದ ಸಡಗರದಿಂದ ಹಬ್ಬದಂತೆ ಆಚರಿಸಿದರು.

