Advertisement
Advertisement

ಛಲ ಬಿಡದ ಪರಿಶ್ರಮಕ್ಕೆ ಕೊನೆಗೂ ಸಿಕ್ತು ಜಯ! ಐಎಎಸ್ ಅಧಿಕಾರಿಯಾದ್ರು ಬಸ್ ಡ್ರೈವರ್ ಮಗ

Untitled design 2025 11 27t144602.563 2025 11 ad4bbd82f2d96888011ba7cb84de55eb 3x2.jpg


ಬಸ್ ಡ್ರೈವರ್ ಮಗ ಮೋಯಿನ್ ಬಾಲ್ಯದ ಕನಸು ನನಸಾಗಲಿಲ್ಲ

ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವವರ ಮಗನಾಗಿ ಹುಟ್ಟಿದ ಮೋಯಿನ್ ಅಹ್ಮದ್ ಅವರು ಮನೆಯಲ್ಲಿರುವ ಆರ್ಥಿಕ ಸಂಕಷ್ಟಗಳಿಂದ ಬಳಲಿದ್ರು ಸಹ ಛಲ ಬಿಡದೆ ಮುನ್ನುಗ್ಗಿ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಬರೆದು ಐಎಎಸ್ ಅಧಿಕಾರಿಯಾದರು.

ಅವರ ಈ ಸಾಧನೆಯ ಕಥೆ ಅವರ ತಾಳ್ಮೆ, ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕ ಸಂಕಷ್ಟದಿಂದ ಮೇಲೇರುವ ಅಚಲ ಮನೋಭಾವದ ಪ್ರಬಲ ಉದಾಹರಣೆಯಾಗಿದೆ.

ಬಾಲ್ಯದಲ್ಲಿ ಮೋಯಿನ್‌ ಅವರಿಗೆ ದೊಡ್ಡವನಾದ ನಂತರ ಒಬ್ಬ ಒಳ್ಳೆಯ ಕ್ರಿಕೆಟಿಗ ಆಗಬೇಕು ಅನ್ನೋ ಕನಸು ಇತ್ತಂತೆ. ಆದರೆ ಮೊರಾದಾಬಾದ್‌ನ ಒಂದು ಸಣ್ಣ ಮನೆಯಲ್ಲಿ ಹುಟ್ಟಿ ಬೆಳೆದ ಮೋಯಿನ್ ಅವರ ಆ ಬಾಲ್ಯದ ಕನಸು ಎಂದಿಗೂ ಈಡೇರಲಿಲ್ಲ.

ಅವರ ತಂದೆ, ವಾಲಿ ಹಸನ್ ಅವರು ಡ್ರೈವರ್ ಆಗಿ ಕೆಲಸ ಮಾಡುತ್ತಾ ತಮ್ಮ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಇವರ ಬಡತನ ಮೋಯಿನ್ ಅವರ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸನ್ನು ಚಿವುಟಿ ಹಾಕಿತು.

ದೆಹಲಿ ವಿಶ್ವವಿದ್ಯಾಲದಲ್ಲಿ ಓದುವ ಅವಕಾಶ ಕೈತಪ್ಪಿ ಹೋಯಿತು

ಆಗ ಮೋಯಿನ್ ಅವರು ತುಂಬಾನೇ ನೋವಿನಿಂದ ತಮ್ಮ ಬಾಲ್ಯದ ಕನಸನ್ನು ಕೈಬಿಟ್ಟು ಮುಂದೆ ಸಾಗಬೇಕಾಯಿತು. ಆದರೆ ಇದು ಅವರ ಭವಿಷ್ಯತ್ತಿಗೆ ಒಂದೊಳ್ಳೆಯ ಪಾಠವಾಗಿ ಮಾರ್ಪಟ್ಟಿತು. ತಮ್ಮ 12ನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ನಂತರ, ಮೋಯಿನ್ ಅವರಿಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುವ ಅವಕಾಶ ಸಿಕ್ಕಿತು, ಆದರೆ ಅಲ್ಲಿಯೂ ಸಹ ಅವರ ಬಡತನ ಮತ್ತು ಆರ್ಥಿಕ ಸಂಕಷ್ಟ ಅವರನ್ನು ಆ ಒಂದೊಳ್ಳೆಯ ಅವಕಾಶದಿಂದ ವಂಚಿತರಾದರು.

ಕಾಲೇಜಿನ ಫೀಸ್ ಕಟ್ಟುವುದಕ್ಕೂ ಸಹ ಇವರ ಬಳಿ ಹಣ ಇರಲಿಲ್ಲವಂತೆ, ಸಾಲ ತೆಗೆದುಕೊಳ್ಳಲು ಬ್ಯಾಂಕುಗಳಿಗೆ ಅಲೆದಾಡಿದರೂ ಸಹ ಯಾರೂ ಸಾಲ ಕೊಡಲಿಲ್ಲವಂತೆ. ಆದರೂ ಸಹ ಮೋಯಿನ್ ಅವರು ತಮ್ಮ ಪ್ರಯತ್ನವನ್ನು ಬಿಡಲಿಲ್ಲವಂತೆ.

ಅವರು ತಮ್ಮ ಪದವಿಯನ್ನು ಮೊರಾದಾಬಾದ್‌ನಲ್ಲಿರುವ ತಮ್ಮ ಊರಿನಿಂದ ಮುಂದುವರಿಸಲು ಆಯ್ಕೆ ಮಾಡಿಕೊಂಡರು. ತಮ್ಮ ಕುಟುಂಬವನ್ನು ಬೆಂಬಲಿಸಲು ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು, ಅವರು ಸೈಬರ್ ಕೆಫೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಈ ಎಲ್ಲಾ ಶ್ರಮಗಳು ಕೊನೆಗೂ ಫಲ ನೀಡಿದವು ಮತ್ತು ಬೇಗನೆ ಅವರು ತಿಂಗಳಿಗೆ 40,000 ರೂಪಾಯಿ ಸಂಬಳ ಪಡೆಯುವ ಕೆಲಸವನ್ನು ಗಿಟ್ಟಿಸಿಕೊಂಡರು.

ಸೈಬರ್ ಕೆಫೆಯಲ್ಲಿ ಕೆಲಸ ಮಾಡುತ್ತಿರುವಾಗ, ಹೊಸ ಹೊಸ ಕನಸುಗಳು ಹುಟ್ಟಿಕೊಳ್ಳಲು ಶುರುವಾದವು. ಹಣಕಾಸಿನ ನಿರ್ಬಂಧಗಳೊಂದಿಗಿನ ಅವರ ಸ್ವಂತ ಅನುಭವಗಳು, ಕೈತಪ್ಪಿ ಹೋದ ಅವರ ಬಾಲ್ಯದ ಕ್ರಿಕೆಟ್ ಕನಸು, ತಪ್ಪಿದ ದೆಹಲಿ ವಿಶ್ವವಿದ್ಯಾಲಯದ ಶಿಕ್ಷಣ, ಇದೆಲ್ಲವೂ ಬದಲಾವಣೆಯನ್ನು ಮಾಡುವ ಪ್ರಬಲ ಬಯಕೆಯನ್ನು ಉತ್ತೇಜಿಸಿತು. ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು.

ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯೋದು ಬೇಡ ಅಂತ ಹೇಳಿದ್ರಂತೆ ಮನೆಯವರು..

ಇವರ ಈ ನಿರ್ಧಾರವು ಕುಟುಂಬದವರಿಂದ ತುಂಬಾನೇ ಪ್ರತಿರೋಧವನ್ನು ಎದುರಿಸಿತು. ಅವರ ತಂದೆ ತುಂಬಾನೇ ಚಿಂತಿತರಾಗಿದ್ದರು, ಮತ್ತು ಅವರ ಸಂಬಂಧಿಕರು ಸಹ ಇದನ್ನು ಕೆಟ್ಟ ನಿರ್ಧಾರ ಅಂತ ಸಹ ಹೇಳಿದರು. ಆದರೆ ಅವರ ತಾಯಿ ತಸ್ಲೀಮ್ ಜಹಾನ್ ಮೋಯಿನ್ ಅವರಿಗೆ ದೃಢವಾಗಿ ಬೆಂಬಲಕ್ಕೆ ನಿಂತರು. 2019ರಲ್ಲಿ ತಮ್ಮ ಕೆಲಸವನ್ನು ತೊರೆದು, ದೆಹಲಿಗೆ ಸ್ಥಳಾಂತರಗೊಂಡರು ಮತ್ತು ಪರೀಕ್ಷೆಗೆ ತಯಾರಿ ಶುರು ಮಾಡಿದರು.

ಅವರ ಈ ಪ್ರಯಾಣ ಅಷ್ಟೊಂದು ಸುಲಭವಾಗಿರಲಿಲ್ಲ, ಎಷ್ಟೋ ಬಾರಿ ಜೇಬಿನಲ್ಲಿ ಒಂದು ರೂಪಾಯಿ ಸಹ ಇರದೆ ಇರುವ ಸಂದರ್ಭಗಳು ಸಹ ಇದ್ದವು. ಇಂತಹ ಸಮಯದಲ್ಲಿ ಮೋಯಿನ್ ಅವರು ತಮ್ಮ ಮಾರ್ಗದರ್ಶಕರಾದ ಐಆರ್‌ಎಸ್ ಅಧಿಕಾರಿ ಆಸಿಫ್ ಯೂಸುಫ್ ಅವರ ಬಳಿ ಸಹಾಯ ಕೋರಿದರು. ಅತಿಯಾ ಫೌಂಡೇಶನ್‌ನ ಸಾಹಿಲ್ ಖಾನ್ ಅವರ ಪರೀಕ್ಷೆ ಸಿದ್ದತೆಗೆ ಬೇಕಾಗಿರುವಂತಹ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಂಡರು.

ಮೊದಲ ಮೂರು ಯತ್ನಗಳಲ್ಲಿ ಸೋಲು ಅನುಭವಿಸಿದರೂ ಸಹ ಮೋಯಿನ್ ಅವರು ಕುಗ್ಗಲಿಲ್ಲ. ಅವರ ನಾಲ್ಕನೇ ಪ್ರಯತ್ನದಲ್ಲಿ, ಅವರ ಪಟ್ಟು ಬಿಡದ ಶ್ರಮವು ಅಂತಿಮವಾಗಿ ಫಲ ನೀಡಿತು ಮತ್ತು 296ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.



Source link

Leave a Reply

Your email address will not be published. Required fields are marked *

TOP