ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ) ಎನ್ನುವುದು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಮತ್ತು ಅಧೀನ ಕಚೇರಿಗಳಲ್ಲಿ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಪ್ರಮುಖ ಸಂಸ್ಥೆಯಾಗಿದೆ. 1975 ರಲ್ಲಿ ಸ್ಥಾಪಿತವಾದ ಸಿಬ್ಬಂದಿ ಆಯ್ಕೆ ಆಯೋಗ, ಕೇಂದ್ರ ಸರ್ಕಾರದಲ್ಲಿ ಕ್ಲೆರಿಕಲ್, ತಾಂತ್ರಿಕ ಮತ್ತು ಆಡಳಿತಾತ್ಮಕ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. SSC CHSL (Combined Higher Secondary Level) 10+2 ಪಾಸಾದವರಿಗೆ. 10ನೇ ತರಗತಿ ಪಾಸಾದವರಿಗೆ SSC MTS (Multi-Tasking Staff), SSC GD Constable, ಹುದ್ದೆಗಳ ಭರ್ತಿಗಾಗಿ ನೇಮಕಾತಿ ನಡೆಸಲಾಗುತ್ತದೆ.
ಯುವಕರಿಗೆ ಆಸರೆಯಾದ ಎಸ್ಸೆಸ್ಸಿ!
ಪ್ರತಿ ವರ್ಷ ಭಾರತದಲ್ಲಿ 1ಕೋಟಿಗೂ ಹೆಚ್ಚು ಯುವಕರು ಪದವಿ ಪಡೆದು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಾರೆ. ಆದರೆ ಉದ್ಯೋಗಗಳ ಸಂಖ್ಯೆ ಅಷ್ಟೊಂದು ಹೆಚ್ಚಿಲ್ಲ. ಕೆಲವು ಸಮೀಕ್ಷೆಗಳ ವರದಿ (2025) ಪ್ರಕಾರ, 15 ರಿಂದ 29 ವರ್ಷದೊಳಗಿನ ಯುವಕರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.13.7 ಮತ್ತು ನಗರ ಪ್ರದೇಶಗಳಲ್ಲಿ ಶೇ.18 ರಷ್ಟು ನಿರುದ್ಯೋಗವಿದೆ. ಈ ಪರಿಸ್ಥಿತಿಯಲ್ಲಿ SSC ಮೂಲಕ ಬರುವ ಸಾವಿರಾರು ಸರ್ಕಾರಿ ಉದ್ಯೋಗಗಳು ಯುವಕರಿಗೆ ದೊಡ್ಡ ಆಸರೆಯಾಗಿವೆ.
2025ರಲ್ಲಿ SSC-CGL ಪರೀಕ್ಷೆಯ ಮೂಲಕ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗಾಗಿ 14,582 ಹುದ್ದೆಗಳು ಬಿಡುಗಡೆಯಾಗಿದ್ದವು. 2024ರಲ್ಲಿ ಈ ಸಂಖ್ಯೆ 17 ಸಾವಿರಕ್ಕಿಂತ ಹೆಚ್ಚು ಇದ್ದರೆ, 2022ರಲ್ಲಿ ಅದು 37 ಸಾವಿರಕ್ಕೂ ಮೀರಿತ್ತು. ಈ ಅಂಕಿ ಅಂಶಗಳು SSC ಉದ್ಯೋಗಗಳ ಆಕರ್ಷಣೆಯನ್ನು ಸ್ಪಷ್ಟಪಡಿಸುತ್ತವೆ. SSC ಪರೀಕ್ಷೆಗಳ ಪ್ರಮುಖ ವೈಶಿಷ್ಟ್ಯವೆಂದರೆ, 10ನೇ ತರಗತಿಯಿಂದ ಪದವಿ ಹಂತದವರೆಗೆ ವಿಭಿನ್ನ ಅರ್ಹತೆಗಳ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವುದು. CHSL, MTS, GD ಕಾನ್ಸ್ಟೇಬಲ್, CGL ಹೀಗೆ ವಿವಿಧ ಹಂತದ ಪರೀಕ್ಷೆಗಳು ಲಭ್ಯವಿವೆ. ಪಠ್ಯಕ್ರಮವೂ ಸಾಮಾನ್ಯವಾಗಿ ಇಂಗ್ಲಿಷ್, ತಾರ್ಕಿಕತೆ, ಸಾಮಾನ್ಯ ಜ್ಞಾನ ಮತ್ತು ಗಣಿತಕ್ಕೆ ಸೀಮಿತವಾಗಿರುವುದರಿಂದ, ಒಮ್ಮೆ ಸಿದ್ಧತೆ ಮಾಡಿಕೊಂಡರೆ ಅನೇಕ ಪರೀಕ್ಷೆಗಳಿಗೆ ಪ್ರಯತ್ನಿಸಬಹುದು.
ಪರೀಕ್ಷಾ ಪ್ರಕ್ರಿಯೆಯೂ ಹೆಚ್ಚು ದೀರ್ಘವಾಗಿಲ್ಲ. ಉದಾಹರಣೆಗೆ, GD ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಲಿಖಿತ ಪರೀಕ್ಷೆಯ ನಂತರ ದೈಹಿಕ, ವೈದ್ಯಕೀಯ ಮತ್ತು ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಪದವಿ ಮಟ್ಟದ CGL ಪರೀಕ್ಷೆಯಲ್ಲಿ ಎರಡು ಹಂತಗಳಿದ್ದು, ಒಂದು ವರ್ಷದೊಳಗೆ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ. SSC ಉದ್ಯೋಗಗಳು ಗ್ರೂಪ್ D ರಿಂದ ಗ್ರೂಪ್ B ವರೆಗೆ ವ್ಯಾಪಿಸಿರುವುದರಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅವಕಾಶ ಇದೆ. ಇದು ಈ ಪರೀಕ್ಷೆಗಳ ಪ್ರಮುಖ ಶಕ್ತಿ ಎಂದು ಅಂದಾಜಿಸಲಾಗುತ್ತದೆ. ತಯಾರಿಯಲ್ಲೂ ಅಣಕು ಪರೀಕ್ಷೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅನೇಕ ತಜ್ಞರು ಉಲ್ಲೇಖಿಸಿದ್ದಾರೆ.
SSC ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಸರಿಯಾದ ಯೋಜನೆ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸ ಅಗತ್ಯ. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗದಿದ್ದರೂ, ತಪ್ಪುಗಳಿಂದ ಪಾಠ ಕಲಿದು ಮುಂದುವರಿದರೆ ಅವಕಾಶಗಳು ತೆರೆದೆಯೇ ಇರುತ್ತವೆ. ಸಾವಿರಾರು ಯುವಕರಿಗೆ SSC ಇಂದು ಕೇವಲ ಒಂದು ಪರೀಕ್ಷೆಯಲ್ಲ, ಬದಲಾಗಿ ಉತ್ತಮ ಭವಿಷ್ಯದ ಕನಸಾಗಿದೆ. ಈ ನಿಟ್ಟಿನಲ್ಲಿ ವರ್ಷಾರಂಭವಾಗುತ್ತದ್ದಂತೆ ನಿಮ್ಮ ತಯಾರಿಗೆ ಸಿದ್ಧತೆ ಮಾಡಿಕೊಳ್ಳಿ, ನಿಮ್ಮ ಭವಿಷ್ಯ ಉಜ್ವಲವಾಗಲಿ ಎನ್ನುವುದು ನ್ಯೂಸ್ 18 ಆಶಯ.
Bangalore [Bangalore],Bangalore,Karnataka
Dec 29, 2025 10:44 AM IST
