Last Updated:
ಹೊಸ ನಿಯಮಗಳು ಜಾತಿ ತಾರತಮ್ಯವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತವೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ವಿರುದ್ಧ ನಡೆಯುವ ಯಾವುದೇ ನೇರ, ಪರೋಕ್ಷ ಅಥವಾ ಅವಹೇಳನಕಾರಿ ನಡವಳಿಕೆ ತಾರತಮ್ಯವೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಯ ಘನತೆ, ಸಮಾನತೆ ಅಥವಾ ಶಿಕ್ಷಣದ ಅವಕಾಶವನ್ನು ಕುಗ್ಗಿಸುವ ಯಾವುದೇ ವರ್ತನೆಗೆ ಕಠಿಣ ಕ್ರಮ ಕೈಗೊಳ್ಳಲು ಸಮಿತಿಗೆ ಅಧಿಕಾರ ನೀಡಲಾಗಿದೆ. ಆದರೆ ಅದೇ ರೀತಿ ಸಾಮಾನ್ಯ ವಿದ್ಯಾರ್ಥಿಗಳ ಪಾಡೇನು ಎನ್ನುವುದು ಸಂಶಯಾಸ್ಪದವಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ!
ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ (Caste) ಆಧಾರಿತ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) 2026ರಲ್ಲಿ ಹೊಸ ನಿಯಮಗಳನ್ನು(New Rules) ಜಾರಿಗೆ ತಂದಿದೆ. ಇದನ್ನು “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು(Equity Campaign Rules), 2026” ಎಂದು ಕರೆಯಲಾಗುತ್ತಿದೆ. ಈ ನಿಯಮಗಳ ಪ್ರಕಾರ, ದೇಶದ ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮಾನತಾ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಮುಖ್ಯ ಜವಾಬ್ದಾರಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ಜಾತಿ ಆಧಾರಿತ ದೂರುಗಳನ್ನು ಆಲಿಸಿ, ನಿಗದಿತ ಅವಧಿಯಲ್ಲಿ ಪರಿಹರಿಸುವುದಾಗಿದೆ. ಆದರೆ ಈ ನಿಯಮಕ್ಕೆ ಸಾಮಾನ್ಯ ವರ್ಗಗಳ ವಿದ್ಯಾರ್ಥಿಗಳು ಏಕೆ ನಿಯಮದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಅವರು ಬೀದಿಗಿಳಿದ್ದೇಕೆ ಏಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಸಮಾನತಾ ಸಮಿತಿಯಲ್ಲಿ ಎಸ್ಸಿ-ಎಸ್ಟಿ, ಒಬಿಸಿ, ಅಂಗವಿಕಲರು ಮತ್ತು ಮಹಿಳಾ ಪ್ರತಿನಿಧಿಗಳಿರಬೇಕು ಎಂಬುದು ಕಡ್ಡಾಯ. ಕ್ಯಾಂಪಸ್ನಲ್ಲಿ ಸಮಾನತೆಯ ವಾತಾವರಣವನ್ನು ನಿರ್ಮಿಸುವುದು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವುದು ಮತ್ತು ಜಾತಿ ತಾರತಮ್ಯವನ್ನು ತಡೆಗಟ್ಟುವ ಜಾಗೃತಿಯನ್ನು ಮೂಡಿಸುವುದು ಸಮಿತಿಯ ಪ್ರಮುಖ ಕರ್ತವ್ಯಗಳಾಗಿವೆ.
ಈ ನಿಯಮಗಳ ಹಿಂದೆ ಸುಪ್ರೀಂ ಕೋರ್ಟ್ನ ನೇರ ಹಸ್ತಕ್ಷೇಪವಿದೆ. 2025ರಲ್ಲಿ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಪ್ರಕರಣಗಳ ವಿಚಾರಣೆ ವೇಳೆ, ಜಾತಿ ಆಧಾರಿತ ಕಿರುಕುಳವು ವಿದ್ಯಾರ್ಥಿಗಳ ಜೀವಕ್ಕೆ ಹೇಗೆ ಅಪಾಯವಾಗುತ್ತದೆ ಎಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೇಮುಲಾ ಮತ್ತು ಮುಂಬೈನ ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ತಡ್ವಿ ಜಾತಿ ಕಿರುಕುಳದ ಆರೋಪಗಳ ನಡುವೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ತಾಯಂದಿರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2012ರ ಹಳೆಯ ನಿಯಮಗಳು ಸಾಕಷ್ಟು ಪರಿಣಾಮಕಾರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿತು. ಹೀಗಾಗಿ ಎಂಟು ವಾರಗಳಲ್ಲಿ ಹೊಸ, ಕಠಿಣ ನಿಯಮಗಳನ್ನು ರೂಪಿಸುವಂತೆ ಯುಜಿಸಿಗೆ ನಿರ್ದೇಶನ ನೀಡಿತು.
ಯುಜಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ದೂರುಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಾಗಿವೆ. 2017–18ರಲ್ಲಿ 173 ದೂರುಗಳಿದ್ದರೆ, 2023–24ರಲ್ಲಿ ಈ ಸಂಖ್ಯೆ 378ಕ್ಕೆ ಏರಿದೆ. ಇದು ಐದು ವರ್ಷಗಳಲ್ಲಿ 118.4% ಹೆಚ್ಚಳವಾಗಿದೆ. ಯುಜಿಸಿಯ ಪ್ರಕಾರ, 90% ಕ್ಕಿಂತ ಹೆಚ್ಚು ದೂರುಗಳನ್ನು ಪರಿಹರಿಸಲಾಗಿದೆ. ಆದರೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕೂಡ 2019–20ರಲ್ಲಿ 18ರಿಂದ 2023–24ರಲ್ಲಿ 108ಕ್ಕೆ ಏರಿರುವುದು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ.
ಹೊಸ ನಿಯಮಗಳು ಜಾತಿ ತಾರತಮ್ಯವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತವೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ವಿರುದ್ಧ ನಡೆಯುವ ಯಾವುದೇ ನೇರ, ಪರೋಕ್ಷ ಅಥವಾ ಅವಹೇಳನಕಾರಿ ನಡವಳಿಕೆ ತಾರತಮ್ಯವೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಯ ಘನತೆ, ಸಮಾನತೆ ಅಥವಾ ಶಿಕ್ಷಣದ ಅವಕಾಶವನ್ನು ಕುಗ್ಗಿಸುವ ಯಾವುದೇ ವರ್ತನೆಗೆ ಕಠಿಣ ಕ್ರಮ ಕೈಗೊಳ್ಳಲು ಸಮಿತಿಗೆ ಅಧಿಕಾರ ನೀಡಲಾಗಿದೆ. ಆದರೆ ಅದೇ ರೀತಿ ಸಾಮಾನ್ಯ ವಿದ್ಯಾರ್ಥಿಗಳ ಪಾಡೇನು ಎನ್ನುವುದು ಸಂಶಯಾಸ್ಪದವಾಗಿದೆ.
ಈ ನಿಯಮಗಳು ಜಾರಿಯಾದ ನಂತರ ಮೇಲ್ವರ್ಗ ಅಥವಾ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಿಯಮಗಳು ಏಕಪಕ್ಷೀಯವಾಗಿವೆ ಎಂಬುದು ಅವರ ಪ್ರಮುಖ ಆಕ್ಷೇಪ. ಮೇಲ್ವರ್ಗದ ವಿದ್ಯಾರ್ಥಿಗಳ ಪ್ರಕಾರ, ಈ ನಿಯಮಗಳು ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಮಾತ್ರ ರಕ್ಷಣೆ ನೀಡುತ್ತವೆ, ಆದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ತಾರತಮ್ಯವಾದರೆ ಅವರು ಎಲ್ಲಿ ದೂರು ನೀಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಜೊತೆಗೆ ಸುಳ್ಳು ದೂರು ನೀಡಿದರೆ ಶಿಕ್ಷೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದೂ ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ, ನಿಯಮಗಳು ಯುಜಿಸಿ ಕಾಯ್ದೆ ಮತ್ತು ಸಮಾನ ಅವಕಾಶದ ತತ್ವಕ್ಕೆ ವಿರುದ್ಧವಾಗಿವೆ ಎಂದು ಹೇಳಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪ್ರತಿಭಟನಾಕಾರರ ಪ್ರಕಾರ, ಈ ನಿಯಮಗಳು ತಾರತಮ್ಯವನ್ನು ಕಡಿಮೆ ಮಾಡುವ ಬದಲು ಹೊಸ ರೀತಿಯ ವಿಭಜನೆಗೆ ಕಾರಣವಾಗಬಹುದು.
ಒಂದು ಕಡೆ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವ ಅಗತ್ಯ ಇದೆ. ಇನ್ನೊಂದು ಕಡೆ, ನಿಯಮಗಳ ದುರುಪಯೋಗದ ಭಯ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ ಮೂಡಿದೆ. ಮೇಲ್ವರ್ಗದ ವಿದ್ಯಾರ್ಥಿಗೆ ತಾರತಮ್ಯವಾದರೆ ಪರಿಹಾರವೇನು?” ಮತ್ತು “ಸುಳ್ಳು ದೂರುಗಳಿಗೆ ಶಿಕ್ಷೆ ಏಕೆ ಇಲ್ಲ? ಎಂಬ ಪ್ರಶ್ನೆಗಳೇ ಈ ವಿವಾದದ ಕೇಂದ್ರಬಿಂದುವಾಗಿವೆ. ಈಗ ಈ ವಿಷಯದ ಅಂತಿಮ ತೀರ್ಪು ಸುಪ್ರೀಂ ಕೋರ್ಟ್ ಕೈಯಲ್ಲಿದೆ.
Bangalore [Bangalore],Bangalore,Karnataka
Jan 27, 2026 11:21 AM IST
UGC New Rules: ಯುಜಿಸಿ ಹೊಸ ನಿಯಮ; ಯಾರಿಗೆ ರಕ್ಷಣೆ, ಯಾರಿಗೆ ಆತಂಕ? ಸಾಮಾನ್ಯವರ್ಗದ ವಿದ್ಯಾರ್ಥಿಗಳು ಬೀದಿಗಿಳಿದ್ದೇಕೆ? ಇಲ್ಲಿದೆ ಮಾಹಿತಿ!

