Last Updated:
Pariksha Pe Charcha 2026: ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ಕಾರ್ಯಕ್ರಮ ‘ಪರೀಕ್ಷಾ ಪೇ ಚರ್ಚಾ’ (Pariksha Pe Charcha) ಮೂಲಕ ದೇಶದಾದ್ಯಂತ ಇರುವ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ (Students) ನೇರ ಸಂವಾದ ನಡೆಸಿದರು.
ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ಕಾರ್ಯಕ್ರಮ ‘ಪರೀಕ್ಷಾ ಪೇ ಚರ್ಚಾ’ (Pariksha Pe Charcha) ಮೂಲಕ ದೇಶದಾದ್ಯಂತ ಇರುವ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ (Students) ನೇರ ಸಂವಾದ ನಡೆಸಿದರು. ಇದು ಕೇವಲ ಪರೀಕ್ಷೆಯ ತಯಾರಿ (Exam Preparation) ಅಥವಾ ಒತ್ತಡ ನಿರ್ವಹಣೆ (Stress Management) ಕುರಿತ ಚರ್ಚೆಯಾಗಿರಲಿಲ್ಲ. ಬದಲಿಗೆ, ಪರೀಕ್ಷೆಯನ್ನೊಂದು ಮಾಧ್ಯಮವಾಗಿ ಬಳಸಿಕೊಂಡು ಯುವಪೀಳಿಗೆಗೆ ಶಿಸ್ತು ಮತ್ತು ಜೀವನದ ಮೌಲ್ಯಗಳನ್ನು (Values) ತಿಳಿಸಿಕೊಡುವುದು ಅವರ ಮುಖ್ಯ ಉದ್ದೇಶವಾಗಿತ್ತು. ಪ್ರಧಾನಿಯವರ ಅಧಿಕೃತ ನಿವಾಸದ ಹುಲ್ಲುಹಾಸಿನ ಮೇಲೆ ಗಣ್ಯವ್ಯಕ್ತಿಗಳ ಬದಲಿಗೆ, ದೇಶದ ಭವಿಷ್ಯವಾಗಿರುವ ಮಕ್ಕಳು ಕುಳಿತಿದ್ದ ದೃಶ್ಯ ನಿಜಕ್ಕೂ ವಿಶೇಷವಾಗಿತ್ತು.
ಸಾಮಾನ್ಯವಾಗಿ ಗಣ್ಯರ ಭೇಟಿಗೆ ಸಾಕ್ಷಿಯಾಗುವ ಲೋಕ ಕಲ್ಯಾಣ ಮಾರ್ಗದ ಪ್ರಧಾನಿ ನಿವಾಸ, ಈ ಬಾರಿ ವಿಭಿನ್ನವಾಗಿ ಕಂಗೊಳಿಸುತ್ತಿತ್ತು. ಮೋದಿ ಅವರು ಕೆಲವೊಮ್ಮೆ ನಿಂತು, ಕೆಲವೊಮ್ಮೆ ಕುಳಿತು ಮಕ್ಕಳೊಂದಿಗೆ ಅತ್ಯಂತ ಆಪ್ತವಾಗಿ ಬೆರೆತರು. ದೇಶದ ಅತ್ಯುನ್ನತ ನಾಯಕರೊಬ್ಬರು ಮಾತನಾಡುತ್ತಿದ್ದಾರೆ ಎಂಬ ಅಂಜಿಕೆ ಇಲ್ಲದೆ, ಮನೆಯ ಹಿರಿಯರೊಬ್ಬರು ಅಥವಾ ಪೋಷಕರು ಮಕ್ಕಳೊಂದಿಗೆ ಮಾತನಾಡುವಂತೆ ಈ ಸಂವಾದ ನಡೆಯಿತು. 25 ವರ್ಷಗಳ ಆಡಳಿತಾತ್ಮಕ ಅನುಭವವಿದ್ದರೂ, ಮೋದಿಯವರ ಆದ್ಯತೆ ಕೇವಲ ಆರ್ಥಿಕತೆಯಲ್ಲ, ಬದಲಿಗೆ ವ್ಯಕ್ತಿತ್ವ ನಿರ್ಮಾಣವೂ ಹೌದು ಎಂಬುದು ಇಲ್ಲಿ ಸ್ಪಷ್ಟವಾಯಿತು.
ಈ ಬಾರಿಯ ಒಂಬತ್ತನೇ ಆವೃತ್ತಿಯ ಕಾರ್ಯಕ್ರಮವು ಹಿಂದಿನದಕ್ಕಿಂತ ಹೆಚ್ಚು ಒಳಗೊಳ್ಳುವಿಕೆಯಿಂದ ಕೂಡಿತ್ತು. ವಿಶೇಷ ಚೇತನ ವಿದ್ಯಾರ್ಥಿಯೊಬ್ಬರ ಕೈಹಿಡಿದು ಮೋದಿ ಅವರು ನಡೆದು ಬಂದ ಕ್ಷಣ ನೋಡುಗರ ಮನಮುಟ್ಟಿತು. ಅಸ್ಸಾಂ ಮತ್ತು ಈಶಾನ್ಯ ಭಾರತದ ಸಂಸ್ಕೃತಿಯ ಪ್ರತೀಕವಾದ ‘ಗಾಮ್ಚಾ’ ಧರಿಸಿದ್ದ ವಿದ್ಯಾರ್ಥಿಗಳು ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಗೌರವವನ್ನು ಸಾರಿದರು. ಕಳೆದ ಹನ್ನೆರಡು ವರ್ಷಗಳಲ್ಲಿ ಈಶಾನ್ಯ ಭಾರತವು ಹೇಗೆ ಮುಖ್ಯವಾಹಿನಿಯೊಂದಿಗೆ ಬೆರೆತಿದೆ ಎಂಬುದಕ್ಕೆ ಇದು ಸಾಕ್ಷಿಯಂತಿತ್ತು.
ಇಂದಿನ ಯುವಜನತೆಯನ್ನು ಕಾಡುತ್ತಿರುವ ಗೇಮಿಂಗ್ ಚಟದ ಬಗ್ಗೆಯೂ ಮೋದಿ ಮಾತನಾಡಿದರು. ಗಾಜಿಯಾಬಾದ್ನಲ್ಲಿ ನಡೆದ ದುರಂತ ಘಟನೆಯನ್ನು ಪ್ರಸ್ತಾಪಿಸಿದ ಅವರು, ಗೇಮಿಂಗ್ ಹೆಸರಿನಲ್ಲಿ ನಡೆಯುವ ಜೂಜಾಟದ ಬಗ್ಗೆ ಎಚ್ಚರಿಸಿದರು. ಗೇಮ್ಗಳನ್ನು ಒಂದು ಕೌಶಲ್ಯವಾಗಿ ನೋಡಿ, ಆದರೆ ಬೆಟ್ಟಿಂಗ್ ಅಥವಾ ಜೂಜಾಟಕ್ಕೆ ಬಲಿಯಾಗಬೇಡಿ ಎಂದು ಕಿವಿಮಾತು ಹೇಳಿದರು. ತಂತ್ರಜ್ಞಾನವನ್ನು ಆಪತ್ತು ಎಂದು ಭಾವಿಸದೆ, ಅದನ್ನು ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಇಡೀ ಜಗತ್ತು ಕೃತಕ ಬುದ್ಧಿಮತ್ತೆ ಅಥವಾ ಎಐ (AI) ಬಗ್ಗೆ ಚರ್ಚಿಸುತ್ತಿರುವಾಗ, ವಿದ್ಯಾರ್ಥಿಗಳು ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಪ್ರಧಾನಿ ಧೈರ್ಯ ತುಂಬಿದರು. ಎಐ ಅನ್ನು ಒಂದು ಸಮಸ್ಯೆಯಾಗಿ ನೋಡುವ ಬದಲು, ನಿಮ್ಮ ಕಲಿಕೆ ಮತ್ತು ಕೆಲಸವನ್ನು ಸುಲಭಗೊಳಿಸುವ ಸಾಧನವನ್ನಾಗಿ ಅಥವಾ ಮಿತ್ರನನ್ನಾಗಿ ಪರಿವರ್ತಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.
ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ನಡುವೆ ಗೊಂದಲಕ್ಕೀಡಾಗಬಾರದು. ಮೊದಲು ಬೋರ್ಡ್ ಪರೀಕ್ಷೆಗೆ ಆದ್ಯತೆ ನೀಡಿ, ಅದು ಭವಿಷ್ಯದ ಸ್ಪರ್ಧೆಗಳಿಗೆ ಬಲವಾದ ಅಡಿಪಾಯ ಹಾಕುತ್ತದೆ ಎಂದು ಸಲಹೆ ನೀಡಿದರು. ಇದೇ ವೇಳೆ ಶಿಕ್ಷಕರಿಗೂ ಕಿವಿಮಾತು ಹೇಳಿದ ಮೋದಿ, ಶಿಕ್ಷಕರು ವಿದ್ಯಾರ್ಥಿಗಳಿಗಿಂತ ಕೇವಲ ಒಂದು ಹೆಜ್ಜೆ ಮುಂದಿರಬೇಕು, ಅತಿಯಾದ ವೇಗದಲ್ಲಿ ಸಾಗಬಾರದು ಎಂದು ಮಾರ್ಗದರ್ಶನ ನೀಡಿದರು.
ಗುಜರಾತ್ನ ವಡ್ನಗರದ ಬಡ ಕುಟುಂಬದಿಂದ ಬಂದು ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿರುವ ಮೋದಿಯವರ ಜೀವನವೇ ವಿದ್ಯಾರ್ಥಿಗಳಿಗೆ ಸ್ಫೂರ್ತಿ. “ನಾನು ತೆರೆದ ಕಣ್ಣುಗಳಿಂದ ಕನಸು ಕಾಣುತ್ತೇನೆ ಮತ್ತು ಅದನ್ನು ನನಸು ಮಾಡುತ್ತೇನೆ” ಎಂದು ಹೇಳುವ ಮೋದಿ, ಭಾರತದ ಯುವಜನತೆಯಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ.
2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎಂಬ ಗುರಿಯಲ್ಲಿ ಇಂದಿನ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಕನಸು ಮಾತ್ರ ಕಂಡು ಸಾಲದು, ಛಲ ಮತ್ತು ಪರಿಶ್ರಮದಿಂದ ಅದನ್ನು ಸಾಧಿಸಬೇಕು ಎಂಬ ಸಂದೇಶವಿತ್ತು.

