Last Updated:
ನಾಳೆ ನೀಟ್ ಯುಜಿ ಮರು ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ರದ್ದಾಗಿದ್ದ ಎಕ್ಸಾಂ ನಾಳೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು ಪಾಲಿಸಬೇಕಾದ ಕೆಲವು ನಿಯಮಗಳು ಇದೆ. ಎನ್ಟಿಎ ಅಭ್ಯರ್ಥಿಗಳಿಗೆ ಕೆಲ ಸೂಚನೆ ನೀಡಿದೆ.
ಬೆಂಗಳೂರು: ನಾಳೆ ದೇಶಾದ್ಯಂತ ನೀಟ್ ಯುಜಿ ಮರು ಪರೀಕ್ಷೆ ನಡೆಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣಕ್ಕೆ ರದ್ದಾಗಿದ್ದ ನೀಟ್ (NEET) ಪರೀಕ್ಷೆಯ ಮರು ಪರೀಕ್ಷೆ ನಾಳೆ ನಡೆಯಲಿದೆ. ಈ ಪರೀಕ್ಷೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಅಭ್ಯರ್ಥಿಗಳಿಗೆ ಹಲವು ಮುಖ್ಯ ಸೂಚನೆಗಳನ್ನು ನೀಡಿದೆ. ಪರೀಕ್ಷೆಯನ್ನು ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಇದನ್ನು ಗಮನದಲ್ಲಿಡಬೇಕಿದೆ.
ಪರೀಕ್ಷೆಗೆ ಹೋಗುವಾಗ ಪಾಲಿಸಬೇಕಾದ ನಿಯಮಗಳು, ಡ್ರೆಸ್ ಕೋಡ್ ಮತ್ತು ಯಾವೆಲ್ಲಾ ವಸ್ತುಗಳನ್ನು ತರಬೇಕು, ತರಬಾರದು ಎಂದೆಲ್ಲಾ ಸೂಚನೆ ನೀಡಲಾಗಿದೆ.
ಎಲ್ಲಾ ಅಭ್ಯರ್ಥಿಗಳು ತಮ್ಮೊಂದಿಗೆ ಎರಡು ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ತೆಗೆದುಕೊಂಡು ಹೋಗಬೇಕು. ಸರ್ಕಾರಿ ಫೋಟೋ ಐಡಿ ಕಾರ್ಡ್ (ಆಧಾರ್, ವೋಟರ್ ಐಡಿ, ಪಾಸ್ಪೋರ್ಟ್ ಇತ್ಯಾದಿ) ಕಡ್ಡಾಯವಾಗಿ ತರಬೇಕು. ಇವುಗಳಿಲ್ಲದಿದ್ದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವುದಿಲ್ಲ.
ಅಭ್ಯರ್ಥಿಗಳ ಧರ್ಮ ಮತ್ತು ನಂಬಿಕೆಗೆ ಅನುಗುಣವಾಗಿ ಡ್ರೆಸ್ ಕೋಡ್ಗೆ ಅವಕಾಶ ನೀಡಲಾಗಿದೆ. ಹಿಜಾಬ್, ಪಂಜಾಬಿ ರುಮಾಲು ಧರಿಸಲು ಅನುಮತಿ ಇದೆ. ಸಾಮಾನ್ಯ ಚಪ್ಪಲಿ ಮತ್ತು ಕಡಿಮೆ ಹಿಮ್ಮಡಿ ಎತ್ತರದ ಚಪ್ಪಲಿಗಳನ್ನು ಧರಿಸಬಹುದು. ಆದರೆ ಎತ್ತರದ ಚಪ್ಪಲಿ ಧರಿಸುವವರು ಹೆಚ್ಚುವರಿ ತಪಾಸಣೆಗೆ ಒಳಗಾಗಬೇಕು.
ಪರೀಕ್ಷಾ ಕೇಂದ್ರದ ಒಳಗೆ ಪಾರದರ್ಶಕ ನೀರಿನ ಬಾಟಲ್ಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ. ಇದರಿಂದ ಅಭ್ಯರ್ಥಿಗಳು ಪರೀಕ್ಷೆಯ ಸಮಯದಲ್ಲಿ ನೀರು ಕುಡಿಯಬಹುದು.
ಪರೀಕ್ಷಾ ಕೇಂದ್ರಗಳಿಗೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಅವುಗಳಲ್ಲಿ
- ಮೊಬೈಲ್ ಫೋನ್
- ಸ್ಮಾರ್ಟ್ ವಾಚ್
- ಬ್ಲೂಟೂತ್ ಉಪಕರಣಗಳು
- ಇಯರ್ ಫೋನ್ಗಳು
- ದೊಡ್ಡ ಬೆಲ್ಟ್ ಕೊಂಡಿ
- ಭಾರೀ ಆಭರಣಗಳು
ಭದ್ರತಾ ತಪಾಸಣೆಗೆ ಅಡಚಣೆಯಾಗುವ ಯಾವುದೇ ವಸ್ತುಗಳನ್ನು ತರಬಾರದು ಎಂದು NTA ಸ್ಪಷ್ಟಪಡಿಸಿದೆ.
ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಪಡಬೇಕು. ನಿಗದಿಪಡಿಸಲಾದ ಸಮಯಕ್ಕೂ ಮುಂಚಿತವಾಗಿ ಕೇಂದ್ರಕ್ಕೆ ತಲುಪುವಂತೆ ಸೂಚಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ಟೆಲಿಗ್ರಾಂಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಪರೀಕ್ಷೆಯಲ್ಲಿ ಯಶಸ್ವಿಯಾಗಲು ಬಯಸುವ ವಿದ್ಯಾರ್ಥಿಗಳು ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲ ಅಥವಾ ತೊಂದರೆ ಉಂಟಾಗದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ. ಸರ್ಕಾರಿ ಐಡಿ, ಫೋಟೋಗಳು, ಅನುಮತಿಸಿದ ವಸ್ತುಗಳು ಎಲ್ಲವನ್ನೂ ಸಿದ್ಧಪಡಿಸಿಕೊಂಡು ಹೋಗಿ.
ಈ ಬಾರಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ NTA ಬಿಗಿ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪರೀಕ್ಷೆಯಾದ್ದರಿಂದ ಎಲ್ಲರೂ ಶಾಂತಚಿತ್ತದಿಂದ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಮತ್ತೆ ನಡೆಯದಂತೆ ಈ ಮರು ಪರೀಕ್ಷೆಯು ಮಾದರಿಯಾಗಲಿ ಎಂಬುದು ಎಲ್ಲಾ ವಿದ್ಯಾರ್ಥಿಗಳ ಮತ್ತು ಪಾಲಕರ ಅಪೇಕ್ಷೆಯಾಗಿದೆ. ಎಲ್ಲಾ ಅಭ್ಯರ್ಥಿಗಳಿಗೂ ಶುಭವಾಗಲಿ ಎಂದು ಹಾರೈಸುತ್ತೇವೆ.
ನೆನಪಿಡಿ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ NTA ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಒಮ್ಮೆ ಪರಿಶೀಲಿಸಿ.
Bangalore,Karnataka

