ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಆಟೋಮೇಷನ್ ಎಂಜಿನಿಯರ್ ಒಬ್ಬರು ತಮ್ಮ ವೃತ್ತಿಜೀವನದ ಆರಂಭಿಕ ಅವಧಿಯಲ್ಲಿ ಅನುಭವಿಸಿದ ಆತಂಕಕಾರಿ ಅನುಭವವನ್ನು ಇಲ್ಲಿ ಹೇಳಿಕೊಂಡಿದ್ದಾರೆ ನೋಡಿ.
ಅವರ ಐಐಟಿಯ ಉದ್ಯೋಗದಾತರು ತಮ್ಮ ಕೆಲಸದ ಮೊದಲ ಮೂರು ದಿನಗಳಲ್ಲಿಯೇ ಕ್ಲೈಂಟ್ ಮುಂದೆಯೇ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದರು.
ಒಂದು ವರ್ಷದ ನಂತರ, ಅವರು ಮೂಲತಃ ನೀಡಲಾಗಿದ್ದಕ್ಕಿಂತ ಎಂಟು ಪಟ್ಟು ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ರಿತು ಮೌರ್ಯ ಅವರು ಮೊದಲ ಕೆಲಸ ಸಿಕ್ಕ ಖುಷಿಯಲ್ಲಿರುತ್ತಾರೆ, ಆದರೆ ಆ ಖುಷಿ ಮೂರು ದಿನಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರಲಿಲ್ಲ ನೋಡಿ.
ಆದರೂ ಸಹ ಛಲ ಬಿಡದೆ ಕೆಲಸ ಮಾಡಿ, ಹೋದ ಕೆಲಸಕ್ಕಿಂತ ಎಂಟು ಪಟ್ಟು ಹೆಚ್ಚು ಹಣವನ್ನು ಸಂಪಾದಿಸಿ ತೋರಿಸಿದ್ದಾರೆ. ತಮ್ಮ ಈ ಮಹತ್ವದ ಬದಲಾವಣೆಗೆ ಅವರ ಸ್ವಯಂ ಕಲಿಕೆ ಮತ್ತು ಮಾರ್ಗದರ್ಶನವೇ ಕಾರಣ ಎಂದು ಅವರು ಹೇಳಿಕೊಳ್ಳುತ್ತಾರೆ.
ಇನ್ಸ್ಟಾಗ್ರಾಮ್ನಲ್ಲಿನ ವಿಡಿಯೋವೊಂದರಲ್ಲಿ, ರಿತು ಮೌರ್ಯ ಅವರು ‘ಮೊದಲ ಕೆಲಸದಲ್ಲಿಯೇ ಕೇವಲ ಮೂರೇ ಮೂರು ದಿನಕ್ಕೆ ಕೆಲಸ ಕಳೆದುಕೊಂಡ ಅನುಭವ ನಿಜಕ್ಕೂ ಒಂದು ದುಃಸ್ವಪ್ನವಾಗಿತ್ತು.
ಆದರೆ ನನ್ನ ಸ್ನೇಹಿತರು ಮತ್ತು ಸಹದ್ಯೋಗಿಗಳು ನನಗೆ ಆ ಒಂದು ಕಠಿಣವಾದ ಸಂದರ್ಭದಲ್ಲಿ ಬೆಂಬಲವಾಗಿ ನಿಂತರು ಮತ್ತು ಸೂಕ್ತ ಮಾರ್ಗದರ್ಶನ ಪಡೆಯುವಲ್ಲಿ ಸಹ ಸಹಾಯ ಮಾಡಿದರು,’ ಅಂತ ಹೇಳಿಕೊಂಡರು.
‘ಕೆಲಸಕ್ಕೆ ಸೇರಿದ ಕಂಪನಿಯ ಸ್ಥಾಪಕರು ಪ್ರಾಯೋಗಿಕ ಮಾರ್ಗದರ್ಶನದ ಭರವಸೆ ನೀಡಿದ್ದರು, ಆದರೆ ಅವರು ಹೆಚ್ಚಾಗಿ ಗೈರು ಹಾಜರಾಗಿದ್ದರು.
ಅನೇಕ ಗಂಟೆಗಳ ನಂತರ ಕಳುಹಿಸಿದ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದರು ಮತ್ತು ಸ್ಪಷ್ಟೀಕರಣಕ್ಕಾಗಿ ಕರೆಗಳನ್ನು ಸಹ ನಿರಾಕರಿಸಿದರು,’ ಅಂತ ಅವರು ಹೇಳಿಕೊಂಡರು.
‘ಕೆಲಸಕ್ಕೆ ಸೇರಿ ಕೇವಲ ಎರಡು ದಿನಗಳಲ್ಲಿಯೇ ನನಗೆ ತಿಳಿದಿಲ್ಲದ ಬಹಳಷ್ಟು ವಿಷಯಗಳು ಇದ್ದವು ಅಂತ ತಿಳಿಯಿತು ಮತ್ತು ಅವರು ನನಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಅವರು ಹೇಳಿದ್ದರು. ಆದರೆ ಅವರು ಕಚೇರಿಯಲ್ಲಿ ಎಲ್ಲಿಯೂ ಕಂಡು ಬರಲಿಲ್ಲ,’ ಎಂದು ಅವರು ಹೇಳಿದರು.
ನಿಯೋಜನೆಯ ಕೇವಲ ಮೂರು ದಿನಗಳಲ್ಲಿ, ಸಂಸ್ಥಾಪಕರು ಕ್ಲೈಂಟ್ ಮುಂದೆ ಅವರ ಕಾರ್ಯಕ್ಷಮತೆಯನ್ನು ಟೀಕಿಸಿದರು ಎಂದು ಮೌರ್ಯ ಬರೆದಿದ್ದಾರೆ.
‘ನೀವು ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ನಾನು ಈ ಕೆಲಸವನ್ನು ಬರೀ ಒಂದೇ ಒಂದು ಗಂಟೆಯಲ್ಲಿ ಮಾಡುತ್ತಿದ್ದೆ. ನೀವು ಇನ್ನು ಮುಂದೆ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಿಲ್ಲ,’ ಅಂತ ಹೇಳಿ ನನ್ನನ್ನು ಕೆಲಸದಿಂದ ತೆಗೆದು ಹಾಕಿದರು ಅಂತ ರಿತು ಅವರು ಹೇಳಿದರು.
‘ಇದರಿಂದ ಬೇಸರ ಮಾಡಿಕೊಂಡು ನಾನು ದಿನವಿಡೀ ಅಳುತ್ತಾ ಕೂತಿದ್ದೆ, ಮುಂದೆ ಹೇಗೆ ಕೆಲಸ ಸಿಗುತ್ತಾ ಅಥವಾ ಇಲ್ಲವೇ ಅನ್ನೋ ಚಿಂತೆ ನನ್ನನ್ನು ಕಾಡಲು ಶುರು ಮಾಡಿತು,’ ಅಂತ ಸಹ ರಿತು ಅವರು ಹೇಳಿಕೊಂಡರು.
ನಂತರ ರಿತು ಅವರು ಕೆಲಸದ ಬಗ್ಗೆ ಅನೇಕ ರೀತಿಯ ಟ್ಯುಟೋರಿಯಲ್ಗಳನ್ನು ನೋಡುವುದು, ಗೆಳೆಯರಿಂದ ಸಹಾಯ ಪಡೆಯುವುದು ಮತ್ತು ತಲೆಗೆ ತೋಚಿದ ಪ್ರಶ್ನೆಗಳನ್ನು ಕೇಳುತ್ತಾ ಅಂತಿಮವಾಗಿ ಆ ಕೆಲಸವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು.
ತನ್ನನ್ನು ಕೆಲಸದಿಂದ ವಜಾಗೊಳಿಸಿದ ಒಂದು ವರ್ಷದ ನಂತರ, ಮೌರ್ಯ ಅವರು ಆರಂಭದಲ್ಲಿ ನೀಡಿದ್ದಕ್ಕಿಂತ ಎಂಟು ಪಟ್ಟು ಹೆಚ್ಚು ಹಣ ಈಗ ನನಗೆ ಸಂಬಳವಾಗಿ ಕೊಡುತ್ತಿದ್ದಾರೆ ಅಂತ ಹೇಳಿದರು.
