Advertisement
Advertisement

Germany: ಜರ್ಮನಿ ಕನಸಿಗೆ ಬ್ರೇಕ್: ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ಗಡೀಪಾರು ಶಾಕ್!

Your paragraph text 2025 12 24t165128.987 2025 12 a92c4e4cd438edd422a84ba0db2007ad.jpg


Last Updated:

ಐಯು ಬರ್ಲಿನ್ ಕ್ಯಾಂಪಸ್‌ನ 4500 ಭಾರತೀಯ ವಿದ್ಯಾರ್ಥಿಗಳಿಗೆ LEA ಗಡೀಪಾರು ಆದೇಶ ನೀಡಿದ್ದು, ಆಡಳಿತ ದೋಷಗಳಿಂದ ಭವಿಷ್ಯ ಅನಿಶ್ಚಿತವಾಗಿದೆ. ವಿದ್ಯಾರ್ಥಿಗಳು ಕಾನೂನು ಹೋರಾಟ ನಡೆಸುತ್ತಿದ್ದಾರೆ.

News18
News18

ದೆಹಲಿ: ದೊಡ್ಡ ದೊಡ್ಡ ಕನಸುಗಳನ್ನು (Big Dream) ಹೃದಯದಲ್ಲಿ(Heart) ಹೊತ್ತು, ಉತ್ತಮ ಶಿಕ್ಷಣ ಮತ್ತು ಭವಿಷ್ಯದ ಭದ್ರ ಕೆಲಸದ ಆಶಯದೊಂದಿಗೆ ಜರ್ಮನಿಗೆ ಹೋದ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಆಘಾತಕೊಳಪಟ್ಟಿದ್ದಾರೆ. ಕೋರ್ಸ್ ಮುಗಿಸಿ ಅಲ್ಲಿಯೇ ಉದ್ಯೋಗ ಪಡೆದು ನೆಲೆಸಬೇಕು ಎಂಬ ಕನಸಿನೊಂದಿಗೆ ವಿದೇಶಿ ಮಣ್ಣಿಗೆ ಕಾಲಿಟ್ಟ ಯುವಜನತೆಗೆ ಈಗ ಗಡೀಪಾರು ಆದೇಶಗಳು ಆಘಾತ ನೀಡಿವೆ. ಬರ್ಲಿನ್‌ನಲ್ಲಿರುವ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ (ಐಯು) ಕ್ಯಾಂಪಸ್‌ನಲ್ಲಿ ದಾಖಲಾಗಿರುವ ಸುಮಾರು 4,500 ಭಾರತೀಯ ವಿದ್ಯಾರ್ಥಿಗಳಿಗೆ ಜರ್ಮನಿ ತೊರೆಯುವಂತೆ ಸೂಚನೆ ನೀಡಲಾಗಿದೆ.

ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ!

ಒಟ್ಟು 1.3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಐಯು, ಜರ್ಮನಿಯ ಅತಿದೊಡ್ಡ ಖಾಸಗಿ ವಿವಿಗಳಲ್ಲಿ ಒಂದಾಗಿದ್ದು, ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಇಲ್ಲಿ ಸಾಕಷ್ಟು ಹೆಚ್ಚಿದೆ. ಈ ವಿದ್ಯಾರ್ಥಿಗಳ ಬಹುಪಾಲು ಜನರು ಕಾನೂನುಬದ್ಧ ವಿದ್ಯಾರ್ಥಿ ವೀಸಾದ ಮೂಲಕ ಜರ್ಮನಿಗೆ ತೆರಳಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ, ಕುಟುಂಬದ ಎಲ್ಲಾ ನಿರೀಕ್ಷೆಗಳನ್ನು ಹೊತ್ತು ಇಲ್ಲಿ ಶಿಕ್ಷಣ ಆರಂಭಿಸಿದ್ದರು. ಆದರೆ ಇದೀಗ ವಿಶ್ವವಿದ್ಯಾಲಯದ ಆಡಳಿತಾತ್ಮಕ ದೋಷಗಳ ಕಾರಣಕ್ಕೆ, ವಿದ್ಯಾರ್ಥಿಗಳ ಭವಿಷ್ಯವೇ ಪ್ರಶ್ನಾರ್ಥಕವಾಗಿ ನಿಂತಿದೆ.

ಗಡೀಪಾರು ಆದೇಶಕ್ಕೆ ಕಾರಣವೇನು?

ಬರ್ಲಿನ್ ವಲಸೆ ಕಚೇರಿ (LEA) ನೀಡಿರುವ ಸ್ಪಷ್ಟೀಕರಣದ ಪ್ರಕಾರ, ಐಯು ಬರ್ಲಿನ್ ಕ್ಯಾಂಪಸ್‌ವು ವಿದ್ಯಾರ್ಥಿ ವೀಸಾಕ್ಕೆ ಅಗತ್ಯವಿರುವ ಪೂರ್ಣಕಾಲಿಕ, ಮುಖಾಮುಖಿ (in-person) ಶಿಕ್ಷಣ ಮಾನದಂಡಗಳನ್ನು ಪೂರೈಸುತ್ತಿಲ್ಲ. ಈ ವಿಶ್ವವಿದ್ಯಾಲಯವು ಹೈಬ್ರಿಡ್ ಅಥವಾ ದೂರಸ್ಥ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಸರಿಯಾದ ಕ್ಯಾಂಪಸ್ ಮೂಲಸೌಕರ್ಯ, ಮಾನ್ಯತೆ ಮತ್ತು ಸಾಕಷ್ಟು ಅಧ್ಯಾಪಕರ ಕೊರತೆ ಇದೆ ಎಂಬುದು ಅಧಿಕಾರಿಗಳ ಆರೋಪ. ಈ ಹಿನ್ನೆಲೆಯಲ್ಲಿ, ಮಾರ್ಚ್ 2025ರಿಂದ ಅನೇಕ ವಿದ್ಯಾರ್ಥಿಗಳಿಗೆ ಗಡುವು ನಿಗದಿಪಡಿಸಿ ಜರ್ಮನಿಯನ್ನು ತೊರೆಯುವಂತೆ ಸೂಚಿಸಲಾಗಿದೆ. ಕೆಲ ವಿದ್ಯಾರ್ಥಿಗಳು ಈಗಾಗಲೇ ದೇಶ ಬಿಟ್ಟು ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ಕನಸು, ಹಣ, ಶ್ರಮ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಕೈ ಖಾಲಿಯಾಗಿ ಮರಳುವ ಸ್ಥಿತಿ ನಿರ್ಮಾಣವಾಗಿದೆ.

ಕಾನೂನು ಹೋರಾಟ ಮತ್ತು ಅನಿಶ್ಚಿತತೆ!

ಇನ್ನೂ ಕೆಲವರು ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ವಲಸೆ ಕಚೇರಿಯ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಅಪ್‌ಗ್ರಾಡ್ ಮುಂತಾದ ಏಜೆನ್ಸಿಗಳ ಮೂಲಕ ದಾಖಲಾದ ವಿದ್ಯಾರ್ಥಿಗಳ ಮೇಲೆ ಈ ಪರಿಣಾಮ ಹೆಚ್ಚು ಬಿದ್ದಿದೆ ಎನ್ನಲಾಗುತ್ತಿದೆ. ವಿದ್ಯಾರ್ಥಿಗಳು ಹೇಳುವಂತೆ, ನಾವು ತಪ್ಪು ಕೋರ್ಸ್ ಆಯ್ಕೆ ಮಾಡಿಲ್ಲ, ಆದರೆ ತಪ್ಪು ವಿಶ್ವವಿದ್ಯಾಲಯ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಜೀವನವೇ ನರಕದಂತೆ ಕಾಣುತ್ತಿದೆ. ಈ ಪರಿಸ್ಥಿತಿ ಅವರ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿದೆ.

ಹೈಯರ್ ಸ್ಟಡೀಸ್‌ಗೆ ಜರ್ಮನಿ ಏಕೆ ಫೇವರಿಟ್?

ಮಾಸ್ಟರ್ಸ್ ಮತ್ತು ಸಂಶೋಧನೆಗಾಗಿ ಜರ್ಮನಿ ಈಗ ಭಾರತೀಯ ವಿದ್ಯಾರ್ಥಿಗಳ ಮೊದಲ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಕಡಿಮೆ ಶಿಕ್ಷಣ ವೆಚ್ಚ, ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳ ಕಾರಣಕ್ಕೆ ಅಮೇರಿಕಾದ ಬದಲು ಜರ್ಮನಿಯತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ. ಸುಮಾರು 60 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಈಗಾಗಲೇ ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಆದರೆ ಇಂತಹ ಘಟನೆಗಳು, ವಿದೇಶಿ ಶಿಕ್ಷಣದ ಕನಸಿನ ಹಿಂದೆ ಇರುವ ಅಪಾಯಗಳನ್ನೂ ಎಚ್ಚರಿಸುತ್ತಿವೆ.



Source link

Leave a Reply

Your email address will not be published. Required fields are marked *

TOP