ಬೆಂಗಳೂರು: ರಾಜ್ಯದ ಜನತೆಯ ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕರ್ನಾಟಕ ರಾಜ್ಯ ಅಗ್ನಿಶಾಮಕ (Karnataka Fire Department) ಮತ್ತು ತುರ್ತು ಸೇವೆಗಳ ಇಲಾಖೆಯು ಖಾಲಿ ಇರುವ ವಿವಿಧ ವೃಂದದ 1,828 ಹುದ್ದೆಗಳನ್ನು(Posts) ಭರ್ತಿ ಮಾಡಲು ಮುಂದಾಗಿದೆ. ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೇಮಕಾತಿಯು (Requirement) ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯದ ಯುವಜನತೆಗೆ ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಸುವರ್ಣ ಅವಕಾಶವಾಗಿದೆ.
ಪ್ರಕಟಣೆಯ ಪ್ರಕಾರ, ಒಟ್ಟು 1,828 ಹುದ್ದೆಗಳಲ್ಲಿ ಅಗ್ನಿಶಾಮಕ (Fireman), ಅಗ್ನಿಶಾಮಕ ಚಾಲಕ (Fireman Driver) ಮತ್ತು ಚಾಲಕ ಮೆಕ್ಯಾನಿಕ್ (Driver Mechanic) ಹುದ್ದೆಗಳು ಸೇರಿವೆ.ಅಗ್ನಿಶಾಮಕ ಹುದ್ದೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್ಎಸ್ಎಲ್ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಚಾಲಕ ಹುದ್ದೆಗಳು; ಎಸ್ಎಸ್ಎಲ್ಸಿ ವಿದ್ಯಾರ್ಹತೆಯೊಂದಿಗೆ, ಅಭ್ಯರ್ಥಿಗಳು ಕಡ್ಡಾಯವಾಗಿ ಭಾರೀ ವಾಹನ ಚಾಲನಾ ಪರವಾನಗಿ (Heavy Transport Vehicle License) ಹೊಂದಿರಬೇಕು ಮತ್ತು ಕನಿಷ್ಠ ಎರಡು ವರ್ಷಗಳ ಚಾಲನಾ ಅನುಭವದ ಅಗತ್ಯವಿರುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ, ಒಬಿಸಿ (2A, 2B, 3A, 3B) ಅಭ್ಯರ್ಥಿಗಳಿಗೆ 27 ವರ್ಷ ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 30 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅಗ್ನಿಶಾಮಕ ದಳದ ನೇಮಕಾತಿಯು ಕಠಿಣ ಮತ್ತು ಪಾರದರ್ಶಕವಾದ ಮೂರು ಹಂತದ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿದೆ. ಅವುಗಳೆಂದರೆ,
ದೈಹಿಕ ಅಳತೆ ಪರೀಕ್ಷೆ (PST): ಅಭ್ಯರ್ಥಿಗಳ ಎತ್ತರ ಮತ್ತು ಎದೆಯಳತೆಯನ್ನು ನಿಗದಿತ ಮಾನದಂಡಗಳ ಪ್ರಕಾರ ಅಳೆಯಲಾಗುತ್ತದೆ.
ದೈಹಿಕ ಸಾಮರ್ಥ್ಯ ಪರೀಕ್ಷೆ (PET): ಓಟ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ಗುಂಡು ಎಸೆಯುವಿಕೆಯಂತಹ ದೈಹಿಕ ಕಸರತ್ತುಗಳ ಮೂಲಕ ಅಭ್ಯರ್ಥಿಯ ದೈಹಿಕ ಸದೃಢತೆಯನ್ನು ಪರೀಕ್ಷಿಸಲಾಗುತ್ತದೆ.
ಲಿಖಿತ ಪರೀಕ್ಷೆ: ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಾಮಾನ್ಯ ಜ್ಞಾನ ಮತ್ತು ತಾಂತ್ರಿಕ ವಿಷಯಗಳ ಕುರಿತು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಚಾಲಕ ಹುದ್ದೆಗಳಿಗೆ ಪ್ರತ್ಯೇಕವಾಗಿ ಚಾಲನಾ ಕೌಶಲ್ಯ ಪರೀಕ್ಷೆಯನ್ನೂ ನಡೆಸಲಾಗುವುದು.
ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ksfes.karnataka.gov.in ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸುವಾಗ ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಕಡ್ಡಾಯ. ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ. ಅರ್ಜಿ ಸಲ್ಲಿಸಲು ಏ.30 ಕೊನೆಯ ದಿನವಾಗಿದೆ. ಆದ್ದರಿಂದ ಅಭ್ಯರ್ಥಿಗಳು ತಡಮಾಡದೆ ಅರ್ಜಿ ಸಲ್ಲಿಸಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ನಿಯಮಾನುಸಾರ ಆಕರ್ಷಕ ವೇತನ ಶ್ರೇಣಿ ಮತ್ತು ಇತರ ಭತ್ಯೆಗಳು ಸಿಗಲಿವೆ. ಪ್ರಶಿಕ್ಷಣಾರ್ಥಿಯಾಗಿ ತರಬೇತಿ ಅವಧಿಯಲ್ಲಿಯೂ ನಿಗದಿತ ಸ್ಟೈಫಂಡ್ ನೀಡಲಾಗುವುದು.
ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ನಡೆಯುವುದರಿಂದ, ಯಾವುದೇ ಆಮಿಷಗಳಿಗೆ ಬಲಿಯಾಗಬಾರದೆಂದು ಇಲಾಖೆ ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಅಥವಾ ಅಧಿಕೃತ ಪ್ರಕಟಣೆಯನ್ನು ಗಮನಿಸಬಹುದು. ಸೇವೆ ಮತ್ತು ತ್ಯಾಗದ ಮನೋಭಾವವುಳ್ಳ ಯುವಕರಿಗೆ ಅಗ್ನಿಶಾಮಕ ದಳವು ಗೌರವಾನ್ವಿತ ವೃತ್ತಿಜೀವನವನ್ನು ಒದಗಿಸುತ್ತದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
