ಹೌದು, ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚೇನೂ ದೊಡ್ಡ ಮಟ್ಟದ ಹಿನ್ನೆಲೆಯನ್ನು ಹೊಂದಿರದ ಮಹಿಳೆಯರು ಸಹ ತಮ್ಮದೇ ವ್ಯವಹಾರಗಳನ್ನು ನಿರ್ಮಿಸಿ ಉದ್ಯೋಗ ಮತ್ತು ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.
ಉತ್ಪಾದನಾ ಕ್ಷೇತ್ರದಿಂದ ಆನ್ಲೈನ್ ವಾಣಿಜ್ಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆವರೆಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಉದ್ಯಮಿಗಳು ತಮ್ಮ ಸಂಕಲ್ಪ, ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಮತ್ತು ಮಾರ್ಗದರ್ಶನದ ನೆರವಿನಿಂದ ಸಣ್ಣ ಆಲೋಚನೆಗಳನ್ನು ಸಹ ಯಶಸ್ವಿ ಉದ್ಯಮಗಳಾಗಿ ರೂಪಿಸುತ್ತಿದ್ದಾರೆ, ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಆದರೆ, ಇವರೆದೆಲ್ಲಾ ಸುಲಭವಾಗಿ ಸಿಕ್ಕ ಯಶಸ್ಸಿನ ಕಥೆಗಳು ಅಲ್ಲ. ಬದಲಾಗಿ, ಧೈರ್ಯ, ಸಹನೆ ಮತ್ತು ನಿರಂತರ ಕಲಿಕೆಯ ಕಥೆಗಳು. ಇಂದು ಈ ಲೇಖನದಲ್ಲಿ ಇಂತಹ ಮೂವರು ಮಹಿಳಾ ಉದ್ಯಮಿಗಳ ಕಥೆಗಳು, ಸರಿಯಾದ ಸಂಕಲ್ಪ ಮತ್ತು ಬೆಂಬಲ ದೊರೆತರೆ ಕನಸುಗಳನ್ನು ಯಶಸ್ವಿ ಉದ್ಯಮಗಳಾಗಿ ರೂಪಿಸಬಹುದು ಎಂಬುದನ್ನು ತೋರಿಸುತ್ತವೆ.
ಚೆನ್ನೈನಲ್ಲಿ ತಮರೈ ಸೆಲ್ವಿಯ ಉದ್ಯಮವು ಕೊರೊನಾ ಮಹಾಮಾರಿ ಸಮಯದಲ್ಲಿ ಕೇವಲ 8,000 ರೂ. ಹೂಡಿಕೆಯೊಂದಿಗೆ ಆರಂಭವಾಯಿತು. ಆನ್ಲೈನ್ನಲ್ಲಿ ನೋಡಿದ ವಿಡಿಯೋಗಳಿಂದ ಪ್ರೇರಿತಗೊಂಡ ಅವರು ಮಣ್ಣಿನ ದೀಪಗಳು, ಐಸ್ಕ್ರೀಮ್ ಸ್ಟಿಕ್ಗಳಿಂದ ತಯಾರಿಸಿದ ಅಲಂಕಾರ ವಸ್ತುಗಳು ಹಾಗೂ ಬಾಳೆ ಎಲೆಯಿಂದ ತಯಾರಿಸಿದ ವಸ್ತುಗಳನ್ನು ಆನ್ಲೈನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು.
ಅಮೆಜಾನ್ ಮತ್ತು ಇಂಡಿಯಾಮಾರ್ಟ್ಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಉತ್ಪನ್ನಗಳನ್ನು ವ್ಯಾಪಕವಾಗಿ ಮಾರಾಟ ಮಾಡಲಾರಂಭಿಸಿದರು. ಜೊತೆಗೆ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಮೂಲಕ ತಮ್ಮ ಬ್ರ್ಯಾಂಡ್ನ್ನು ಪ್ರಚಾರ ಮಾಡಿದರು. ಆದರೆ, ಇವರ ಬೆಳವಣಿಗೆ ಸುಲಭವಾಗಿರಲಿಲ್ಲ. ಒಂದೊಂದು ಬಾರಿ ಸುಮಾರು 30% ಆರ್ಡರ್ಗಳು ಹಿಂತಿರುಗುತ್ತಿದ್ದವು.
ಅದರಲ್ಕೂ ಮುಖ್ಯವಾಗಿ ವಸ್ತುಗಳು ಹಾನಿಗೊಳಗಾದ ಕಾರಣದಿಂದ.ಹಾಗಾಗಿ, ಈ ಸಮಸ್ಯೆಯನ್ನು ವಿಶ್ಲೇಷಿಸಿ ಗುಣಮಟ್ಟ ಪರಿಶೀಲನೆ ಕ್ರಮಗಳನ್ನು ಸುಧಾರಿಸಿದರು. ನಿಧಾನವಾಗಿ ಅವರ ಪ್ರಯತ್ನ ಫಲ ನೀಡಿತು. ಇಂದು ಅವರ “ಹೀನಾ ಹೋಮ್ ಡೆಕೋರ್ಸ್” ವ್ಯವಹಾರ ದಿನಕ್ಕೆ ಸುಮಾರು 100 ಆರ್ಡರ್ಗಳನ್ನು ಪಡೆಯುತ್ತಿದೆ. ಹೆಚ್ಚಿನ ಸಿಬ್ಬಂದಿಯೊಂದಿಗೆ ವ್ಯವಹಾರ ವಿಸ್ತರಿಸಿದೆ.
2024ರಲ್ಲಿ ಮಾರ್ಗದರ್ಶನ ಮತ್ತು ಬ್ಯಾಂಕ್ ಸಾಲದ ನೆರವಿನಿಂದ ಅವರು ಕಳೆದ ಹಣಕಾಸು ವರ್ಷದಲ್ಲಿ ಸುಮಾರು ₹56 ಲಕ್ಷ ವಹಿವಾಟು (ಟರ್ನೋವರ್) ಮಾಡಿದ್ದಾರೆ ಮತ್ತು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸುತ್ತಿದ್ದಾರೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಭಾರತಿಗೆ ಉದ್ಯಮಿಯಾಗುವುದು ಒಮ್ಮೆ ದೂರದ ಕನಸಿನಂತೆ ಕಾಣಿಸುತ್ತಿತ್ತು. ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬದಿಂದ ಬಂದ ಅವರು ಕಷ್ಟಪಟ್ಟು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದರು.
ಅವರ ಪತಿ ಶಿವಕುಮಾರ್ ಹಲವು ವರ್ಷಗಳು ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಇವರಿಬ್ಬರೂ ಉದ್ಯಮಿತ್ವ ತರಬೇತಿ ಕಾರ್ಯಕ್ರಮಗಳ ಮೂಲಕ ಮಾರ್ಗದರ್ಶನ ಪಡೆದ ನಂತರ ಭಾರತಿಗೆ ಬ್ಯಾಂಕ್ ಸಾಲ ದೊರಕಿತು.
2023ರಲ್ಲಿ ಅವರು “ಶ್ರೀ ಗಣಪತಿ ಇಂಡಸ್ಟ್ರೀಸ್” ಎಂಬ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು. ಈ ಕಂಪನಿ ಭಾರೀ ವಾಹನಗಳು ಮತ್ತು ಕೈಗಾರಿಕಾ ಉಪಕರಣಗಳಲ್ಲಿ ಬಳಸುವ ಲೋಹದ ಭಾಗಗಳನ್ನು ತಯಾರಿಸುತ್ತದೆ. ಭಾರತಿ ಹಣಕಾಸು ವ್ಯವಹಾರಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುತ್ತಾರೆ.
ಡಿಜಿಟಲ್ ಸಾಧನಗಳ ಸಹಾಯದಿಂದ ವೆಚ್ಚ ಮತ್ತು ಆದಾಯವನ್ನು ತಕ್ಷಣ ಟ್ರ್ಯಾಕ್ ಮಾಡುತ್ತಾ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತಿದ್ದಾರೆ. ಇದರಿಂದ ವ್ಯವಹಾರ ನಿಧಾನವಾಗಿ ಬೆಳೆಯುತ್ತಿದೆ.
ಇಂದು ಈ ಕಂಪನಿಗೆ ನಿಯಮಿತ ಆರ್ಡರ್ಗಳು ಬರುತ್ತಿದ್ದು ಹಲವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಒಮ್ಮೆ ಅಸಾಧ್ಯವೆನಿಸಿದ ಕನಸು ಇಂದು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ಉದ್ಯಮವಾಗಿ ರೂಪುಗೊಂಡಿದೆ.
ಮಹಾರಾಷ್ಟ್ರದ ವಾರ್ಧಾದ ಡಾ. ತನ್ವಿ ಪಾಂಡೆ ವಿಭಿನ್ನ ರೀತಿಯಲ್ಲಿ ಉದ್ಯಮ ಲೋಕಕ್ಕೆ ಕಾಲಿಟ್ಟರು. ವೃತ್ತಿಯಿಂದ ಫಿಜಿಯೋಥೆರಪಿಸ್ಟ್ ಆಗಿರುವ ಅವರು ಹಲವು ವರ್ಷಗಳು ರೋಗಿಗಳ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದರು. ಈ ಅವಧಿಯಲ್ಲಿ ಪ್ರಮುಖ ಸಮಸ್ಯೆಯೊಂದು ಅವರ ಗಮನಕ್ಕೆ ಬಂತು. ಅದೇನೆಂದರೆ, ಅನೇಕ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರ್ಥೋಪೆಡಿಕ್ ಪುನಶ್ಚೇತನ (rehabilitation) ಉಪಕರಣಗಳು ಸುಲಭವಾಗಿ ದೊರಕುತ್ತಿರಲಿಲ್ಲ.
ಸ್ಥಳೀಯವಾಗಿ ಇಂತಹ ವಿಶೇಷ ಉತ್ಪನ್ನಗಳನ್ನು ತಯಾರಿಸುವ ಘಟಕಗಳು ಕಡಿಮೆ ಇದ್ದವು. ಈ ಅಗತ್ಯವನ್ನು ಗಮನಿಸಿ ಅವರು ತಮ್ಮದೇ ಉತ್ಪಾದನಾ ಘಟಕವನ್ನು ಆರಂಭಿಸುವ ನಿರ್ಧಾರ ಕೈಗೊಂಡರು.
ಆದರೆ, ಈ ಪ್ರಯಾಣ ಸುಲಭವಾಗಿರಲಿಲ್ಲ. ಬ್ಯಾಂಕ್ ಸಾಲ ಮತ್ತು ದಾಖಲೆ ಪ್ರಕ್ರಿಯೆಗಳು ಆರಂಭದಲ್ಲಿ ಸವಾಲಾಯಿತು. ಆದರೆ, ತರಬೇತಿ ಮತ್ತು ಮಾರ್ಗದರ್ಶನದ ನೆರವಿನಿಂದ ಅವರು ನಿಧಿ ಪಡೆದರು ಮತ್ತು “ಶ್ರೀ ಸಾಯಿ ಫಿಜಿಯೋಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಏಡ್ಸ್” ಎಂಬ ಘಟಕವನ್ನು ಆರಂಭಿಸಿದರು. ಇಂದು ಅವರ ಘಟಕ ವೈದ್ಯಕೀಯ ಸಮಸ್ಯೆಗಳಿಗಾಗಿ ಬಳಸುವ ವಿಶೇಷ ಪಾದರಕ್ಷೆಗಳು, ಸ್ಪ್ಲಿಂಟ್ಗಳು ಮತ್ತು ಕೃತಕ ಅಂಗಗಳಂತಹ ಉಪಕರಣಗಳನ್ನು ತಯಾರಿಸುತ್ತಿದೆ.
ಹೀಗೆ ಈ ಮಹಿಳೆಯರ ಕಥೆಗಳು ಭಾರತದಲ್ಲಿ ಉದ್ಯಮಿತ್ವದ ಮತ್ತೊಂದು ಮುಖವನ್ನು ತೋರಿಸುತ್ತವೆ. ಇವರ ವ್ಯವಹಾರಗಳು ದೊಡ್ಡ ಹೂಡಿಕೆಗಳ ಸ್ಟಾರ್ಟ್ಅಪ್ಗಳಂತೆ ಸುದ್ದಿಯಾಗದೇ ಇರಬಹುದು. ಆದರೆ,ವೈಯಕ್ತಿಕ ಬೆಳವಣಿಗೆ ಹಾಗೂ ದೇಶದ ಕೊಡುಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ.
ಈ ಮಹಿಳಾ ದಿನದ ಸಂದರ್ಭದಲ್ಲಿ ಇವರೆಲ್ಲರ ಕಥೆಗಳು ಭಾರತದ ಉದ್ಯಮಶೀಲ ಶಕ್ತಿ ಕೇವಲ ಮಹಾನಗರಗಳಲ್ಲಿ ಮಾತ್ರವಲ್ಲ, ಸಣ್ಣ ಪಟ್ಟಣಗಳಲ್ಲಿ, ಮನೆಗಳಲ್ಲಿ, ವರ್ಕ್ಶಾಪ್ಗಳಲ್ಲಿ ಮತ್ತು ಸ್ಥಳೀಯ ಕಾರ್ಖಾನೆಗಳಲ್ಲಿ ಸಹ ಬೆಳೆದು ಬರುತ್ತಿದೆ ಎಂಬ ದೊಡ್ಡ ಸಂದೇಶ ನೀಡುತ್ತಿದೆ.
