ಇತ್ತೀಚೆಗೆ ಪ್ರಸಿದ್ಧ ಕೆರಿಯರ್ ಕೋಚ್ ಸೈಮನ್ ಇಂಗಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ಕಹಿಸತ್ಯದ ಕಥೆ ಈಗ ಇಡೀ ಕಾರ್ಪೊರೇಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. 100% ಸಂಬಳ ಏರಿಕೆಯ ಆಫರ್ ಒಪ್ಪಿಕೊಂಡ ಉದ್ಯೋಗಿಯೊಬ್ಬ ಕೇವಲ ನಾಲ್ಕೇ ತಿಂಗಳಲ್ಲಿ ಹೇಗೆ ಕೆಲಸದಿಂದ ಹೊರ ಬಿದ್ದ ಅನ್ನೋದೇ ಇವತ್ತಿನ ದೊಡ್ಡ ಚರ್ಚೆ.
ಸೈಮನ್ ಇಂಗಾರಿ ಅವರು ಹೇಳುವ ಪ್ರಕಾರ, ಅವರು ಕೆಲಸಕ್ಕೆ ತಗೆದುಕೊಳ್ಳುತ್ತಿದ್ದ ಒಬ್ಬ ವ್ಯಕ್ತಿ ವಾರ್ಷಿಕ 1 ಲಕ್ಷ ಸಂಬಳ ಪಡೆಯುತ್ತಿದ್ದ. ಆತನಿಗೆ ಮತ್ತೊಂದು ಕಂಪನಿಯಿಂದ 1.70 ಲಕ್ಷದ ಆಫರ್ ಸಿಕ್ಕಿತ್ತು. ಅಂದರೆ ಸುಮಾರು 70% ಸಂಬಳ ಏರಿಕೆ. ಆದರೆ ಆ ಉದ್ಯೋಗಿ ಆಫರ್ ಲೆಟರ್ ಸಿಕ್ಕ ಕೇವಲ 15 ನಿಮಿಷದಲ್ಲೇ ಆ ಕೆಲಸ ಬೇಡ ಎಂದು ಹೇಳಿದ.
ನಮಗೆ 100% ಸಂಬಳ ಹೆಚ್ಚಿಸಿದರೆ ಅದು ನಮ್ಮ ಕೆಲಸಕ್ಕೆ ಸಿಕ್ಕ ಗೌರವ ಅಂದುಕೊಳ್ಳುತ್ತೇವೆ. ಆದರೆ ಸೈಮನ್ ಇಂಗಾರಿ ಹೇಳುವುದೇ ಬೇರೆ. ಅವರ ಪ್ರಕಾರ, ಕಂಪನಿಗಳು ನಿಮ್ಮ ಮೇಲೆ ಪ್ರೀತಿಯಿಂದ ಹಣ ಹೆಚ್ಚಿಸುವುದಿಲ್ಲ. ನೀವು ಹೋದರೆ ಅವರ ಕೆಲಸ ಕೆಡುತ್ತದೆ ಎಂಬ ಕಾರಣಕ್ಕೆ ನಿಮ್ಮನ್ನು ಉಳಿಸಿಕೊಳ್ಳಲು ಈ ತಂತ್ರ ಹೂಡುತ್ತಾರೆ.
ಅಷ್ಟರಲ್ಲಿ ಅವರು ನಿಮಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ಹುಡುಕುತ್ತಿರುತ್ತಾರೆ. ಅಂದರೆ, ಅವರಿಗೆ ಅಲ್ಲಿವರೆಗೆ ಮಾತ್ರ ನಿಮ್ಮ ಅವಶ್ಯಕತೆ ಇರುತ್ತದೆ.
ಆರಂಭದಲ್ಲಿ ಆ ಉದ್ಯೋಗಿ ತುಂಬಾ ಖುಷಿಯಾಗಿದ್ದ. ಆದರೆ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಆತನ ಕಂಪನಿ ಆತನನ್ನು ಕೆಲಸದಿಂದ ತೆಗೆದುಹಾಕಿತು.
ಅಷ್ಟೇ ಅಲ್ಲ, ಆತನ ಜಾಗಕ್ಕೆ ಕಡಿಮೆ ಸಂಬಳ ಪಡೆಯುವ ಹೊಸಬರನ್ನು ನೇಮಕ ಮಾಡಿಕೊಂಡಿತು.
ಕೆಲಸ ಹೋದ ಮೇಲೆ ಆ ಉದ್ಯೋಗಿ ಮತ್ತೆ ಸೈಮನ್ ಅವರಿಗೆ ಮೆಸೇಜ್ ಮಾಡಿ, “ಸರ್, ಕ್ಷಮಿಸಿ, ಅಂದು ನಾನು ತಪ್ಪು ಮಾಡಿದೆ. ಈಗ ಯಾವುದಾದರೂ ಕೆಲಸವಿದ್ದರೆ ಕೊಡಿ” ಎಂದು ಬೇಡಿಕೊಳ್ಳುವಂತಾಯಿತು. ಹಣದ ಆಸೆ ಆತನ ಜೀವನವನ್ನೇ ಅಸ್ತವ್ಯಸ್ತ ಮಾಡಿತ್ತು.
ಒಮ್ಮೆ ನೀವು ರಾಜೀನಾಮೆ ನೀಡಿದ ಮೇಲೆ, ಮ್ಯಾನೇಜ್ಮೆಂಟ್ಗೆ ನಿಮ್ಮ ಮೇಲೆ ನಂಬಿಕೆ ಇರುವುದಿಲ್ಲ. “ಇವನು ಯಾವತ್ತಾದರೂ ಕೆಲಸ ಬಿಡಬಹುದು” ಎಂಬ ಗುಮಾನಿ ಅವರಲ್ಲಿರುತ್ತದೆ.
ಹಾಗಾಗಿ ಮುಂದೆ ಉದ್ಯೋಗ ಕಡಿತ ಅಥವಾ ಲೇ ಆಫ್ ನಡೆದಾಗ ಮೊದಲು ಪಟ್ಟಿಯಲ್ಲಿ ಬರುವ ಹೆಸರೇ ನಿಮ್ಮದಾಗಿರುತ್ತದೆ. ಅಷ್ಟೇ ಅಲ್ಲ, ನಿಮ್ಮ ಕೆಲಸಕ್ಕೆ ನಿಜವಾಗಿಯೂ ಬೆಲೆ ಇದ್ದಿದ್ದರೆ ಅವರು ಮೊದಲೇ ಸಂಬಳ ಹೆಚ್ಚಿಸಬಹುದಿತ್ತಲ್ಲವೇ? ನೀವು ಹೋಗುವವರೆಗೆ ಯಾಕೆ ಕಾಯುತ್ತಿದ್ದರು ಎಂದು ಸೈಮನ್ ಪ್ರಶ್ನಿಸಿದ್ದಾರೆ.
ಈ ಸ್ಟೋರಿ ವೈರಲ್ ಆದ ಮೇಲೆ ಅನೇಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಹೇಳುವಂತೆ, ಅವರ ಸ್ನೇಹಿತರೊಬ್ಬರಿಗೆ ಪ್ರಮೋಷನ್ ಕೊಡುತ್ತೇನೆಂದು ಹೇಳಿ ನಾಲ್ಕು ತಿಂಗಳು ಜೂನಿಯರ್ ಹುಡುಗನಿಗೆ ಟ್ರೈನಿಂಗ್ ಕೊಡಲು ಹೇಳಿದ್ದರು.
ಟ್ರೈನಿಂಗ್ ಮುಗಿದ ತಕ್ಷಣ ಸ್ನೇಹಿತನನ್ನು ತೆಗೆದುಹಾಕಿ ಆ ಜೂನಿಯರ್ ಹುಡುಗನಿಗೆ ಕೆಲಸ ಕೊಟ್ಟರಂತೆ. ಇದು ಇಂದಿನ ಕಾರ್ಪೊರೇಟ್ ಪ್ರಪಂಚದ ಕಹಿ ಸತ್ಯ.
