Last Updated:
ಪ್ರದೀಪ್ ಕುಮಾರ್ ಯುಪಿಎಸ್ಸಿ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು. ಅವರ ತಂದೆ ಸುಖ್ಬೀರ್ ಸಿಂಗ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರೂ, ತ್ಯಾಗ ಮಾಡಿ ಮಗನ ಶಿಕ್ಷಣ ಬೆಂಬಲಿಸಿದರು.
ಪ್ರತಿ ಬಾರಿ ಈ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯನ್ನು ಬರೆದು ಒಳ್ಳೆಯ ಅಂಕಗಳನ್ನು ಪಡೆದು, ರ್ಯಾಂಕ್ (Rank) ಗಳಿಸಿರುವ ಅನೇಕ ಸಾಧಕರ ಕಥೆ ನಮಗೆ ನೋಡಲು ಸಿಗುತ್ತವೆ. ಅನೇಕ ಜನ ಸಾಧಕರು ತಮ್ಮ ಶಕ್ತಿ ಮೀರಿ ಪ್ರಯತ್ನ ಪಟ್ಟು, ಕಷ್ಟಗಳನ್ನೆಲ್ಲವನ್ನು ಬದಿಗಿಟ್ಟು ಓದಿ ಈ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸ್ (Pass) ಮಾಡುತ್ತಾರೆ. ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯನ್ನು (Exam) ಪಾಸ್ ಮಾಡುವುದು ಲಕ್ಷಾಂತರ ಭಾರತೀಯರ ಕನಸು ಸಹ ಆಗಿರುತ್ತದೆ. ಪ್ರತಿ ವರ್ಷ, ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಕೆಲವೇ ಕೆಲವರು ಮಾತ್ರವೇ ಅಂತಿಮವಾಗಿ ಈ ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಪಾಸ್ ಆಗುವುದರ ಮೂಲಕ ಪ್ರತಿಷ್ಠಿತ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಿ ಹೊರ ಹೊಮ್ಮುತ್ತಾರೆ.
ಐಎಎಸ್ ಅಧಿಕಾರಿ ಪ್ರದೀಪ್ ಕುಮಾರ್ ಸಿಂಗ್ ಅವರ ಯಶಸ್ಸಿನ ಕಥೆ ಸಹ ಇದಕ್ಕೆ ಭಿನ್ನವಾಗಿಲ್ಲ ನೋಡಿ. ಯುಪಿಎಸ್ಸಿ ಆಕಾಂಕ್ಷಿಯಾಗಿದ್ದ ಪ್ರದೀಪ್ ಕುಮಾರ್ ಅವರು ತಮ್ಮ ಐಎಎಸ್ ಆಗಬೇಕೆಂಬ ಕನಸನ್ನು ಕಷ್ಟಪಟ್ಟು ಓದಿ ನನಸಾಗಿಸಿಕೊಂಡರು. ಹರಿಯಾಣದ ಈ ಹುಡುಗ 2019 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಗಳಿಸಿದರು.
ಅವರ ತಾಯಿ ಗೃಹಿಣಿಯಾಗಿದ್ದವರು. ಪ್ರದೀಪ್ ಸಿಂಗ್ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ. ನಂತರ ಅವರು ಸೋನಿಪತ್ನ ಶಂಭು ದಯಾಳ್ ಮಾಡರ್ನ್ ಶಾಲೆಯಲ್ಲಿ 12ನೇ ತರಗತಿಯವರೆಗೆ ಹೆಚ್ಚಿನ ಅಧ್ಯಯನ ಮಾಡಿದರು. ನಂತರ ಅವರು ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಬಿ.ಕಾಂ (ಆನರ್ಸ್) ಪದವಿಯನ್ನು ಸಹ ಪಡೆದರು.
ಪ್ರದೀಪ್ ಸಿಂಗ್ ಅವರ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿತು. ಅವರ ತಂದೆ ಸುಖ್ಬೀರ್ ಸಿಂಗ್ ಕೂಡ ಕೆಲ ಸಮಯ ಸೋನಿಪತ್ನ ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದ ಆರ್ಥಿಕ ಸ್ಥಿತಿ ತುಂಬಾನೇ ಚಿಂತಾಜನಕವಾಗಿತ್ತು, ಪ್ರದೀಪ್ ಅವರ ತಂದೆ ತಮ್ಮ ಮಗನ ಶಿಕ್ಷಣವನ್ನು ಬೆಂಬಲಿಸಲು ತಮ್ಮ ಮನೆಯನ್ನು ಮಾರಬೇಕಾಯಿತು.
ಎರಡು ವರ್ಷಗಳ ಕಾಲ ಈ ಇಡೀ ಕುಟುಂಬವು ಬಾಡಿಗೆ ಫ್ಲಾಟ್ನಲ್ಲಿ ವಾಸಿಸುತ್ತಿತ್ತು. ಅವರ ತಂದೆ ಮಾಡಿದ ಈ ತ್ಯಾಗ ಪ್ರದೀಪ್ ಅವರ ಜೀವನದ ಮೇಲೆ ಆಳವಾದ ಪರಿಣಾಮ ಬೀರಿತು. ಶಿಕ್ಷಣ ಮುಗಿದ ನಂತರ, ಪ್ರದೀಪ್ ಸಿಂಗ್ ಸ್ವಲ್ಪ ಕಾಲ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸಹ ಕೆಲಸ ಮಾಡಿದರು. ಆದಾಗ್ಯೂ, ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ಕನಸಾಗಿತ್ತು.
ಅವರು ತಮ್ಮ ಕೆಲಸವನ್ನು ತೊರೆದು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು ಕೆಲಸದ ಸ್ಥಳದಲ್ಲಿ ಊಟದ ವಿರಾಮದ ಸಮಯದಲ್ಲಿಯೂ ಸಹ ಅಧ್ಯಯನ ಮಾಡಲು ಪ್ರತಿ ಬಿಡುವಿನ ಕ್ಷಣವನ್ನು ಬಳಸಿಕೊಂಡರು.
2019ರಲ್ಲಿ ಪ್ರದೀಪ್ ಸಿಂಗ್ ಅವರ ಕಠಿಣ ಪರಿಶ್ರಮವು ಫಲ ನೀಡಿತು, ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಪಡೆದರು. ಈ ಸಾಧನೆಯು ಅವರಿಗೆ ಕೇವಲ ಯಶಸ್ಸಲ್ಲ, ಬದಲಿಗೆ ಅವರ ತಂದೆಯ ಹೋರಾಟಗಳು ಮತ್ತು ತ್ಯಾಗಗಳಿಗೆ ಉತ್ತರವೂ ಸಹ ಆಗಿತ್ತು.
ಪ್ರದೀಪ್ ಸಿಂಗ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಮಯ ನಿರ್ವಹಣೆ ಮತ್ತು ಅಧ್ಯಯನದ ಮೇಲೆ ಗಮನ ಹರಿಸುವ ಮಹತ್ವವನ್ನು ಒತ್ತಿ ಹೇಳುತ್ತಾರೆ.
August 01, 2025 3:05 PM IST

