ಅಪಧಮನಿಗಳ ಅಡಚಣೆಯು ಹೃದಯಾಘಾತ ಸೇರಿದಂತೆ ಹಲವು ಹೃದಯರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಕಾರಣ. ಅಪಧಮನಿಗಳು ಬ್ಲಾಕ್ ಆದಾಗ ರಕ್ತದ ಪೂರೈಕೆಗೆ ಅಡ್ಡಿಯಾಗಿ, ದೇಹದ ಅಂಗಗಳಿಗೆ ಆಮ್ಲಜನಕದ ಕೊರತೆಯಾಗುತ್ತದೆ.
ಇದು ಕೇವಲ ಹೃದಯಕ್ಕೆ ಮಾತ್ರವಲ್ಲದೆ, ಪಾರ್ಶ್ವವಾಯು (ಸ್ಟ್ರೋಕ್) ನಂತಹ ಸಮಸ್ಯೆಗಳಿಂದ ಮೆದುಳಿಗೂ ಅಪಾಯವನ್ನುಂಟುಮಾಡುತ್ತದೆ. ಆದರೆ, ಡಾ. ಭೋಜ್ರಾಜ್ ಹೇಳುವಂತೆ, ಸರಳ ದೈನಂದಿನ ಅಭ್ಯಾಸಗಳ ಮೂಲಕ ಈ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು, ಅದು ಹೇಗೆಂದರೆ ಔಷಧಿಯಿಲ್ಲದೆ ಗುಣವಾಗಬಹುದು.
“ಇವೆಲ್ಲವೂ ಅಷ್ಟೇನು ಬೇಗನೆ ವರ್ಕ್ ಆಗದೇ ಇರಬಹುದು. ಆದರೆ, ಇವನ್ನು ಸ್ಥಿರವಾಗಿ ಅಳವಡಿಸಿಕೊಂಡರೆ, ಇದು ನಿಮ್ಮ ಹೃದಯ ಮತ್ತು ನಿಮ್ಮ ಭವಿಷ್ಯಕ್ಕಾಗಿ ನಿಜವಾದ ‘ಬುಲೆಟ್ಪ್ರೂಫಿಂಗ್’ ತಂತ್ರ,” ಎಂದು ಡಾ. ಭೋಜ್ರಾಜ್ ವಿವರಿಸುತ್ತಾರೆ. ಅಂದರೆ, ಕ್ಷಣಿಕ ಪರಿಹಾರಗಳ ಬದಲಿಗೆ, ಸ್ಥಿರವಾದ ದೈನಂದಿನ ಅಭ್ಯಾಸಗಳು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ.
ಅವರು ಹಂಚಿಕೊಂಡಿರುವ ನಾಲ್ಕು ಪ್ರಮುಖ ಅಂಶಗಳು ಇಲ್ಲಿವೆ:
ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳು ಕೇವಲ ದೇಹವನ್ನು ಬಲಗೊಳಿಸುವುದಷ್ಟೇ ಅಲ್ಲ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಎರಡೂ ಅಂಶಗಳು ಅಪಧಮನಿಗಳ ಆರೋಗ್ಯಕ್ಕೆ ನಿರ್ಣಾಯಕವಾಗಿವೆ.
ಡಾ. ಭೋಜ್ರಾಜ್ ಒಮೆಗಾ-3 ಕೊಬ್ಬಿನಾಮ್ಲಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ಕೊಬ್ಬಿನ ಮೀನು, ವಾಲ್ನಟ್ಸ್ ಮತ್ತು ಚಿಯಾ ಬೀಜಗಳಂತಹ ಆಹಾರಗಳನ್ನು ಸೇವಿಸುವುದರಿಂದ ಅಪಧಮನಿಗಳಲ್ಲಿ ಉಂಟಾಗುವ ಉರಿಯೂತ ಮತ್ತು ಪ್ಲೇಕ್ ಶೇಖರಣೆಯನ್ನು ಕಡಿಮೆ ಮಾಡಬಹುದು, ಇದರಿಂದ ಅಪಧಮನಿಗಳು ಶುದ್ಧವಾಗಿ ಮತ್ತು ಸ್ಥಿತಿಸ್ಥಾಪಕತ್ವದಿಂದ ಕೂಡಿರುತ್ತವೆ.
ನಿಯಮಿತ ಮತ್ತು ಸ್ಥಿರವಾದ ನಿದ್ರೆ ಕೇವಲ ನಿಮಗೆ ಫ್ರೆಶ್ನೆಸ್ ಅಷ್ಟೇ ನೀಡುವುದಲ್ಲ, ಇದು ಹೃದಯದ ಆರೋಗ್ಯಕ್ಕೆ ಅತ್ಯಂತ ಅವಶ್ಯಕ.
ಸ್ಥಿರವಾದ ನಿದ್ರೆಯ ಲಯವು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ನಾಳಗಳ ಒಳಪದರವನ್ನು ಹಾನಿ ಮಾಡುವ ಒತ್ತಡದ ಹಾರ್ಮೋನ್ ಆಗಿದೆ, ಹೀಗಾಗಿ ಅಪಧಮನಿಗಳಿಗೆ ರಕ್ಷಣೆ ನೀಡುತ್ತದೆ.
ವೇಗದ ಜೀವನದಲ್ಲಿ ಒತ್ತಡ ಅನಿವಾರ್ಯವಾದರೂ, ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯ. ಉಸಿರಾಟದ ವ್ಯಾಯಾಮಗಳು, ಧ್ಯಾನ ಅಥವಾ ದೈನಂದಿನ ನಡಿಗೆಯಂತಹ ಉದ್ದೇಶಪೂರ್ವಕ ಒತ್ತಡ ನಿರ್ವಹಣಾ ತಂತ್ರಗಳನ್ನು ಡಾ. ಭೋಜ್ರಾಜ್ ಶಿಫಾರಸು ಮಾಡುತ್ತಾರೆ. ಇವು ನರಮಂಡಲವನ್ನು ಶಾಂತಗೊಳಿಸುವುದಲ್ಲದೆ, ನಿಮ್ಮ ಅಪಧಮನಿಗಳ ಆರೋಗ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಂಬಲಿಸುತ್ತವೆ.
ಈ ನಾಲ್ಕು ಸರಳ ಆದರೆ ಪ್ರಬಲ ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ನೀವು ನಿಮ್ಮ ಹೃದಯವನ್ನು ಸಕ್ರಿಯವಾಗಿ ರಕ್ಷಿಸಿಕೊಳ್ಳಬಹುದು, ಯಾವುದೇ ಔಷಧಿಗಳಿಲ್ಲದೆ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಡಾ. ಭೋಜ್ರಾಜ್ ಹೇಳುತ್ತಾರೆ.
September 10, 2025 3:55 PM IST
