ಇತ್ತೀಚೆಗೆ ಕೇರಳದ ಯುವಕ ರೈತರ ತರಕಾರಿ, ಹಣ್ಣಿನ ಬೆಳೆಗಳನ್ನು ಕೊಳೆಯದೇ ನೋಡಿಕೊಳ್ಳಲು ಘಟಕವೊಂದನ್ನು ಸ್ಥಾಪಿಸಿ, ಅದರಿಂದಲೇ 25 ಲಕ್ಷ ಆದಾಯ ಬರುವ ಒಂದು ಸ್ಟಾರ್ಟ್ಅಪ್ ಅನ್ನು ಆರಂಭಿಸಿರುವ ಕಥೆಯನ್ನು ನೀವೆಲ್ಲಾ ಕೇಳಿರಬಹುದು. ಇದೇ ರೀತಿಯ ಸಾಧನೆಯನ್ನು ಇಲ್ಲೊಬ್ಬಳು ಬಾಲಕಿ ಮಾಡಿ ತೋರಿಸಿದ್ದಾಳೆ.
ಈಕೆ ಹೆಸರು ಕೃಪಾಲಿ ಸುನಿಲ್.. ಹತ್ತನೇ ತರಗತಿಯ ವಿದ್ಯಾರ್ಥಿನಿ. ಈಕೆ ತಾಯಿಗೆ ತುಂಬಾ ಬೆನ್ನು ನೋವು. ಈ ಆರೋಗ್ಯ ಸಮಸ್ಯೆಯಿಂದಾಗಿ ಭಾರದ ವಸ್ತುಗಳನ್ನು ಎತ್ತುವುದು, ಮನೆ ಕೆಲಸ ಮಾಡೋದು ಈಕೆಯ ತಾಯಿಗೆ ದೊಡ್ಡ ವಿಚಾರವಾಗಿತ್ತು.
ತಾಯಿ ದಿನಾ ಬೆನ್ನು ನೋವು ಮತ್ತು ಮನೆ ಕೆಲಸ ಮಾಡಲು ಹೆಣಗಾಡುತ್ತಿರುವುದನ್ನು ನೋಡಿದ ಕೃಪಾಲಿ ತನ್ನ ತಾಯಿಗೆ ಸಹಾಯ ಮಾಡಲು ಒಂದು ಸಾಧನವನ್ನು ವಿನ್ಯಾಸಗೊಳಿಸಿದಳು.
ಈಕೆಯ ಈ ಕೆಲಸ ಈಗ ಕೃಪಾಲಿಗೆ ವಿಶ್ವ ವಿಖ್ಯಾತಿಯನ್ನು ನೀಡಿದ್ದು, ಜಪಾನ್ಗೆ ಹೋಗುವ ಅವಕಾಶವನ್ನು ಕೂಡ ತುಂದು ಕೊಟ್ಟಿತು.
ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಕೃಪಾಲಿ, ಭಾರವಾದ ವಸ್ತುಗಳನ್ನು ಎತ್ತುವಲ್ಲಿ ಸಹಾಯ ಮಾಡುವ ಪೋರ್ಟಬಲ್ ಎಲಿವೇಟಿಂಗ್ ಸಾಧನವನ್ನು ರಚಿಸಿದ್ದಾಳೆ.
ಪ್ರತಿ ಆವಿಷ್ಕಾರದ ಹಿಂದೆ ಕಾರಣ, ಅವಶ್ಯಕತೆ ಇರುವಂತೆ ಕೃಪಾಲಿ ತನ್ನ ತಾಯಿಯ ಯೋಗಕ್ಷೇಮದ ಕಾರಣವಾಗಿ ಈ ಸಾಧನ ಕಂಡು ಹಿಡಿದಳು.
ಈ ಸಾಧನ ಅವಳ ತಾಯಿಗೆ ಮಾತ್ರವಲ್ಲದೇ, ಅದರ ಪ್ರಾಯೋಗಿಕತೆಗಾಗಿ ಗಮನ ಸೆಳೆಯಿದಿದೆ. ದೇಶ ಮಾತ್ರವಲ್ಲದೇ ದೇಶದ ಹೊರಗೂ ಸದ್ದು ಮಾಡಿದೆ.
ಜೂನ್ 15 ರಿಂದ 21 ರವರೆಗೆ ಜಪಾನ್ನಲ್ಲಿ ನಡೆದ ಸಕುರಾ ವಿಜ್ಞಾನ ಪ್ರೌಢಶಾಲಾ ಕಾರ್ಯಕ್ರಮದಲ್ಲಿ ಈ ಯಂತ್ರ ಸ್ಥಾನ ಗಳಿಸಿತು.
ಈ ಕಾರ್ಯಕ್ರಮದಲ್ಲಿ, ಕೃಪಾಲಿ ತನ್ನ ತಾಯಿಯ ಬೆನ್ನು ನೋವಿನ ಹೋರಾಟವು ಈ ಸಾಧನವನ್ನು ಕಂಡುಹಿಡಿಯಲು ಹೇಗೆ ಪ್ರೇರೇಪಿಸಿತು ಎಂಬುದರ ಕಥೆಯನ್ನು ಹಂಚಿಕೊಂಡಳು. ಈ ಸಣ್ಣ ವಯಸ್ಸಿನಲ್ಲಿಯೇ ಈಕೆಯ ಬುದ್ಧಿವಂತಿಕೆ ನೋಡಿ ಎಲ್ಲರೂ ಚಪ್ಪಾಳೆ ತಟ್ಟಿ ವಿದ್ಯಾರ್ಥಿನಿಯನ್ನು ಶ್ಲಾಘಿಸಿದರು.
ಇನ್ಸ್ಪೈರ್ ಮಾನಕ್ ಪ್ರದರ್ಶನದ 11ನೇ ಆವೃತ್ತಿಯಲ್ಲಿ ಭಾಗವಹಿಸುವ ಮೂಲಕ ಅವರು ಜಪಾನ್ ಕಾರ್ಯಕ್ರಮಕ್ಕೆ ಅರ್ಹತೆ ಪಡೆದರು. ಜಪಾನ್ಗೆ ಹೋಗಿದ್ದ 54 ಸದಸ್ಯರ ಭಾರತೀಯ ನಿಯೋಗದಲ್ಲಿ, ದೇಶಾದ್ಯಂತ ಕೇಂದ್ರೀಯ ವಿದ್ಯಾಲಯ ಶಾಲೆಗಳನ್ನು ಪ್ರತಿನಿಧಿಸಿದ ಏಕೈಕ ವಿದ್ಯಾರ್ಥಿನಿಯಾಗಿ ಕೃಪಾಲಿ ಹೆಗ್ಗಳಿಕೆ ಪಡೆದರು.
ಕೃಪಾಲಿ ಇಂಡಾಸ್ ಕಂಪನಿಯ ಜನರಲ್ ಮ್ಯಾನೇಜರ್ ಕಂಡೋತ್ನ ಪಿ ಸುನಿಲ್ ಕುಮಾರ್ ಮತ್ತು ವೆಲ್ಲೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ಧನ್ಯಾ ನಾರಾಯಣ್ ಅವರ ಪುತ್ರಿ. ಪೋಷಕರ ಜೊತೆಗೂಡಿ ಜಪಾನ್ಗೆ ತೆರಳಿ ಅಲ್ಲಿ ತಾನು ಕಂಡುಹಿಡಿದ ಸಾಧನದ ಕಾರ್ಯವೈಖರಿಯನ್ನು ಪ್ರದರ್ಶಿಸಿದರು.
June 30, 2025 10:51 PM IST
